ರಾಜಕಾರಣಿ ದುಡ್ಡು ಹೊಡೆದರೆ ನಷ್ಟವೇನೂ ಇಲ್ಲ: ಸಿಎಂ ರೆಡ್ಡಿ
ಹೈದರಾಬಾದ್, ಸೆ.5: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನು ನೂರಕ್ಕೆ ನೂರರಷ್ಟು ಪರಿಶುದ್ಧನಲ್ಲ ಎಂದು ಚುನಾವಣೆಗೆ ಮುನ್ನ ಮತ್ತು ಚುನಾವಣೆ ನಂತರ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ಆದರೆ ಪಕ್ಕದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ವಿವಾದಾತ್ಮಕ ಹೇಳಿಕೆ ನೀಡಿ, ಎಲ್ಲರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರು ಕ್ಯಾನ್ಸರಿಗಿಂತ ಹೆಚ್ಚು ಮಾರಕವಾಗಿ ಸಮಾಜದ ಅಧೋಗತಿಗೆ ಕಾರಣವಾಗಿರುವ ಭ್ರಷ್ಟಾಚಾದ ಬಗ್ಗೆ ಏನು ಹೇಳಿದ್ದಾರಪ್ಪಾ ಅಂದರೆ ರಾಜಕೀಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.
ಏಕೆಂದರೆ ರಾಜಕಾರಣಿ ಎಷ್ಟೇ ಲಂಚ ತಿಂದರೂ ಅದೆಲ್ಲಾ ಮತ್ತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಬಿಡುತ್ತಾನೆ. ಹಾಗಾಗಿ ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ಅನಗತ್ಯವಾಗಿ ಆತಂಕ ಪಡಬೇಡಿ ಎಂದು ಫರ್ಮಾನು ಹೊರಡಿಸಿದ್ದಾರೆ. ಸಿಎಂ ಕಿರಣ್ ಕುಮಾರ್ ರೆಡ್ಡಿ ಕೇಂದ್ರ ಸರಕಾರದ ಭ್ರಷ್ಟಾಚಾರದ ಸಮ್ಮುಖದಲ್ಲಿ ಇಷ್ಟೊಂದು ಅಸಹಾಯಕರಾದರಾ ಅಥವಾ ಭ್ರಷ್ಟಾಚಾರದ ಬಗ್ಗೆ confuse ಆಗಿಬಿಟ್ಟಿದ್ದಾರಾ?

ಯಥಾ ರಾಜ ತಥಾ ಮಂತ್ರಿ!
ಆದರೂ ಘನವೆತ್ತ ಸಿಎಂ ಕಿರಣ್ ಕುಮಾರ್ ಅವರು ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿದ್ದಾರೆ. ಈ ಉದ್ಯಮಿಗಳು ಮತ್ತು ಅಧಿಕಾರಿಗಳು ಇದ್ದಾರಲ್ಲಾ... ಅವರ ಭ್ರಷ್ಟಾಚಾರದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿ. ಇವರ ಭ್ರಷ್ಟಾಚಾರ ಸಮಾಜಕ್ಕೆ ಅಪಾಯಕಾರಿ. ಏಕೆಂದರೆ ಇವರು ಹೊಡೆಯುವ ದುಡ್ಡು ಇವರ ಬಳಿಯೇ ಉಳಿದುಬಿಡುತ್ತದೆ. ಅದು ಸಮಾಜಕ್ಕೆ ವಾಪಸಾಗುವುದಿಲ್ಲ ಎಂದು ಸಿಎಂ ಕಿರಣ್ ಕುಮಾರ್ ಹೇಳಿದ್ದಾರೆ!

ಹೊಸ ಅಧಿಕಾರಿಗಳಿಗೆ ಸಿಎಂ ಉಚಿತ ಸಲಹೆ
ಈ ಮಾತುಗಳನ್ನು ಅವರು ಯಾವ ವೇದಿಕೆಯಲ್ಲಿ ಹೇಳಿದರು ಎಂಬುದೂ ಇಲ್ಲಿ ಗಮನಾರ್ಹ. ರಾಜ್ಯದ ಆಡಳಿತಶಾಹಿಗೆ ಹೊಸದಾಗಿ ಸೇರ್ಪಡೆಯಾದ ಅಧಿಕಾರಿಗಳನ್ನುದ್ದೇಶಿಸಿ ಅವರು ಈ ಮಾತು ಹೇಳಿದ್ದಾರೆ.

