ದೇಶದ ನ್ಯಾಯಾಂಗ ಕರ್ತವ್ಯ ನಿರ್ವಹಣೆಗೆ ಪ್ರಧಾನಿ ಮೋದಿ ಶ್ಲಾಘನೆ
ಅಹಮದಾಬಾದ್, ಫೆಬ್ರುವರಿ 06: ಜನರ ಹಕ್ಕುಗಳ ರಕ್ಷಣೆಯಲ್ಲಿ, ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಹಾಗೂ ರಾಷ್ಟ್ರದ ಹಿತಾಸಕ್ತಿಗೆ ಆದ್ಯತೆ ನೀಡಬೇಕಾದ ಸಂದರ್ಭಗಳಲ್ಲಿ ದೇಶದ ನ್ಯಾಯಾಂಗವು ತನ್ನ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಗುಜರಾತ್ ಹೈ ಕೋರ್ಟ್ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ವರ್ಚುಯಲ್ ಆಗಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದ ಮೋದಿ, "ಕೊರೊನಾದಂಥ ಬಿಕ್ಕಟ್ಟಿನ ಸಮಯದಲ್ಲಿಯೂ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣೆ ನಡೆಸಿದೆ. ಇದು ನಮಗೆ ಹೆಮ್ಮೆಯ ಸಂಗತಿ" ಎಂದು ಹೇಳಿದರು.
ನಮ್ಮ ರೈತರಿಂದ ಯಾರೂ ಭೂಮಿ ಕಸಿದುಕೊಳ್ಳಲು ಸಾಧ್ಯವಿಲ್ಲ; ಮೋದಿ
"ನಮ್ಮ ಸಂವಿಧಾನದ ಧ್ಯೇಯಗಳನ್ನು ಎತ್ತಿಹಿಡಿಯವಲ್ಲಿ ನ್ಯಾಯಾಂಗ ದೃಢ ನಿಶ್ಚಯದಿಂದ ಕೆಲಸ ಮಾಡಿದೆ ಎಂದು ಪ್ರತಿ ದೇಶಿವಾಸಿಯೂ ಹೇಳಬಲ್ಲ. ತನ್ನ ಸಕಾರಾತ್ಮಕ ದೃಷ್ಟಿಕೋನದಿಂದ ನ್ಯಾಯಾಂಗ ಸಂವಿಧಾನವನ್ನು ಬಲಪಡಿಸಿದೆ" ಎಂದರು.
"ಶತಮಾನಗಳಿಂದಲೂ ಕಾನೂನು ನಾಗರಿಕತೆಯ ಆಧಾರವಾಗಿದೆ. ನಮ್ಮ ಪ್ರಾಚೀನ ಗ್ರಂಥಗಳು ಹೇಳುವಂತೆ ಉತ್ತಮ ಆಡಳಿತದ ಮೂಲ ನ್ಯಾಯ ಒದಗಿಸುವುದರಲ್ಲಿದೆ. ದೇಶದಲ್ಲಿ ವಿಶ್ವ ದರ್ಜೆಯ ನ್ಯಾಯ ವ್ಯವಸ್ಥೆ ಕಟ್ಟುವ ನಿಟ್ಟಿನಲ್ಲಿ ನಮ್ಮ ನ್ಯಾಯಾಂಗ ಕೆಲಸ ಮಾಡಬೇಕು" ಎಂದು ಸಲಹೆ ನೀಡಿದರು.