Video: ಅಹಮದಾಬಾದ್ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅನ್ನು ತಡೆದು ನಿಲ್ಲಿಸಿದ ಪೊಲೀಸರು!
ಅಹ್ಮದಾಬಾದ್, ಸೆಪ್ಟೆಂಬರ್ 13: ಅಹಮದಾಬಾದ್ನಲ್ಲಿ ಆಟೋ ಚಾಲಕನ ಆಹ್ವಾನದ ಮೇರೆಗೆ ಆತನ ಮನೆಗೆ ಊಟಕ್ಕೆ ಹೊರಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನ್ನು ಗುಜರಾತ್ ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ಆಮ್ ಆದ್ಮಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನ್ನು ಭದ್ರತೆ ಕಾರಣಕ್ಕಾಗಿ ಪೊಲೀಸರು ತಡೆದಿರುವ ಘಟನೆ ನಡೆದಿದೆ. ಇದೇ ವೇಳೆ ಪೊಲೀಸರೊಂದಿಗೆ ಅವರು, ವಾಗ್ವಾದಕ್ಕೆ ಇಳಿದಿದ್ದು, ಈ ಸಂಬಂಧ ಸ್ವತಃ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಊಟಕ್ಕೆ ಕರೆದ ಆಟೋ ಚಾಲಕ, ತಕ್ಷಣ ಒಪ್ಪಿಕೊಂಡ ಅರವಿಂದ್ ಕೇಜ್ರಿವಾಲ್; ವಿಡಿಯೋ ನೋಡಿ
ಎಎಪಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ಇಬ್ಬರು ಪಕ್ಷದ ಸಹಚರರೊಂದಿಗೆ ತೆರಳುತ್ತಿದ್ದ ಕೇಜ್ರಿವಾಲ್ ಅನ್ನು ಕರ್ತವ್ಯದಲ್ಲಿದ್ದ ಅಧಿಕಾರಿ ತಡೆದಿದ್ದಾರೆ. ಈ ವೇಳೆ "ಇದಕ್ಕಾಗಿಯೇ ಗುಜರಾತ್ನ ಜನರು ಅಸಂತುಷ್ಠರಾಗಿದ್ದಾರೆ. ಶಿಷ್ಟಾಚಾರಗಳನ್ನು ಉಲ್ಲೇಖಿಸಿ ನೀವು ಜನರ ಬಳಿಗೆ ಹೋಗುವುದನ್ನು ತಡೆಯುತ್ತಿದ್ದೀರಿ. ರಾಜ್ಯದ ನಾಯಕರು ಅವರ ಬಳಿಗೆ ಹೋಗುವುದಿಲ್ಲ. ಜನರನ್ನು ಭೇಟಿ ಮಾಡುವುದಕ್ಕೆ ಶಿಷ್ಟಾಚಾರವನ್ನು ಮುರಿಯುವಂತೆ ನಿಮ್ಮ ನಾಯಕರಿಗೂ ಹೇಳಿರಿ," ಎಂದು ಕೇಜ್ರಿವಾಲ್ ಹೇಳಿದ್ದಾರೆ.
|
ಪೊಲೀಸ್ ಭದ್ರತೆ ಬೇಕಾಗಿಲ್ಲ ಎಂದ ಕೇಜ್ರಿವಾಲ್
ಅಹಮದಾಬಾದ್ನಲ್ಲಿ ಆಟೋ ಚಾಲಕನ ನಿವಾಸಕ್ಕೆ ಆಮಂತ್ರಣದ ಮೇರೆಗೆ ಹೊರಟಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭದ್ರತೆ ಕಾರಣಕ್ಕೆ ಪೊಲೀಸರು ತಡೆದು ನಿಲ್ಲಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಸಿಎಂ, "ನೀವು ನೀಡುವ ಭದ್ರತೆ ನಮಗೆ ಬೇಕಾಗಿಲ್ಲ. ನಿಮ್ಮ ಭದ್ರತೆಯನ್ನು ದೂರದಲ್ಲಿ ಇಟ್ಟುಕೊಳ್ಳಿ. ನನ್ನನ್ನು ಭದ್ರತೆಗಾಗಿ ಏಕೆ ಒತ್ತಾಯಿಸುತ್ತಿದ್ದೀರಿ. ನೀವು ನಮ್ಮನ್ನು ಒತ್ತೆಯಾಳಾಗಿ ಇರಿಸಿದ್ದೀರಿ," ಎಂದು ಹೇಳಿದರು.
ಕೇಜ್ರಿವಾಲ್ ಅವರು ತಮ್ಮ ಭದ್ರತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ ನಂತರವೇ ಆಪ್ ನಾಯಕನು ರಿಕ್ಷಾದಲ್ಲಿ ಮುಂದೆ ಹೋಗುವುದಕ್ಕೆ ಅನುಮತಿ ನೀಡಲಾಯಿತು ಎಂದು ಜಂಟಿ ಪೊಲೀಸ್ ಕಮಿಷನರ್ ಆರ್ವಿ ಆಸಾರಿ ತಿಳಿಸಿದರು.
