ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ
ಬೆಂಗಳೂರು, ಸೆ.10 : ಪತಿಯ ಕಿರುಕುಳದಿಂದ ಬೇಸತ್ತ ತಾಯಿ, ಮುಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ಪರಾರಿಯಾಗಿರುವ ಪತಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಅಪ್ಪಗೆರೆಯ ರಾಜಾ ಕೆಂಪೇಗೌಡ ಬಡಾವಣೆಯಲ್ಲಿ ಸೌಭಾಗ್ಯ (28), ತನ್ನ ಮಗು ಲಿಖಿತಾ(2)ಗೆ ನೇಣು ಹಾಕಿ, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಶವ ಪತ್ತೆಯಾಗಿದ್ದು, ಸೋಮವಾರ ತಡರಾತ್ರಿ ಸಾವಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಸೌಭಾಗ್ಯ ಮನೆಯಲ್ಲಿ ಆಕೆ ಬರೆದಿಟ್ಟ ಡೆತ್ ನೋಟ್ ದೊರಕಿದ್ದು, ಪತಿಯ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆಯಲಾಗಿದೆ. ಅಲ್ಲದೇ ಅತ್ತೆ, ನಾದಿನಿ ಹಾಗೂ ಮೈದುನ ಕೂಡ ತನಗೆ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರು ಎಂದು ಆರೋಪಿಸಿಲಾಗಿದೆ.
ಸೋಮವಾರ ರಾತ್ರಿಯಿಂದ ಸೌಭಾಗ್ಯ ಪತಿ ಅರುಣ್ ಗಂಡು ಮಗುವಿನೊಂದಿಗೆ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಸೌಭಾಗ್ಯ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಸೆರೆ ಸಿಕ್ಕಿದ ಚಿರತೆ ಪರಾರಿ
ಹಂದಿಯ ಉರುಳಿಗೆ ಸಿಕ್ಕಿಬಿದ್ದಿದ್ದ ಚಿರತೆ ಬೆಂಗಳೂರು ಸಮೀಪದ ದಾಬಸ್ಪೇಟೆ ಜನರಿಗೆ ಮಂಗಳವಾರ ಬೆಳಗ್ಗಿನಿಂದಲೂ ಆತಂಕ ಉಂಟುಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದು, ಗ್ರಾಮಸ್ಥರು ಆತಂಕ ದೂರಮಾಡಿದ್ದರು. ಆದರೆ, ಚಿರತೆ ಬೋನಿನಿಂದ ತಪ್ಪಿಸಿಕೊಂಡು ಪರಾರಿಯಾಗಿದೆ. ಸೋಮವಾರ ರಾತ್ರಿ ಮಹೇಶ್ ಎಂಬುವರ ಜಮೀನಿನಲ್ಲಿ ಹಂದಿಗಳನ್ನು ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆ ಸಿಕ್ಕಿಹಾಕಿಕೊಂಡಿತ್ತು. ಬೆಳಗ್ಗೆ ಚಿರತೆಯ ಚೀರಾಟ ಕೇಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಮಧ್ಯಾಹ್ನ 1 ಗಂಟೆ ವೇಳೆಗೆ ಸೆರೆ ಹಿಡಿಯಲಾಗಿತ್ತು. ಆದರೆ, ಅದು ಬೋನಿನಿಂದ ತಪ್ಪಿಸಿಕೊಂಡು ಪರಾರಿಯಾಗಿದೆ.

ಬಸ್ ಡಿಕ್ಕಿ ಇಬ್ಬರು ಗಂಭೀರ
ಖಾಸಗಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 15 ಜನರು ಗಾಯಗೊಂಡಿರುವ ಘಟನೆ, ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕುಂಭಾಷಿ ಬಳಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ. ಉಡುಪಿಯಿಂದ ತೆರಳುತ್ತಿದ್ದ ಬಸ್ ಗೆ ಕುಂದಾಪುರಕಡೆಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತ ಪ್ರಕರಣ ದಾಖಲಾಗಿದ್ದು, ಗಾಯಾಳುಗಳಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅನಿಲ್ ಲಾಡ್ ಗೆ ದೇವರು ಒಳ್ಳೇದು ಮಾಡಲಿ
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿರುವ ವರದಿಯಲ್ಲಿ ನನ್ನ ಹೆಸರಿಲ್ಲ. ಬಳ್ಳಾರಿ ಶಾಸಕ ಅನಿಲ್ ಲಾಡ್ ನನ್ನ ವಿರುದ್ಧ ಏಕೆ? ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ವಾರ್ತಾ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸಂತೋಷ್ ಲಾಡ್ ಹೆಸರು ಲೋಕಾಯುಕ್ತ ವರದಿಯಲ್ಲಿದೆ ಅವರು ಹೇಗೆ? ಸಚಿವರಾದರು ಎಂದು ಅನಿಲ್ ಲಾಡ್ ಪ್ರಶ್ನಿಸಿದ್ದರು.

10 ವಿಶೇಷ ಕೋರ್ಟ್ ಸ್ಥಾಪನೆ
ಕರ್ನಾಟಕದಲ್ಲಿನ ಅತ್ಯಾಚಾರ ಪ್ರಕರಣಗಳ ತ್ವರಿತವಿಚಾರಣೆಗಾಗಿ 10 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿ ನ್ಯಾಯಾಲಯಕ್ಕೆ 37 ಸಿಬ್ಭಂದಿ ಅಗತ್ಯವಿದೆ. ಸಿಬ್ಭಂದಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ ಅವರು, ಅತ್ಯಾಚಾರ ತಡೆಗೆ ಹೊಸ ಕಾನೂನಿನ ಅಗತ್ಯವಿಲ್ಲ. ಈಗಿರುವ ಕಾನೂನನ್ನೇ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದರು.

ಒಂಟಿ ಮಹಿಳೆ ಕೊಲೆ
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮಹಿಳೆಯನ್ನು ಕೊಂದು ಹಣ ಮತ್ತು ಆಭರಣ ದೋಚಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಕೊಲೆಯಾದವರನ್ನು ಯಶೋಧಮ್ಮ (58) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಯಶೋಧಮ್ಮ ಪತಿ ನಿಧನ ಹೊಂದಿದ್ದರು. ಇವರು ಒಬ್ಬೊಂಟಿಯಾಗಿ ವಾಸಿಸುತ್ತಿರುವುದು ತಿಳಿದವರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಯಲ್ಲಿ ಕೊಚ್ಚಿ ಹೋದ ಇನ್ಸ್ ಪೆಕ್ಟರ್
ಹೂವಿನಹಡಗಲಿಯಲ್ಲಿ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಪ್ಪ ಎಂಬುವವರು ದಾವಣಗೆರೆಯಲ್ಲಿ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಂಗಳವಾರ ಅವರ ಶವ ಬಸ್ ನಿಲ್ದಾಣದ ಸಮೀಪದ ಮೋರಿಯಲ್ಲಿ ದೊರಕಿದೆ. ಸೋಮವಾರ ರಾತ್ರಿ ಅವರು ಸರಸ್ವತಿ ನಗರದ ಮನೆಗೆ ತೆರಳುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಳೆದ ಐದಾರು ವರ್ಷಗಳ ಹಿಂದೆ ಕೋಲಾರದಲ್ಲಿ ಇನ್ಸ್ ಪೆಕ್ಟರ್ ಜೀಪಿನೊಂದಿಗೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications