ಮೋದಿಯನ್ನು ಸಿಂಹ ಎನ್ನುವ ಜೋಶ್ ನಲ್ಲಿ ರಾಹುಲ್ 'ಪಪ್ಪಿ' ಎಂದ ಸಚಿವ
ಅಹಮದಾಬಾದ್, ಏಪ್ರಿಲ್ 21: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಎಲ್ಲಾ ಪಕ್ಷದವರು ಪೈಪೋಟಿ ನಡೆಸುವಂತೆ ಕಾಣುತ್ತಿದೆ. ಗುಜರಾತ್ನ ಬುಡಕಟ್ಟು ಜನಾಂಗದ ಕಲ್ಯಾಣ ಇಲಾಖೆ ಸಚಿವರು, ಪ್ರಧಾನಿ ಮೋದಿ ಅವರನ್ನು ಸಿಂಹ ಎಂದು ಹೊಗಳುವ ಜೋಶ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು 'ನಾಯಿ' ಎಂದು ಕರೆದಿದ್ದಾರೀ.
ಭಾರತೀಯ ಜನತಾ ಪಕ್ಷದ ಸಚಿವ ಗಣ್ಪತ್ ವಾಸಾವಾ ಅವರು ಬಿಜೆಪಿ ಅಭ್ಯರ್ಥಿ ಪರ ನರ್ಮದಾ ಜಿಲ್ಲೆಯಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದ ವೇಳೆ, ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಡುವೆ ಹೋಲಿಕೆ ಮಾಡುವಾಗ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ 'ಮೋದಿ'
'ಮೋದಿಯವರು ನಿಂತಿದ್ದರೆ ಗುಜರಾತ್ನ ಸಿಂಹ ನಿಂತಿರುವಂತೆ ಭಾಸವಾಗುತ್ತದೆ. ಅದೇ ರಾಹುಲ್ ಗಾಂಧಿಯನ್ನು ನೋಡಿದರೆ ನಾಯಿಯೊಂದರ ಮರಿಯಂತೆ ಕಾಣುತ್ತದೆ. ಈ ನಾಯಿಮರಿಯು ಪಾಕಿಸ್ತಾನ ತಿಂಡಿ ಕೊಟ್ಟರೆ ಅಲ್ಲಿಗೆ ಹೋಗುತ್ತದೆ, ಚೀನಾ ರೊಟ್ಟಿ ಕೊಟ್ಟರೆ ಅಲ್ಲಿಗೆ ತೆರಳುತ್ತದೆ. ಒಟ್ಟಿನಲ್ಲಿ ಹೊಟ್ಟೆಗೆ ಯಾರು ಕೊಡುತ್ತಾರೋ ಅವರ ಎದುರು ಬಾಲ ಅಲ್ಲಾಡಿಸುತ್ತ ನಿಲ್ಲುತ್ತದೆ' ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯನ್ನು ಶಿವನಿಗೆ ಹೋಲಿಸಿದ್ದಕ್ಕೆ ವ್ಯಂಗ್ಯವಾಡಿದ್ದರು, ರಾಹುಲ್ ಶಿವನಂತೆ ವಿಷ ಕುಡಿದು ಬದುಕಿದರೆ ಮಾತ್ರೆ ನಾವು ಈ ಹೋಲಿಕೆಯನ್ನು ಒಪ್ಪುತ್ತೇವೆ. ರಾಹುಲ್ 500 ಗ್ರಾಂ ವಿಷ ಸೇವಿಸಲಿ ಆಗ ಕಾಂಗ್ರೆಸ್ ಕಾರ್ಯಕರ್ತರ ಮಾತು ಒಪ್ಪುತ್ತೇನೆ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಗುಜರಾತಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.