ರಾಹುಲ್ ಗಾಂಧಿಗೆ ನರೇಂದ್ರ ಮೋದಿಯಿಂದ ಕಾಮನ್ ಸೆನ್ಸ್ ಪಾಠ!
ಜಾಮ್ ನಗರ (ಗುಜರಾತ್), ಮಾರ್ಚ್ 04 : "ಸ್ವಲ್ಪ ಸಾಮಾನ್ಯ ಜ್ಞಾನ ಉಪಯೋಗಿಸಿ. ನಾನು ಹೇಳಿದ್ದೇನೆಂದರೆ, ಏರ್ ಸ್ಟ್ರೈಕ್ ಮಾಡಿದ ಸಂದರ್ಭದಲ್ಲಿ ನಮ್ಮ ಬಳಿ ರಫೇಲ್ ಯುದ್ಧ ವಿಮಾನಗಳಿದ್ದರೆ ನಮ್ಮ ಫೈಟರ್ ಜೆಟ್ ಗಳು ಧರೆಗೆ ಉರುಳುತ್ತಿರಲಿಲ್ಲ ಮತ್ತು ವೈರಿಗಳಾರೂ ಬದುಕುಳಿಯುತ್ತಿರಲಿಲ್ಲ."
ಹೀಗೆಂದಿರುವ ಪ್ರಧಾನಿ ನರೇಂದ್ರ ಮೋದಿಯವರು, ಬಾಲಕೋಟ್ ನಲ್ಲಿ ಭಾರತೀಯ ವಾಯು ಸೇನೆ ನಡೆಸಿರುವ ದಾಳಿಯನ್ನು ಬೇರೆ ಯಾರೂ ಅಲ್ಲ ನರೇಂದ್ರ ಮೋದಿ ಮತ್ತು ಅವರ ಸರಕಾರದವರೇ ಪ್ರಶ್ನಿಸಿದ್ದಾರೆ, ಎಂದು ಟೀಕಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಗುಜರಾತ್ ನ ಜಾಮನಗರದಲ್ಲಿ 'ಕಾಮನ್ ಸೆನ್ಸ್' ಬಗ್ಗೆ ಪಾಠ ಮಾಡಿದ್ದಾರೆ.
ಬಾಲಕೋಟ್, ಚಾಕೋಟಿ ಮತ್ತು ಮುಜಫರಾಬಾದ್ ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯು ಸೇನೆ ಫೆಬ್ರವರಿ 26ರಂದು ದಾಳಿ ನಡೆಸಿದಾಗ, ನಮ್ಮ ಬಳಿ ರಫೇಲ್ ಯುದ್ಧ ವಿಮಾನಗಳಿದ್ದರೆ ನಮಗೆ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಿರುತ್ತಿತ್ತು ಎಂಬುದು ನನ್ನ ಮಾತಿನ ಅರ್ಥ. ಆದರೆ, ಮೋದಿಯವರೇ ಏರ್ ಸ್ಟ್ರೈಕ್ ಅನ್ನು ಪ್ರಶ್ನಿಸುತ್ತಿದ್ದಾರೆ ಎಂದು ಜನರನ್ನು ದಾರಿ ತಪ್ಪಿಸುತ್ತಿದೆ ಕಾಂಗ್ರೆಸ್ ಎಂದು ಮೋದಿ ವಾಗ್ದಾಳಿ ಮಾಡಿದರು.

ರಾಹುಲ್ ಅವರು ಮಾಡಿದ್ದ ಕಾಮೆಂಟ್ ಹೀಗಿದೆ : "ಪ್ರೀತಿಯ ಪ್ರಧಾನಿ, ನಿಮಗೆ ನಾಚಿಕೆಯಾಗುವುದಿಲ್ಲವೆ? 30,000 ಕೋಟಿ ರುಪಾಯಿ ಕದ್ದು ನಿಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ನೀಡಿದಿರಿ. ರಫೇಲ್ ವಿಮಾನ ತಡವಾಗಿ ಬರುತ್ತಿರುವುದಕ್ಕೆ ನೀವೇ ಕಾರಣ. ನಿಮ್ಮಿಂದಾಗಿಯೇ ವಿಂಗ್ ಕಮಾಂಡರ್ ಅಭಿನಂದನ್ ಅವರಂಥವರು ರಿಸ್ಕ್ ತೆಗೆದುಕೊಂಡು ಹಳೆಯ ವಿಮಾನ ಹಾರಿಸುತ್ತಿರುವುದು." ಇವರಿಬ್ಬರಲ್ಲಿ ಯಾರು ಮಾತಾಡುತ್ತಿರುವುದು ಸರಿ ಎಂಬುದನ್ನು ಓದುಗರೇ ಸುಲಭವಾಗಿ ಅರ್ಥೈಸಿಕೊಳ್ಳಬಹುದು.
ರಾಹುಲ್ ಗಾಂಧಿ ಅವರು ಹೇಳಿದ್ದನ್ನೇ ಗಿಳಿಪಾಠ ಒಪ್ಪಿಸಿದಂತೆ ಕಾಂಗ್ರೆಸ್ ನಾಯಕರನೇಕರು, ಬಾಲಕೋಟ್ ನಲ್ಲಿ ಭಾರತೀಯ ವಾಯು ಸೇನೆ ನಡೆಸಿದ ಏರ್ ಸ್ಟ್ರೈಕ್ ಅನ್ನೇ ಪ್ರಧಾನಿ ನರೇಂದ್ರ ಮೋದಿಯವರು ಪ್ರಶ್ನಿಸಿದರು ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ ಮತ್ತು ಬಾಲಕೋಟ್, ಚಾಕೋಟಿ ಮತ್ತು ಮುಜಫರಾಬಾದ್ ನಲ್ಲಿ ಸತ್ತ ಉಗ್ರರ ಲೆಕ್ಕಕೊಡಿ, ದಾಳಿ ನಡೆಸಿದ್ದಕ್ಕೆ ಸಾಕ್ಷ್ಯ ಕೊಡಿ ಎಂದು ಒಬ್ಬರಹಿಂದೆ ಒಬ್ಬರಂತೆ ಕೇಂದ್ರ ಸರಕಾರಕ್ಕೆ ದುಂಬಾಲು ಬಿದ್ದಿದ್ದಾರೆ.












Click it and Unblock the Notifications