ಕರ್ನಾಟಕದ ಜಿಲ್ಲಾ ಸುದ್ದಿಗಳತ್ತ ಒಂದು ನೋಟ
ಬೆಂಗಳೂರು, ಆ.22 : ಈರುಳ್ಳಿ ಬೆಲೆ ಹೆಚ್ಚಳ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜನರಿಗೆ ಉಚಿತವಾಗಿ ಈರುಳ್ಳಿ ಹಂಚಿದರು.
ಶುಕ್ರವಾರ ಕೆಂಪೇಗೌಡ ಬಸ್ ನಿಲ್ದಾಣದ ಮುಂಭಾಗದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಒಂದು ಕೆ.ಜಿ.ಈರುಳ್ಳಿ ಬೆಲೆ 70 ರೂ. ಆದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ನಿಯಂತ್ರಣಕ್ಕೆ ಮುಂದಾಗಿಲ್ಲ ಎಂದು ದೂರಿದರು.
ಸರ್ಕಾರ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಆದ್ದರಿಂದ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಸರ್ಕಾರ ಕೃಷಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು. ಈರುಳ್ಳಿ ಬೆಲೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಒಂದು ಕೈಗಾಡಿ ಈರುಳ್ಳಿಯನ್ನು ಜನರಿಗೆ ಉಚಿತವಾಗಿ ಹಂಚುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸದಾ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ವಾಟಾಳ್ ನಾಗರಾಜ್ ಇಂದಿನ ಪ್ರತಿಭಟನೆಯಿಂದ ಕೆಲವು ಜನರಿಗೆ ಉಚಿತವಾಗಿ ಈರುಳ್ಳಿ ದೊರೆಯಿತು. (ಇತರ ಜಿಲ್ಲಾ ಸುದ್ದಿಗಳು)

ತಪ್ಪಿದ ದುರಂತ
ವಿಷಾಹಾರ ಸೇವಿಸಿ 50 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಯಾದಗಿರಿ ತಾಲೂಕಿನ ಕೆಂಬಾವಿ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಬೆಳಗ್ಗಿನ ಉಪಹಾರ ಸೇವಿಸಿದ ನಂತರ, 50 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾವೇರಿ ಇನ್ನಿಲ್ಲ
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗದ ಸಕ್ರೈಬೈಲು ಆನೆ ಬಿಡಾರದ ಹೆಣ್ಣಾನೆ ಕಾವೇರಿ(79) ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಕಾವೇರಿಗೆ ಹಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಶುಕ್ರವಾರ ಬೆಳಗ್ಗೆ ಆನೆ ಮೃತಪಟ್ಟಿದೆ ಎಂದು ಬಿಡಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರದ ವಿರುದ್ಧ ಆಕ್ರೋಶ
ಹಾಸನ ಜಿಲ್ಲೆಯ ವಿಷ್ಣು ಸಮುಸ್ರ ಕೆರೆಗೆ ಬಸ್ ಉರುಳಿದ ಪ್ರಕರಣ ನಂತರವೂ, ಜಿಲ್ಲಾಡಳಿತ ಕೆರೆಗೆ ತಡೆಗೊಡೆ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೇಲೂರು ಬಂದ್ ಮಾಡಿದರೂ, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ತಡೆಗೋಡೆ ನಿರ್ಮಿಸಲು 15 ದಿನಗಳ ಗಡುವು ನೀಡಿದ್ದಾರೆ.

ಶೀಘ್ರ ಗಣಿಗಾರಿಕೆ ಮತ್ತೆ ಪ್ರಾರಂಭ
ಸುಪ್ರೀಂಕೋರ್ಟ್ ಆದೇಶದಂತೆ ಕೋಲಾರದ ಚಿನ್ನದ ಗಣಿ ಕಾರ್ಖನೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಕಾರ್ಖನೆ ಆರಂಭಿಸಲು ಎಲ್ಲಾ ಕಾರ್ಯಗಳಿಗೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಗಣಿಗಾರಿಕೆ ಪ್ರಾರಂಭವಾಗಲಿದೆ ಎಂದರು.

ಪಾಪಿ ಕಾಮುಕನ ಬಂಧನ
ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಮೈಸೂರಿನ ಉದಯಗಿರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಗೌಸಿಯಾ ನಗರದ ಮೆಹಬೂಬ್ ಪಾಷಾ(55) ಬಂಧಿತ ಆರೋಪಿಯಾಗಿದ್ದಾನೆ. ಈತ ಬಾಲಕಿ ಮೇಲೆ 3 ವರ್ಷದಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಬಾಲಕಿ ಗರ್ಭಿಣಿಯಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಲಾರಿ ಚಾಲಕನ ಕೊಲೆ
ಲಾರಿ ಚಾಲಕನನ್ನು ಕೊಲೆ ಮಾಡಿ ಲಾರಿಯಲ್ಲಿ ಹಾಕಿಕೊಂಡು ಸಾಗುತ್ತಿದ್ದ ಮೂವರನ್ನು ಭದ್ರಾವತಿ ಬಳಿ ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಮೂಲದ ಲಾರಿ ಚಾಲಕನನ್ನು ಕೊಲೆ ಮಾಡಿ, ದಾವಣಗೆರೆಯಿಂದ ಮೂವರು ಲಾರಿ ಅಪಹರಿಸುತ್ತಿದ್ದರು. ಭದ್ರಾವತಿ ಬೈಪಾಸ್ ಬಳಿ ಲಾರಿ ಪರಿಶೀಲನೆ ನಡೆಸಿದಾಗ, ಲಾರಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೂವರನ್ನು ಬಂಧಿಸಿರುವ ಪೊಲೀಸರು, ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications