Get Updates
Get notified of breaking news, exclusive insights, and must-see stories!

ಗುಜರಾತ್ ಗಲಭೆ 2002: ತೀಸ್ತಾ, ಭಟ್, ಶ್ರೀಕುಮಾರ್ ವಿರುದ್ಧ ತನಿಖೆಗೆ ಎಸ್‌ಐಟಿ ರಚನೆ

ಅಹ್ಮದಾಬಾದ್, ಜೂನ್ 27: ಇಪ್ಪತ್ತು ವರ್ಷಗಳ ಹಿಂದಿನ ಗುಜರಾತ್ ಗಲಭೆ ಘಟನೆಗಳಲ್ಲಿ ಕ್ರಿಮಿನಲ್ ಸಂಚು, ಫೋರ್ಜರಿ ಮತ್ತಿತರ ಕೃತ್ಯ ಎಸಗಿದ ಆರೋಪಗಳನ್ನು ಎದುರಿಸುತ್ತಿರುವ ನಿವೃತ್ತ ಡಿಜಿಪಿ ಆರ್ ಬಿ ಶ್ರೀಕುಮಾರ್, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ತನಿಖೆ ನಡೆಸಲು ಎಸ್‌ಐಟಿ ತಂಡ ರಚನೆಯಾಗಿದೆ.

ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಡಿಐಜಿ ದೀಪನ್ ಭದ್ರನ್ ನೇತೃತ್ವದಲ್ಲಿ ರಚನೆಯಾಗಿರುವ ವಿಶೇಷ ತನಿಖಾ ತಂಡದಲ್ಲಿ ಆರು ಸದಸ್ಯರಿದ್ದಾರೆ. ಗುಜರಾತ್ ಸರಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಎಸ್‌ಐಟಿಯನ್ನು ರಚಿಸಿರುವುದು ತಿಳಿದುಬಂದಿದೆ.

ಮೊನ್ನೆಯಷ್ಟೇ ಗುಜರಾತ್ ಗಲಭೆ ಸಂಬಂಧ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸುತ್ತಾ ನೀಡಿದ ತೀರ್ಪಿನಲ್ಲಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿತ್ತು.

ನರೇಂದ್ರ ಮೋದಿ 2002ರಲ್ಲಿ ಗುಜರಾತ್ ಗಲಭೆ ಘಟನೆ ಆದಾಗ ಆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿದ್ದರು. ಗಲಭೆಯಲ್ಲಿ ನರೇಂದ್ರ ಮೋದಿ ಮತ್ತವರ ಸರಕಾರಿ ಯಂತ್ರಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವು. ಗಲಭೆಯನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಜಾಕಿಯಾ ಜಾಫ್ರಿ ನೀಡಿದ್ದ ದೂರನ್ನು ಸುಪ್ರೀಂ ಕೋರ್ಟ್ ಅಲ್ಲಗಳೆಯಿತು. ಮೋದಿ ಮತ್ತವರ ಸರಕಾರದಿಂದ ದೋಷವಾಗಿದೆ ಎನ್ನುವುದಕ್ಕೆ ಸ್ಪಷ್ಟ ಆಧಾರ ಇಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ 2012ರಲ್ಲಿ ಸ್ಥಳೀಯ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿತ್ತು.

ಹಾಗೆಯೇ, ಗಲಭೆ ಘಟನೆಗಳಲ್ಲಿ ಶ್ರೀಕುಮಾರ್, ತೀಸ್ತಾ ಸೆಟಲ್ವಾಡ್ ಮತ್ತು ಸಂಜೀವ್ ಭಟ್ ಅವರ ಸಂಚು ಇರಬಹುದು. ಅದನ್ನು ತನಿಖೆಗೆ ಒಳಪಡಿಸಬೇಕು ಎಂದೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆದೇಶ ಮಾಡಿದೆ.

 ಮೂವರ ಬಂಧನ:

ಮೂವರ ಬಂಧನ:

ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ತೀಸ್ತಾ ಸೆಟಲ್ವಾಡ್, ಸಂಜೀವ್ ಭಟ್ ಮತ್ತು ಶ್ರೀಕುಮಾರ್ ಈ ಮೂವರನ್ನು ಬಂಧಿಸಲಾಗಿದೆ. ಮುಂಬೈನ ತಮ್ಮ ನಿವಾಸದಲ್ಲಿದ್ದ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿ ಅಹ್ಮದಾಬಾದ್‌ಗೆ ಕರೆದೊಯ್ದರು. ಶ್ರೀಕುಮಾರ್ ಅವರನ್ನೂ ಬಂಧಿಸಿ ಶನಿವಾರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ ಬಳಿಕ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಸಂಜೀವ್ ಭಟ್ 1996ರ ಡ್ರಗ್ಸ್ ಪ್ರಕರಣವೊಂದರಲ್ಲಿ ಗುಜರಾತ್‌ನ ಬನಸ್ಕಾಂತದ ಪಾಲಂಪುರ್ ಜೈಲಿನಲ್ಲಿ ಇದ್ದಾರೆ. ಅಲ್ಲಿಂದ ಎಟಿಎಸ್ ಪೊಲೀಸರು ಸಂಜೀವ್ ಭಟ್‌ರನ್ನು ಕಸ್ಟಡಿಗೆ ಪಡೆಯಲಾಗುತ್ತಿದೆ. ಪಾಲಂಪುರ್ ಜೈಲಿನಿಂದ ಅಹ್ಮದಾಬಾದ್‌ನ ಡಿಸಿಪಿ ಕಚೇರಿಗೆ ಟ್ರಾನ್ಸ್‌ಫರ್ ವಾರಂಟ್ ಮೇಲೆ ಕರೆತರಲು ಒಂದೆರಡು ದಿನ ಬೇಕಾಗಬಹುದು.

 ಗುಜರಾತ್ ಗಲಭೆ ಘಟನೆಯಲ್ಲಿ ಮೂವರ ಪಾತ್ರವೇನು?

ಗುಜರಾತ್ ಗಲಭೆ ಘಟನೆಯಲ್ಲಿ ಮೂವರ ಪಾತ್ರವೇನು?

2002ರಲ್ಲಿ ಗೋಧ್ರಾ ರೈಲು ಬೆಂಕಿ ದುರಂತ ಘಟನೆ ನಡೆದ ಬೆನ್ನಲ್ಲೇ ಗುಜರಾತ್‌ನಾದ್ಯಂತ ಗಲಭೆಗಳು ಆರಂಭಗೊಂಡು ಎರಡು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ತೀಸ್ತಾ ಸೆಟಲ್ವಾಡ್ ವಕೀಲೆಯಾದರೆ ಸಂಜೀವ್ ಭಟ್ ಮತ್ತು ಶ್ರೀಕುಮಾರ್ ಇಬ್ಬರೂ ಪೊಲೀಸ್ ಅಧಿಕಾರಿಗಳಾಗಿದ್ದರು. ಗುಜರಾತ್ ಗಲಭೆ ನಡೆದಾಗ ಸರಕಾರದ ವಿರುದ್ಧ ಈ ಮೂವರು ಸೇರಿ ಸುಳ್ಳು ಆರೋಪ ಮತ್ತು ದಾಖಲೆಗಳನ್ನು ಸೃಷ್ಟಿಸಿದರೆಂಬ ಆರೋಪ ಇದೆ.

ತೀಸ್ತಾ ಸೆಟಲ್ವಾಡ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿದ್ದರು. ಪೊಲೀಸ್ ಠಾಣೆಗಳಲ್ಲಿ ದೂರು ನೀಡುವುದು, ನ್ಯಾಯಾಲಯಗಳಲ್ಲಿ ದಾವೆ ಹೂಡುವ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಇನ್ನು, ಪೊಲೀಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಸುಪ್ರೀಂ ಕೋರ್ಟ್‌ನಲ್ಲಿ ನರೇಂದ್ರ ಮೋದಿ ವಿರುದ್ಧ ಅಫಿಡವಿಟ್ ಸಲ್ಲಿಸುತ್ತಿದ್ದರು. ಮತ್ತೊಬ್ಬ ಅಧಿಕಾರಿ ಶ್ರೀಕುಮಾರ್ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸುತ್ತಿದ್ದರು ಎಂಬುದು ಪ್ರಮುಖ ಆರೋಪಗಳು.

ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣ್ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸಿದ ಆರೋಪವೂ ಶ್ರೀಕುಮಾರ್ ಮೇಲಿದೆ.

 ಎಸ್‌ಐಟಿ ತಂಡ:

ಎಸ್‌ಐಟಿ ತಂಡ:

ಡಿಐಜಿ ದೀಪನ್ ಭದ್ರನ್ ನೇತೃತ್ವದ ಎಸ್‌ಐಟಿ ತಂಡದಲ್ಲಿ ಡಿಸಿಪಿ (ಕ್ರೈಂ) ಚೈತನ್ಯ ಮಾಂಡಲೀಕ್, ಎಟಿಎಸ್ ಎಸ್‌ಪಿ ಸುನೀಲ್ ಜೋಶಿ, ಡಿಎಸ್‌ಪಿ ಬಿ.ಸಿ. ಸೋಲಂಕಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪಿ ಸಿ ವಾಘೇಲ ಮತ್ತು ಎ ಡಿ ಪಾರ್ಮರ್ ಮತ್ತು ಮಹಿಳಾ ಇನ್ಸ್‌ಪೆಕ್ಟರ್ ಎಚ್ ವಿ ರಾವಲ್ ಅವರು ಇದ್ದಾರೆ. ವಿಶೇಷ ಕಾರ್ಯಾಚರಣೆ ಗುಂಪಿನ ಡಿಎಸ್‌ಪಿ ಆಗಿರುವ ಬಿ ಸಿ ಸೋಲಂಕಿ ಅವರು ತನಿಖಾಧಿಕಾರಿಯಾಗಿರುತ್ತಾರೆ.

"ಸರಕಾರಿ ದಾಖಲೆಗಳನ್ನು ಫೋರ್ಜರಿ ಮಾಡಿದ್ದು, ಈ ನಕಲಿ ದಾಖಲೆ ಸೃಷ್ಟಿಸಿ ಸಲ್ಲಿಸಿದ್ದು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿದ್ದು ಇವರ ಮೇಲಿರುವ ಆರೋಪಗಳಾಗಿವೆ. ಈ ಬಂಧಿತ ಆರೋಪಿಗಳು ಈವರೆಗೂ ವಿಚಾರಣೆಗೆ ಸಹಕರಿಸುತ್ತಿಲ್ಲ. ಎಲ್ಲಾ ಆಯಾಮಗಳಿಂದಲೂ ನಾವು ತನಿಖೆ ನಡೆಸುತ್ತಿದ್ದೇವೆ. ಇಬ್ಬರು ಮಾಜಿ ಐಪಿಎಸ್ ಅಧಿಕಾರಿಗಳು ಗುಜರಾತ್ ಗಲಭೆ ಘಟನೆಯಲ್ಲಿ ತನಿಖಾ ಆಯೋಗಗಳು, ನ್ಯಾಯಾಲಯಗಳು ಹಾಗು ಎಸ್‌ಐಟಿಗೆ ಸಲ್ಲಿಸಿದ್ದ ಅಫಿಡವಿಟ್ ಮತ್ತು ದಾಖಲೆಗಳನ್ನು ಕಲೆಹಾಕುತ್ತಿದ್ದೇವೆ. ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ. ಸಂಚಿನಲ್ಲಿ ಈ ಮೂವರ ಜೊತೆ ಇನ್ನೂ ಹೆಚ್ಚಿನ ಮಂದಿ ಇರುವ ಶಂಕೆ ಇದೆ," ಎಂದು ಚೈತನ್ಯ ಮಾಂಡಲೀಕ್ ಹೇಳಿದ್ದಾರೆ.

 ಯಾರು ಈ ತೀಸ್ತಾ?

ಯಾರು ಈ ತೀಸ್ತಾ?

ಗುಜರಾತ್ ಮೂಲದ 60 ವರ್ಷದ ತೀಸ್ತಾ ಸೆಟಲ್ವಾಡ್ ಮುಂಬೈನಲ್ಲಿ ವಕೀಲರಾಗಿದ್ದ ಅತುಲ್ ಸೆಟಲ್ವಾಡ್ ಅವರ ಮಗಳು. ತೀಸ್ತಾ ಅಜ್ಜ ಎಂ ಸಿ ಸೆಟಲ್ವಾಡ್ ಅವರು ಭಾರತದ ಮೊದಲ ಅಟಾರ್ನಿ ಜನರಲ್. ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಇಂಡಿಯನ್ ಎಕ್ಸ್‌ಪ್ರೆಸ್, ದಿ ಡೈಲಿ, ಬ್ಯುಸಿನೆಸ್ ಇಂಡಿಯಾ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.

2002ರ ಫೆಬ್ರವರಿಯಲ್ಲಿ ಗುಜರಾತ್ ಗಲಭೆಗಳು ಆರಂಭಗೊಂಡಾಗ ತೀಸ್ತಾ ಸೆಟಲ್ವಾಡ್ ಹಾಗೂ ಇನ್ನೂ ಅನೇಕರು ಸೇರಿಕೊಂಡು ಏಪ್ರಿಲ್ ತಿಂಗಳಿನಲ್ಲಿ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಎಂಬ ಎನ್‌ಜಿಒ ಸ್ಥಾಪಿಸಿದರು. ಜಾವೇದ್ ಅಖ್ತರ್, ವಿಜಯ್ ತೆಂಡೂಲ್ಕರ್, ರಾಹುಲ್ ಬೋಸ್ ಮೊದಲಾದ ಗಣ್ಯರು ಈ ಎನ್‌ಜಿಒದ ಸಂಸ್ಥಾಪಕರಲ್ಲಿ ಸೇರಿದ್ದಾರೆ.

ಗುಜರಾತ್ ಗಲಭೆಯ ಸಂತ್ರಸ್ತರಿಗೆ, ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಈ ಎನ್‌ಜಿಒ ಆರಂಭಿಸಲಾಯಿತು. ಗಲಭೆ ಘಟನೆಗಳು ನಡೆದ ಸ್ಥಳದ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ಕೊಡಲಾಯಿತು. ಆದರೆ, ಇವರು ದುರುದ್ದೇಶದಿಂದ ಪೊಲೀಸರಲ್ಲಿ ಸುಳ್ಳು ದೂರು ಹಾಕುತ್ತಿದ್ದರೆಂಬುದು ಆರೋಪ ಇದೆ.

(ಒನ್ಇಂಡಿಯಾ ಸುದ್ದಿ)

Recommended Video

      ಒಳ್ಳೆ ಪ್ರದರ್ಶನ ಕೊಡು , ಆಮೇಲೆ ನೋಡೋನ ! ಖಡಕ್ ಎಚ್ಚರಿಕೆ ಕೊಟ್ಟ ಬಿಸಿಸಿಐ | *Cricket | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+