ದಾವೂದ್ ಸಹಚರ ರಶೀದ್ ಮಲಬಾರಿಗೆ 5 ವರ್ಷ ಜೈಲು

ಏನಪ್ಪಾ ಅಂದರೆ ಬಿಜೆಪಿ ನಾಯಕರಾದ ವರುಣ್ ಗಾಂಧಿ ಮತ್ತು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ 2009ರಲ್ಲಿ ಬಂಧನಕ್ಕೀಡಾಗಿದ್ದ ರಶೀದ್ ಮಲಬಾರಿ ಅಲಿಯಾಸ್ ಡಬಲ್ (42) ಮತ್ತು ಮೊಹಮದ್ ಹಶೀಂ (32) ವಿರುದ್ಧ ಮಾರಕ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದ್ದು, ಶಿಕ್ಷೆ ಕಾಯಂ ಆಗಿದೆ. ರಶೀದ್ ಮಲಬಾರಿ, ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಗ್ಯಾಂಗಿನ ಸಹಚರ.
ಇಂದು ಗುರುವಾರ ಶಿಕ್ಷೆ ಪ್ರಕಟಿಸಿದ ಮಂಗಳೂರು ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಂಎನ್ ನಾಯಕ್ ಅವರು, ಇಬ್ಬರೂ ಅಪರಾಧಿಗಳಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 11,500 ರುಪಾಯಿ ದಂಡ ವಿಧಿಸಿದ್ದಾರೆ. ಆರೋಪಿಗಳಿಬ್ಬರೂ ಈಗಾಗಲೇ ಮಂಗಳೂರು ಜೈಲಿನಲ್ಲಿ ನಾಲ್ಕು ವರ್ಷ ಕಳೆದಿದ್ದಾರೆ.
ನ್ಯಾಯಾಧೀಶರು ಶಿಕ್ಷೆ ಪ್ರಕಟಿಸುತ್ತಿದ್ದಂತೆ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ ರಶೀದ್, ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಪೊಲೀಸರು ಸಂಘ ಪರಿವಾರದವರಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ಶಿಕ್ಷೆ ನೀಡಲಾಗಿದೆ ಎಂದು ಎಗರಾಡಿದ್ದಾನೆ. ಜೈಲಿನಿಂದ ಹೊರಬಂದ ನಂತರ ಇನ್ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನರನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
1998ರಲ್ಲಿ ಬೆಂಗಳೂರಿನ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲೂ ರಶೀದ್ ಮಲಬಾರಿ ಭಾಗಿಯಾಗಿದ್ದ. ನಕಲಿ ದಾಖಲೆಗಳನ್ನು ಬಳಸಿ ರಶೀದ್ ಮಲಬಾರಿ ಕೊಲ್ಲಿ ರಾಷ್ಟ್ರಗಳು, ಆಗ್ನೇಯ ಏಷ್ಯಾ ರಾಷ್ಟ್ರಗಳು ಮತ್ತು ಚೀನಾಕ್ಕೆ ಅನೇಕ ಬಾರಿ ಹೋಗಿಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2002ರಲ್ಲಿ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಹತ್ಯೆ ಯತ್ನದಲ್ಲಿ ಸಹ ರಶೀದ್ ಮಲಬಾರಿ ಪ್ರಮುಖ ಆರೋಪಿಯಾಗಿದ್ದ. 2005ರಲ್ಲಿ ಕೌಲಾಲಂಪುರದಲ್ಲಿ ಬಾಳದೊಂಗ್ರೆಯ ಹತ್ಯೆ, ಛೋಟಾ ರಾಜನ್ ತಂಡದ ಜಾನಂ ಮತ್ತು ಪ್ರಶಾಂತ್ ಎಂಬಿಬ್ಬರನ್ನು ಮಂಗಳೂರಿನ ಬೈಕಂಪಾಡಿಯಲ್ಲಿ 1998ರಲ್ಲಿ ಹತ್ಯೆ ಮಾಡಿದ್ದ ಆರೋಪವೂ ರಶೀದ್ ಮಲಬರಿ ಮೇಲಿದೆ.
ಕೇರಳದ ಚಟ್ಟಂಚಾ ಬಳಿ ರಶೀದ್ ಮಲಬಾರಿ ಮತ್ತು ಮೊಹಮದ್ ಹಶೀಂ ಸೇರಿದಂತೆ ಒಟ್ಟು 8 ಮಂದಿಯನ್ನು ಮಂಗಳೂರು ಪೊಲೀಸರು 2009ರ ಮಾರ್ಚ್ 9ರಂದು ಬಂಧಿಸಿದ್ದರು. ಆ ವೇಳೆ ಇಬ್ಬರ ಬಳಿಯೂ 2 ಪಿಸ್ತೂಲು ಮತ್ತು ಸಜೀವ ಗುಂಡುಗಳು ಪತ್ತೆಯಾಗಿದ್ದವು.
ರಶೀದ್ ಮಲಬಾರಿ ಮತ್ತು ಮೊಹಮದ್ ಹಶೀಂ ಇಬ್ಬರ ವಿರುದ್ಧವೂ ಗುರುತರ ಆರೋಪಗಳಿದ್ದು ಅದೀಗ ಸಾಬೀತಾಗಿದೆ. ಹಾಗಾಗಿ ಅವರಿಗೆ ಹೆಚ್ಚಿನ ಶಿಕ್ಷೆ ಅಂದರೆ 10 ವರ್ಷ ಕಾಲ ಜೈಲುವಾಸ ವಿಧಿಸಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮಂಜುನಾಥ್ ವಿ ಭಟ್ ಪನ್ನೆ ಅವರು ನ್ಯಾಯಾಧೀಶರಾದ ಜೆಬಿ ನಾಯಕ್ ಅವರನ್ನು ಕೋರಿದ್ದರು.












Click it and Unblock the Notifications