ಮೋದಿ, ಅಮಿತ್ ಶಾ ಕಟ್ಟಾ ವಿರೋಧಿಯಿಂದ ಬಿಜೆಪಿ ಗುಣಗಾನ
ಅಹಮದಾಬಾದ್, ಏಪ್ರಿಲ್ 14: ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಟ್ಟಾ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ, ಪಾಟೀದಾರ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಅವರ ಹೇಳಿಕೆ, ಗುಜರಾತ್ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.
ಎರಡು ದಿನಗಳ ಹಿಂದೆ, ಮೆಹ್ಸಾನಾ ದಂಗೆ ಪ್ರಕರಣದಲ್ಲಿ ಗುಜರಾತ್ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಹಾರ್ದಿಕ್ ಪಟೇಲ್ ಅವರನ್ನು ದೋಷಿ ಎಂದು ನೀಡಲಾಗಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಮಂಗಳವಾರ (ಏ 12) ತಡೆ ನೀಡಿತ್ತು.
ಗುಜರಾತ್ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ಗೆ ಸಿಹಿಸುದ್ದಿ ಕೊಟ್ಟ ಸುಪ್ರೀಂಕೋರ್ಟ್
ಪಾಟೀದಾರ್ ಸಮುದಾಯದ ಪ್ರಮುಖ ಮುಖಂಡ ಮತ್ತು ಖೋಲ್ಧಾಮ್ ಟ್ರಸ್ಟ್ ಅಧ್ಯಕ್ಷ ನರೇಶ್ ಪಟೇಲ್ ಅವರನ್ನು ಕಾಂಗ್ರೆಸ್ ಪಕ್ಷವು ಅವಮಾನಿಸುತ್ತಿದೆ ಎಂದು ಹಾರ್ದಿಕ್ ಪಟೇಲ್ ತಮ್ಮದೇ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. "ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿದ್ದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನನ್ನನ್ನು ಪರಿಗಣಿಸುತ್ತಲೇ ಇಲ್ಲ"ಎಂದು ಹಾರ್ದಿಕ್ ಬೇಸರ ವ್ಯಕ್ತ ಪಡಿಸಿದ್ದಾರೆ.
"2017ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪಾಟೀದಾರ್ ಸಮುದಾಯದ ಬೆಂಬಲ ನೀಡಿದ್ದರಿಂದ, ಪಕ್ಷ ಹೆಚ್ಚಿನ ಸ್ಥಾನವನ್ನು ಗೆಲ್ಲಲು ಸಾಧ್ಯವಾಯಿತು. ಈಗ ಅದೇ ಪಾಟೀದಾರ್ ಮತ್ತು ನರೇಶ್ ಪಟೇಲ್ ಅವರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ನರೇಶ್ ಪಟೇಲ್ ಅವರನ್ನು ರಾಜಕೀಯಕ್ಕೆ ಸೇರಿಸಿಕೊಳ್ಳುವಂತೆ ನಾವು ತುಂಬಾ ಒತ್ತಡವನ್ನು ಹಾಕಿದ್ದೆವು. ಆದರೆ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಯಾಕೆ ಇಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದೆ"ಎಂದು ಹಾರ್ದಿಕ್ ಪಟೇಲ್ ತಮ್ಮದೇ ಪಕ್ಷದ ವಿರುದ್ದ ಕಿಡಿಕಾರಿದ್ದಾರೆ.
"ರಾಜ್ಯದಲ್ಲಿ ಬಿಜೆಪಿ ಉತ್ತಮ ಸರಕಾರವನ್ನು ನೀಡುತ್ತಿದೆ, ಕೆಲವೊಂದು ಸರಕಾರೀ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ. ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಖಂಡಿತ ಸ್ಪರ್ಧಿಸುತ್ತೇನೆ. ಆದರೆ, ಯಾವ ಕ್ಷೇತ್ರದಿಂದ ಎಂದು ಈಗ ಹೇಳಲು ಸಾಧ್ಯವಿಲ್ಲ"ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಪಟೇಲ್ ಅವರ ಈ ಹೇಳಿಕೆಯಿಂದ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆಯೇ ಎನ್ನುವ ಅನುಮಾನ ಎದುರಾಗುತ್ತಿದೆ ಎಂದು ಸ್ಥಳೀಯ ಮುಖಂಡರು ಪ್ರಶ್ನೆಯನ್ನು ಎತ್ತಿದ್ದಾರೆ. ಪಾಟೀದಾರ್ ಸಮುದಾಯದ ಹೋರಾಟಕ್ಕೆ ಹಾರ್ದಿಕ್ ಪಟೇಲ್ ಹೊಸ ಆಯಾಮವನ್ನು ನೀಡಿದ್ದರು. ಜೊತೆಗೆ, ಆ ವೇಳೆ ಬಿಜೆಪಿಗೆ ಭಾರೀ ತಿರುಗೇಟನ್ನು ನೀಡಿದ್ದರು.