'ನಮ್ಮದು ಹೆಂಗಾದರೂ ಇರಲಿ. ನೀವು ಲಂಚಕ್ಕೆ ಕೈಯೊಡ್ಡಬೇಡಿ'
ಅಷ್ಟಕ್ಕೂ ಸಿಎಂ ಅವರಿಂದ ಇಂತಹ ಗಂಭೀರ ಹೇಳಿಕೆ ಬರುವುದಕ್ಕೆ ಕಾರಣವಾಗಿದ್ದಾದರೂ ಯಾವುದು ಅಂದರೆ ಮಾಹಿತಿ ಹಕ್ಕು ಕಾಯಿದೆಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಡುವಲ್ಲಿ ಎಲ್ಲ ರಾಜಕಾರಣಿಗಳು ಒಗ್ಗಟ್ಟು ತೋರಿ ಅಪಾಯದಿಂದ ಪಾರಾಗಲು ಹವಣಿಸುತ್ತಿದ್ದಾರಲ್ಲ, ಇದು ಸರಿಯೇ? ಹೀಗೇಕೆ? ಎಂದು ಯುವ ಅಧಿಕಾರಿಯೊಬ್ಬರು ಕೇಳಿದ್ದೇ ತಡ ಸಿಎಂ ಕಿರಣ್ ಗಾರು 'ನಮ್ಮದು ಹೆಂಗಾದರೂ ಇರಲಿ. ಆದರೆ ನೀವು ಲಂಚಕ್ಕೆ ಕೈಯೊಡ್ಡಬೇಡಿ' ಎಂದು ನೂತನ ಅಧಿಕಾರಿಗಳಿಗೆ 'ಉಚಿತ' ಸಲಹೆ ನೀಡಿದ್ದಾರೆ.

UPAದ್ದು 10G ಭ್ರಷ್ಟಾಚಾರ
ಕಿರಣ್ ಕುಮಾರ್ ರೆಡ್ಡಿಗಾರುಗೆ ಗೊತ್ತಿಲ್ಲದ ಒಂದು ಸಂಗತಿಯೆಂದರೆ ತಮ್ಮದೇ ಕಾಂಗ್ರೆಸ್ ಪಕ್ಷ ನೇತೃತ್ವದ UPA ಅಧಿಕಾರಾವಧಿಯಲ್ಲಿ ಯಾವುದೇ ಎಗ್ಗುಸಿಗ್ಗು ಇಲ್ಲದೆ ಲಕ್ಷ ಕೋಟಿ ರೂಪಾಯಿಗಳಲ್ಲಿ ಲಂಚವನ್ನು ತಿಂದು ತೇಗಿದ್ದಾರೆ. ಇದೆಲ್ಲಾ ಆಡಳಿತಾರೂಢ ರಾಜಕಾರಣಿಗಳ ಇಶಾರೆ ಮೇರೆಗೆ ನಡೆದಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಾಗಿ ಯಾವುದೋ ಕಾಲವಾಗಿದೆ. ಈ ಭ್ರಷ್ಟ ರಾಜಕಾರಣಿಗಳು ಗುಡ್ಡೆ ಹಾಕಿಕೊಂಡಿರುವುದು 2G, 3G ಗಷ್ಟೇ ಅಲ್ಲ ಹತ್ತಾರು Gಗಳೂ ಅಂದರೆ ತಮ್ಮ ಮುಂದಿನ ಹತ್ತಾರು ಪೀಳಿಗೆಯವರೂ (Generation) ತಿಂದುತೇಗುವಷ್ಟು ಲಂಚದ ಹಣ ತಿಂದಿದ್ದಾರೆ.












Click it and Unblock the Notifications