ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಅನಿಲ್ ಲಾಡ್!

ಬಳ್ಳಾರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅನಿಲ್ ಲಾಡ್, ಹೈ ಕಮಾಂಡ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಕಳಂಕಿತ ಎಂದು ಸಚಿವ ಸ್ಥಾನ ನೀಡಿಲ್ಲ. ಅಕ್ರಮ ಗಣಿಗಾರಿಕೆ ವರದಿಯಲ್ಲಿ ಸಂತೋಷ್ ಲಾಡ್ ಹೆಸರಿದೆ ಅವರು ಕಳಂಕಿತರಲ್ಲವೇ ಎಂದು ಪ್ರಶ್ನೆ ಮಾಡಿದರು.
ಲೋಕಾಯುಕ್ತರು ನೀಡಿದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಸಂತೋಷ್ ಲಾಡ್ ಹೆಸರು ಇದೆ. ಆದರೆ, ಅವರು ಸಿದ್ದರಾಮಯ್ಯ ಸಚಿವ ಸಂಪುಟ ಸೇರಿದ್ದಾರೆ. ಸಂತೋಷ್ ಲಾಡ್ ಅವರನ್ನು ಮಂತ್ರಿ ಮಾಡಿದ್ದು ಹೇಗೆ? ಎಂದು ಉತ್ತರಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಪಕ್ಷದ ನಾಯಕರು ಮಾತ್ರವಲ್ಲ ನನಗೆ ಸಚಿವ ಸ್ಥಾನ ತಪ್ಪಿಸಿದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಸಹ ಇದಕ್ಕೆ ಉತ್ತರ ನೀಡಬೇಕೆಂದು ಲಾಡ್ ಆಗ್ರಹಿಸಿದ್ದಾರೆ.
ಪಕ್ಷದವರೇ ಶತ್ರುಗಳು : ನನ್ನ ಪಾಲಿಗೆ ನಮ್ಮ ಪಕ್ಷದ ಮುಖಂಡರೇ ಶತ್ರುಗಳು ಎಂದು ಅನಿಲ್ ಲಾಡ್ ಬೇಸರ ವ್ಯಕ್ತಪಡಿಸಿದರು. ಜನರು ನನಗೆ ಅಧಿಕಾರ ನೀಡಿದ್ದಾರೆ. ಆದರೆ, ನಮ್ಮ ಪಕ್ಷದ ಮುಖಂಡರು ನನ್ನನ್ನು ತುಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು, ಜಿಲ್ಲಾ ಕಾಂಗ್ರೆಸ್ ಮಾಜಿ ಮುಖಂಡರು, ಮಾಜಿ ಸಂಸದರು, ಮಾಜಿ ಶಾಸಕರುಗಳು ಅಡ್ಡಿ ಪಡಿಸುತ್ತಿದ್ದಾರೆ. ಹಿಂಬಾಗಿಲಿನ ರಾಜಕಾರಣ ಮಾಡುತ್ತಿರುವ ಇವರು, ನನಗೆ ತಿಳಿಯದೆ ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ದೂರಿದರು.
ನಾನು ಸಚಿವನಾಗಬೇಕು : ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ನಾನು ಸಚಿವನಾಗಬೇಕು ಎಂಬ ಆಸೆಯಿದೆ. ನಾನು ಕಳಂಕಿತನಲ್ಲ. ನನಗೂ ಸಚಿವ ಸ್ಥಾನದ ಆಸೆಯಿದೆ ಎಂದು ಲಾಡ್, ಎಸ್.ಆರ್ ಹಿರೇಮಠ್ ಹಾಗೂ ದೊರೆಸ್ವಾಮಿಯವರು ನಾನು ಕಳಂಕಿತ ಎಂಬ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಟಿಕೆಟ್ ಪಡೆಯಲು ಅನಿಲ್ ಲಾಡ್ ಭಾರೀ ವಿರೋಧ ವ್ಯಕ್ತವಾಗಿತ್ತು. ಎಲ್ಲಾ ನಾಯಕರ ವಿರುದ್ಧ ಗುಡುಗಿದ್ದ ಲಾಡ್ ಕೊನೆಗೂ ಚುನಾವಣೆಯಲ್ಲಿ ಜಯಗಳಿಸಿದ್ದರು. ಆದರೆ, ಈಗ ಸಚಿವ ಸ್ಥಾನಕ್ಕಾಗಿ ಮತ್ತೊಮ್ಮೆ ಬಂಡಾಯದ ಕಹಳೆ ಊದುತ್ತಿದ್ದಾರೆ.












Click it and Unblock the Notifications