ಆಟೋ ಚಾಲಕನ ಕುಟುಂಬಕ್ಕೆ ಸಿಎಂ ಕೇಜ್ರಿವಾಲ್ ಆಹ್ವಾನ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಟೋ ಚಾಲಕನ ಮನೆಗೆ ಊಟಕ್ಕೆ ಹೋಗಿದ್ದರು. ಅವರ ಆತಿಥ್ಯವನ್ನು ಸ್ವೀಕರಿಸಿದ ಸಿಎಂ, ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಆಟೋ ಚಾಲಕನ ಪತ್ನಿ ದೆಹಲಿಯಿಂದ ಬಂದವರು ಎಂದು ತಿಳಿದ ಕೇಜ್ರಿವಾಲ್, ಆತಿಥೇಯರ ಕುಟುಂಬವನ್ನು ದೆಹಲಿಗೆ ಆಗಮಿಸುವಂತೆ ಆಹ್ವಾನ ನೀಡಿದರು.
ಅರವಿಂದ್ ಕೇಜ್ರಿವಾಲ್ ನಡೆ ಬಗ್ಗೆ ಕೇಜ್ರಿವಾಲ್ ಹೇಳುವುದೇನು?
ಎಎಪಿ ವಿಡಿಯೋಗಳನ್ನು ಹಾಕಿದ ತಕ್ಷಣ, ಪೊಲೀಸರಿಗೆ ಎಎಪಿಗೆ ಕಳುಹಿಸಿದ ಪತ್ರವನ್ನು ಬಿಜೆಪಿಯ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಗುಜರಾತ್ ಭೇಟಿ ಸಂದರ್ಭದಲ್ಲಿ ಕೇಜ್ರಿವಾಲ್ ಮೇಲೆ ಹಿಂಸಾತ್ಮಕ ದಾಳಿ ನಡೆಯುವ ಬೆದರಿಕೆಯಿತ್ತು. "ಅರವಿಂದ್ ಕೇಜ್ರಿವಾಲ್ ರಿಗೆ ವಿಶೇಷ ಭದ್ರತೆಯನ್ನು ಒದಗಿಸುವಂತೆ ಸ್ವತಃ ಆಮ್ ಆದ್ಮಿ ಪಕ್ಷದವರೇ ಪೊಲೀಸರಿಗೆ ಪತ್ರವನ್ನು ಬರೆದಿದ್ದರು. ಅವರಿಗೆ ಹಿಂಸಾತ್ಮದ ದಾಳಿಯ ಬೆದರಿಕೆಯಿದ್ದ ಹಿನ್ನೆಲೆ ಈ ಕುರಿತು ಪತ್ರವನ್ನು ಬರೆಯಲಾಗಿತ್ತು. ದೆಹಲಿಯಲ್ಲಿ 32 ಸರ್ಕಾರಿ ವಾಹನಗಳನ್ನು ಓಡಿಸಿದ ಕೇಜ್ರಿವಾಲ್, ಈ ರೀತಿ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ," ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.
ಆಟೋ ಚಾಲಕನಿಂದ ದೆಹಲಿ ಮುಖ್ಯಮಂತ್ರಿಗೆ ಆಹ್ವಾನ
ಅಹಮದಾಬಾದ್ನಲ್ಲಿ ಆಟೋ ರಿಕ್ಷಾ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಆಟೋ ಚಾಲಕರೊಬ್ಬರು ತಮ್ಮ ಮನೆಗೆ ಊಟಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. "ನಾನು ನಿಮ್ಮ ದೊಡ್ಡ ಅಭಿಮಾನಿ. ಪಂಜಾಬಿನ ಆಟೋ ಚಾಲಕರೊಬ್ಬರ ಮನೆಯಲ್ಲಿ ನೀವು ಊಟ ಮಾಡಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ನೀವು ನಮ್ಮ ಮನೆಗೂ ಊಟಕ್ಕೆ ಬರಬಹುದೇ," ಎಂದು ಅಹಮದಾಬಾದ್ನ ಆಟೋ ಚಾಲಕ ವಿಕ್ರಮ್ ಲಾಲ್ತಾನಿ ಕೇಳಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಜ್ರಿವಾಲ್, "ಖಂಡಿತವಾಗಿಯೂ ಬರುತ್ತೇನೆ. ನಮ್ಮ ಹೋಟೆಲ್ ನಿಂದ ನಿಮ್ಮ ಆಟೋದಲ್ಲಿಯೇ ನನ್ನನ್ನು ಕರೆದುಕೊಂಡು ಹೋಗುವಿರಾ," ಎಂದಿದ್ದರು.