ಕಾಜಿರಂಗದಲ್ಲಿ ಖಡ್ಗಮೃಗಗಳ ಬೇಟೆ ಅವ್ಯಾಹತ
ಗುವಾಹಟಿ, ಆ.22: ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನ ಕಾಜಿರಂಗದಲ್ಲಿ ಖಡ್ಗಮೃಗಗಳ ಬೇಟೆ ನಿರಂತರವಾಗಿ ನಡೆದಿರುವುದು ಪರಿಸರವಾದಿಗಳನ್ನು ಕೆರಳಿಸಿದೆ. ಬೇಟೆಗಾರರ ಉಪಟಳ ಹತ್ತಿಕ್ಕಲು ಅಸ್ಸಾಂನ ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದಾಗಿ ಹೇಳಿ ಕೇಂದ್ರ ಸರ್ಕಾರ ಕೈತೊಳೆದುಕೊಂಡಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ದಕ್ಷಿಣ ಭಾಗದಲ್ಲಿ ಬುಧವಾರ ಎರಡು ಖಡ್ಗಮೃಗಗಳನ್ನು ಕೊಂದು ಹಾಕಿದ್ದಾರೆ. ಒಂದು ಖಡ್ಗಮೃಗದ ಕೋಡು ಮುರಿದುಕೊಂಡು ಹೋಗಿದ್ದಾರೆ. ಇದು ಭಯೋತ್ಪಾದಕರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.
2013ರಲ್ಲಿ ಈ ವರೆಗೂ ಸುಮಾರು 18ಕ್ಕೂ ಅಧಿಕ ಖಡ್ಗಮೃಗಗಳು ಬೇಟೆಗಾರರಿಗೆ ಬಲಿಯಾಗಿವೆ. ಅಸ್ಸಾಂ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 22ಕ್ಕೇರಿದೆ. 2008ರಿಂದ ಇಲ್ಲಿವರೆಗೂ ಸುಮಾರು 75ಕ್ಕೂ ಅಧಿಕ ಖಡ್ಗಮೃಗಗಳನ್ನು ಕೊಲ್ಲಲಾಗಿದ್ದು, ಇದರಲ್ಲಿ 48 ಖಡ್ಗಮೃಗಗಳು ಸಂರಕ್ಷಿತ ಅರಣ್ಯ ರಾಷ್ಟ್ರೀಯ ಉದ್ಯಾನವನದಲ್ಲೇ ಬಲಿಯಾಗಿರುವುದು ದುರಂತದ ಸಂಗತಿ. ಇತ್ತೀಚಿನ ಪ್ರವಾಹಕ್ಕೆ ಸಿಲುಕಿ ಕೆಲವು ಖಡ್ಗಮೃಗಗಳು ಹತಗೊಂಡಿದ್ದವು.

ಅಧಿಕೃತ ಮಾಹಿತಿ ಪ್ರಕಾರ ಅಸ್ಸಾಂನಲ್ಲಿ ಸುಮಾಅರು 2,552 ಖಡ್ಗಮೃಗಗಳಿವೆ. ಅದರಲ್ಲಿ 2,329 ಖಡ್ಗಮೃಗಗಳು ಕಾಜಿರಂಗದಲ್ಲೇ ಇವೆ. ಪೊಬಿತೊರಾ ವನ್ಯಜೀವಿ ಧಾಮ, ಒರಾಂಗ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 100ಕ್ಕೂ ಅಧಿಕ 'ರೈನೋ'ಗಳಿವೆ. ಮನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 23 ಖಡ್ಗಮೃಗಗಳು ಲೆಕ್ಕಕ್ಕೆ ಸಿಕ್ಕಿವೆ.












Click it and Unblock the Notifications