ಮತ್ತೆ ಸ್ಫೋಟಗೊಂಡ ಮಂಡ್ಯ ಕಾಂಗ್ರೆಸ್ ಭಿನ್ನಮತ

ಮಂಗಳವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷದ ನಾಯಕರು ಸಭೆ ಸೇರಿದ್ದರು. ಜಿಲ್ಲಾ ಕಾಂಗ್ರೆಸ್ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಮುಖಂಡರ ನಡುವಿನ ಭಿನ್ನಮತ, ವೈಮನಸ್ಸು, ಗುಂಪುಗಾರಿಕೆ ಈ ಸಂದರ್ಭದಲ್ಲಿ ಸ್ಫೋಟಗೊಂಡಿದೆ.
ಮಾಜಿ ಶಾಸಕರಾದ ಶಿವರಾಮೇಗೌಡ, ಸುರೇಶ್ಗೌಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ ನಡುವೆ ಸಭೆಯಲ್ಲಿ ಜಟಾಪಟಿ ನಡೆಯಿತು. ವಿಧಾನಸಭಾ ಚುನಾವಣೆ ವೇಳೆ ಉಭಯ ನಾಯಕರ ನಡುವೆ ಉಂಟಾಗಿದ್ದ ವೈಮನಸ್ಸು ಬಗೆಹರಿದಿಲ್ಲ ಎಂಬುದು ಸ್ಪಷ್ಟವಾಯಿತು.
ಸಭೆಯಲ್ಲಿ ಮಾಜಿ ಶಾಸಕ ಶಿವರಾಮೇಗೌಡ, ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಲು ಎಲ್ಲಾ ನಿರ್ಧಾರಗಳು ಆಗಿದ್ದವು. ಆದರೆ, ಕೊನೆ ಗಳಿಗೆಯಲ್ಲಿ ಕೆಲವರು ನಡೆಸಿದ ಪಿತೂರಿಯಿಂದ ನನಗೆ ಟಿಕೆಟ್ ಕೈತಪ್ಪಿತು. ಅವರು ಯಾರು, ಅಂಥ ವ್ಯಕ್ತಿಗಳು ಎಂದು ನನಗೆ ಗೊತ್ತು ಎಂದು ಹೇಳಿದರು.
ಇದರಿಂದ ಕೆರಳಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿವೇಕಾನಂದ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅಂಬರೀಷ್ ಸೋಲಿಗೆ ಕೆ.ಬಿ.ಚಂದ್ರಶೇಖರ್ ಮತ್ತು ಸುರೇಶ್ ಗೌಡ ಅವರು ಕಾರಣ ಎಂದು ನೇರವಾಗಿ ಆರೋಪಿಸಿದರು.(ಮತ್ತೆ ಶುರುವಾಯ್ತ ಮಂಡ್ಯ ಕಾಂಗ್ರೆಸ್ ಸಮರ)
ಇದರಿಂದ ಸುರೇಶ್ ಗೌಡ ಮತ್ತು ವಿವೇಕಾನಂದರ ನಡುವೆ ಜಗಳ ಪ್ರಾರಂಭವಾಯಿತು. ಇಬ್ಬರ ನಾಯಕರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಸುರೇಶ್ ಗೌಡ, ಶಿವರಾಮೇಗೌಡರನ್ನೂ ನಿಂದಿಸಲು ಆರಂಭಿಸಿದಾಗ ಸಭೆಯಲ್ಲಿನ ಗದ್ದಲ ಹೆಚ್ಚಾಯಿತು.
ರೆಬಲ್ ಸ್ಟಾರ್ ಗುಡುಗು : ಮುಖಂಡರ ಗಲಾಟೆಯನ್ನು ತಡೆಯುವ ಪ್ರಯತ್ನಕ್ಕೆ ಕೈ ಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್, ಗಲಾಟೆ ಮುಂದುವರೆಸಿದರೆ ನಾನು ಸಭೆಯಿಂದ ಹೊರಹೋಗುತ್ತೇನೆ. ಇದು ಆತ್ಮಾವಲೋಕನ ಸಭೆಯಲ್ಲ. ಉಪ ಚುನಾವಣೆಯ ತಯಾರಿ ಕುರಿತು ಚರ್ಚಿಸಲು ನಡೆಸುತ್ತಿರುವ ಸಭೆ ಎಂದು ಗುಡುಗಿದರು.
ಅಂಬರೀಶ್ ಅವರ ಗುಡುಗಿನಿಂದ ಸಭೆಯಲ್ಲಿನ ಗಲಾಟೆ ತಣ್ಣಗಾಯಿತು. ಆದರೆ, ಸಭೆಯ ಉದ್ದೇಶ ಮಾತ್ರ ಈಡೇರಲಿಲ್ಲ. ಲೋಕಸಭೆ ಉಪ ಚುನಾವಣೆ ತಯಾರಿ ನಡೆಯುತ್ತಿರುವಾಗ, ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿರುವುದು ನಾಯಕರಿಗೂ ನುಂಗಲಾರದ ತುತ್ತಾಗಿದೆ.
ಆತ್ಮಾನಂದ ಬಣ ಗೈರು : ಅಂಬರೀಶ್ ಮತ್ತು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ನಡುವಿನ ಭಿನ್ನಮತ ಮಂಗಳವಾರದ ಸಭೆಯಲ್ಲಿಯೂ ಬಹಿರಂಗವಾಯಿತು. ಆತ್ಮಾನಂದ ಸೇರಿದಂತೆ ಅವರ ಬಣದ ಯಾವ ನಾಯಕರು ಸಭೆಗೆ ಹಾಜರಾಗಿರಲಿಲ್ಲ.
ಲೋಕಸಭೆ ಉಪ ಚುನಾವಣೆ ಪ್ರಚಾರ ಕಾರ್ಯ ಪ್ರಾರಂಭವಾಗುವಾಗ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಉಂಟಾಗಿದೆ. ಇದು ಹೀಗಿಯೇ ಮುಂದುವರರೆದರೆ, ಉಪ ಚುನಾವಣೆಯಲ್ಲಿ ನಟಿ ರಮ್ಯಾ ಗೆಲುವು ಕಷ್ಟವಾಗಬಹುದು.












Click it and Unblock the Notifications