ಇನ್ನೂ ಎರಡು ದಿನ ಮಳೆಯಿಂದ ಬಿಡುವಿಲ್ಲ
ಬೆಂಗಳೂರು, ಆ.17 : ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆಗಮಿಸಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುರುವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಇನ್ನೂ ಎರಡು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ.
ಬೆಂಗಳೂರಿನಲ್ಲಿ ಗುರುವಾರದಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಯಾವುದೇ ಕ್ಷಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಶುಕ್ರವಾರ ಸಂಜೆ ವರೆಗೆ ಬೆಂಗಳೂರಿನಲ್ಲಿ 22.5 ಮಿ.ಮೀ.ಮಳೆ ಸುರಿದಿದೆ.

ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಶಿವಮೊಗ್ಗ, ಚಿತ್ರದುರ್ಗ, ಮಂಡ್ಯ, ಬಾಗಲಕೋಟೆ, ಬಿಜಾಪುರ, ಗದಗ, ಹಾವೇರಿ, ಕೊಡಗು ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆ ಬಿದ್ದಿದೆ.
ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ತೀರದಲ್ಲಿ ವಾಯುಭಾರ ಕುಸಿದಂತಹ ಲಕ್ಷಣಗಳು ಕಂಡುಬಂದಿರುವುದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಇಂತಹ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ ಒಟ್ಟಾರೆ ಜೂನ್ 1ರಿಂದ ಆಗಸ್ಟ್ 16ರವರೆಗೆ ವಾಡಿಕೆಯಂತೆ 592.6 ಮಿ.ಮೀ. ಮಳೆ ಬೀಳಬೇಕಾಗಿತ್ತು. ಆದರೆ, ಈ ಬಾರಿ 671.5 ಮಿ.ಮೀ. ಮಳೆ ಸುರಿದಿದ್ದು, ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿವೆ.
ಎಲ್ಲಿ, ಎಷ್ಟು ಮಳೆ : ಶುಕ್ರವಾರ ಸಂಜೆವರೆಗೆ ತುಮಕೂರು- 42 ಮಿ.ಮೀ., ಚಿಕ್ಕಬಳ್ಳಾಪುರ- 16, ಚಿತ್ರದುರ್ಗ- 17.5, ಶಿವಮೊಗ್ಗ 42.9, ಮಂಡ್ಯ- 32, ಹಾಸನ- 13.5, ದಕ್ಷಿಣ ಕನ್ನಡ- 46, ಉಡುಪಿ- 45.5, ಕೊಡಗು- 20.8, ಬಾಗಲಕೋಟೆ- 31.5, ಬೆಂಗಳೂರು ನಗರ- 22.5, ಬಿಜಾಪುರ- 16, ಗದಗ- 14.8, ಹಾವೇರಿ- 18.5, ಬೆಳಗಾವಿ- 15.5, ಧಾರವಾಡ- 12.7 ಮಿ.ಮೀ.ಮಳೆ ಸುರಿದಿದೆ.
ಮುನ್ಸೂಚನೆ : ಮುಂದಿನ ಎರಡು ಮೂರು ದಿನಗಳಲ್ಲಿ ಬೆಂಗಳೂರು, ಕೊಡಗು, ತುಮಕೂರು, ಕೋಲಾರ, ಚಿತ್ರದುರ್ಗ, ಯಾದಗಿರಿ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications