ಎಚ್ಡಿಕೆ- ಬಿಎಸ್ವೈ ಲಿಪ್ಸು ಲಾಕ್ ಆದವಾ: ಪೂಜಾರಿ ಪ್ರಶ್ನೆ

ಇದನ್ನು ಸಂದರ್ಭಸಹಿತ ವಿವರಿಸುವುದಾದರೆ ಮಾಜಿ ಮುಖ್ಯಮಂತ್ರಿಗಳಾದ ಕೆಜೆಪಿಯ ಯಡಿಯೂರಪ್ಪ ಮತ್ತು ಜೆಡಿಎಸ್ಸಿನ ಕುಮಾರಸ್ವಾಮಿ ಅವರುಗಳು ಬೃಹತ್ತಾದ ಒಂದೇ ಹೂಹಾರದಲ್ಲಿ ತೂರಿ 'ಕುಚಿಕ್ಕು ಕುಚಿಕ್ಕು ಕುಚಿಕ್ಕು... ನಮ್ದು ಕುರ್ಚಿ ದೋಸ್ತಿ ಕಣೋ ಕುಚಿಕ್ಕು' ಎಂದು ಮೈಸೂರಿನಲ್ಲಿ ಹಾಡಿಕೊಂಡಿದ್ದರು.
ಅಡ್ಜಸ್ಟ್ ಮಾಡಿಕೊಳ್ಳಬೇಕಿತ್ತು ಅಂದಿದ್ದು ಇದಕ್ಕೇನಾ!?:
ಇದು ಸನ್ಮಾನ್ಯ ಜನಾರ್ದನ ಪೂಜಾರಿ ಅವರಿಗೆ ಮತ್ತಿನ್ನೇನೋ ರೀತಿಯಲ್ಲಿ ಕಾಣಿಸಿಕೊಂಡು ಅದನ್ನು ನಶಿಸಿಹೋಗುತ್ತಿರುವ ಹರಿಕಥೆಯ ಧಾಟಿಯಲ್ಲಿ ವಿವರಿಸಿದ್ದಾರೆ. ಆದರೆ ಇದಕ್ಕೆ ಸಾಕ್ಷಿಯಾಗಿದ್ದ ಮೈಸೂರು ಜನತೆ ಮಾತ್ರ 'ಅವರಿಬ್ಬರು ಏನ್ ಬೇಕಾದರೂ ಮಾಡಿಕೊಳ್ಳಲಿ ಮಧ್ಯೆ ಪೂಜಾರಿಗೇನು ಕೆಲಸ?' ಎಂದು ಹುಳ್ಳಗೆ ನಕ್ಕಿದ್ದಾರೆ. ಜತೆಗೆ, ಮೊನ್ನೆ ಸದನದಲ್ಲೇ 'ಯಡಿಯೂರಪ್ನೋರು ತಮ್ಮ ಜತೆ ಅಡ್ಜಸ್ಟ್ ಮಾಡಿಕೊಳ್ಳಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದ್ದು ಇದನ್ನೇನಾ?' ಎಂದು ಜನ ಕೇಳತೊಡಗಿದ್ದಾರೆ.
ಇನ್ನು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವಣ ಪ್ರಸಂಗವು ಚುಂಬನವೋ ಅಥವಾ ಮೈತ್ರಿಯೋ ಒಟ್ಟಿನಲ್ಲಿ ಅದು ಅಪವಿತ್ರ. ಕಾವೇರಿ ನದಿಯ ಅಷ್ಟೂ ನೀರು ಹಾಕಿ ತೊಳೆದರೂ ಸಾಕಾಗದು' ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಿಯತಮೆಯಂತೆ ಯಡಿಯೂರಪ್ಪ ತೂಗಾಡಿದರು:
'ಒಂದೇ ಹಾರಕ್ಕೆ ಕೊರಳೊಡ್ಡಿ ನಿಂತ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಹಳೆಯ ಪ್ರೇಮಿಗಳು ಪರಸ್ಪರ ಚುಂಬಿಸಿದಾಗ ತೋರುವ ಸಂತಸ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪಗೆ ಪ್ರಥಮ ಚುಂಬನದಲ್ಲೆ ಸೋಲಾಗಿತ್ತು. ಆದರೂ ಮೈಸೂರಿನಲ್ಲಿ ಮತ್ತೊಮ್ಮೆ ಹತ್ತಿರವಾಗಿದ್ದಾರೆ. ಕುಮಾರಸ್ವಾಮಿ ಕಿವಿಯಲ್ಲಿ ಪಿಸುಗುಟ್ಟಿದಾಗ ಜನ್ಮದಲ್ಲೇ ಕಂಡಿರದಷ್ಟು ಖುಷಿಯನ್ನು ಯಡಿಯೂರಪ್ಪ ಅನುಭವಿಸಿದರು. ಅಲ್ಲಿ ಚುಂಬನವಷ್ಟೆ ಬಾಕಿಯಿತ್ತು. ಪ್ರಿಯತಮನೊಬ್ಬ ಪ್ರಿಯತಮೆಗೆ ಮುತ್ತು ಕೊಟ್ಟಾಗ ಅನುಭವಿಸುವ ಸಂಭ್ರಮದಲ್ಲಿ ಯಡಿಯೂರಪ್ಪ ತೇಲಾಡಿದರು' ಎಂದು ಎಂದು ಪೂಜಾರಿ ಮನಸಾರೆ ವ್ಯಂಗ್ಯವಾಡಿದ್ದಾರೆ.
'ಅಧಿಕಾರ ಹಸ್ತಾಂತರಕ್ಕಾಗಿ ಬೈದಾಡಿಕೊಂಡಿದ್ದ ಇವರ ಮಧ್ಯೆ ಲವ್ ಆದದ್ದು ಹೇಗೆ? ಅಧಿಕಾರದ ಆಸೆಯಿಂದ ಹೀಗೆ ಮಂಗಗಳಂತೆ ಆಡುವವರಿಗೆ ತಕ್ಕ ಶಾಸ್ತಿಯಾಗಲಿದೆ' ಎಂದೂ ಅವರು ಎಚ್ಚರಿಸಿದ್ದಾರೆ.
'ಲೋಕಸಭಾ ಉಪ ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕೆಜೆಪಿ ಒಂದಾಗಿರುವುದು ಕಾಂಗ್ರೆಸಿಗೆ ದೇವರು ಕೊಟ್ಟ ವರ. ಹಾಗೆಯೇ, ಜೆಡಿಎಸ್ ಅನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವಂತೆಯೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಎಂದು ಜನಾರ್ದನ ಪೂಜಾರಿ ಅವರು ಒತ್ತಾಯಿಸಿದ್ದಾರೆ.
ಕೋಮುವಾದಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ದೇವೇಗೌಡರ ಜಾತ್ಯತೀತ ಮುಖವಾಡ ಕಳಚಿ ಬಿದ್ದಿದೆ. ಸುಮ್ಮನೆ ಸೋಗು ಹಾಕುವ ಬದಲು ಬಿಜೆಪಿ ಜತೆ ನಿಮ್ಮ ಪಕ್ಷವನ್ನು ವಿಲೀನಗೊಳಿಸಿ. ಮಾತ್ರವಲ್ಲ ಅವರಿಗೆ ಸೋಲಿನ ಭಯ ಶುರುವಾಗಿದ್ದು ಯಾವುದೇ ಕ್ಷಣದಲ್ಲಿ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣ್ಣೀರು ಸುರಿಸಬಹುದು. ಆದರೆ ಪ್ರಜ್ಞಾವಂತ ಮತದಾರರು ಇದಕ್ಕೆ ಮರುಳಾಗಬಾರದು ಎಂದು ಮನವಿ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿರುವ ಅವರು ಸ್ಥಳೀಯ ಸಂಸ್ಥೆ ಚುನಾವಣೆಗೆ ಅಭ್ಯರ್ಥಿಯನ್ನು ಹಾಕದ ದೇವೇಗೌಡರು ಹಾಗೂ ಲೋಕಸಭೆ ಉಪ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸದ ಬಿಜೆಪಿ ಯುದ್ಧರಂಗದಿಂದ ಓಡಿ ಹೋದ ರಣ ಹೇಡಿಗಳು ಎಂದು ಕಿಡಿಕಾರಿದ್ದಾರೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications