ಹೈ-ಕ ಪ್ರತ್ಯೇಕ ರಾಜ್ಯ ಕೂಗಿಗೆ ಪಾಟೀಲರು ಗರಂ

371(ಜೆ) ಮಸೂದೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ಅಸಮರ್ಪಕ ಮೀಸಲಾತಿ ಒದಗಿಸಲಾಗಿದೆ. ಪ್ರತ್ಯೇಕ ರಾಜ್ಯ ಸ್ಥಾಪನೆಯೊಂದೆ ಇದಕ್ಕೆ ಪರಿಹಾರ. ಆ.15ರಂದು ಪ್ರತ್ಯೇಕ ರಾಜ್ಯ ಬಾವುಟ ಹಾರಿಸಲಾಗುವುದು ಎಂದು ಸಮಿತಿ ಕೆಲ ಸದಸ್ಯರು ಹೇಳಿದ್ದಾರೆ. ಆದರೆ, ಸಮಿತಿ ಅಧ್ಯಕ್ಷ ವೈಜನಾಥ್ ಪಾಟೀಲ್ ಅವರು ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಸರ್ಕಾರ ತ್ವರಿತ ಗತಿಯಲ್ಲಿ ನಿಯಮಾವಳಿಗಳನ್ನು ರೂಪಿಸಲಾಗಿದ್ದು ಅದರ ಜಾರಿಯಿಂದ ಲಾಭವಾಗಲಿದೆ. ಈ ಹಂತದಲ್ಲಿ ಈ ರೀತಿ ಬೇಡಿಕೆ ಸರಿಯಲ್ಲ. ನಿಯಮಾವಳಿಗಳನ್ನು ರೂಪಿಸಿ ಈಗಾಗಲೇ ರಾಷ್ಟ್ರಪತಿಗಳಿಗೆ ಕಳಿಸಲಾಗಿದೆ. ರಾಷ್ಟ್ರಪತಿ ಅಂಕಿತ ಬಿದ್ದ ನಂತರ ಮಸೂದೆ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ವೈಜನಾಥ್ ಪಾಟೀಲ್ ಹೇಳಿದರು.
ಆಂಧ್ರದಲ್ಲಿ ತೆಲಂಗಾಣ ರಾಜ್ಯ ಸ್ಥಾಪನೆಯಾದ ಬೆನ್ನಲ್ಲೇ ದೇಶದ ವಿವಿಧೆಡೆ ಪ್ರತ್ಯೇಕ ರಾಜ್ಯದ ಹೋರಾಟ ನಡೆಯುತ್ತಿರುವುದು ಒಳ್ಳೆ ಬೆಳವಣಿಗೆಯಲ್ಲ ಎಂದಿದ್ದಾರೆ.
ನಿಯಮಾವಳಿಗಳ ಬಗ್ಗೆ: ರಾಜ್ಯ ಮಟ್ಟದ ನೇಮಕಾತಿಗಳಲ್ಲಿ ಕೇವಲ ಶೇ 8 ರಷ್ಟು ಮೀಸಲಾತಿ ಒದಗಿಸಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ರಾಜ್ಯಪಾಲರ ಕೈ ತಪ್ಪಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಅಧ್ಯಕ್ಷರನ್ನಾಗಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಗೊಂದಲಗಳ ನಡುವೆ ಮಸೂದೆ ಜಾರಿಯಾಗಲಿ ನಂತರ ನೋಡಿಕೊಂಡರಾಯಿತು ಎಂಬ ಮನೋಭಾವ ಬಹುತೇಕ ಸದಸ್ಯರಲ್ಲಿದೆ.
ಎಚ್ ಕೆ ಪಾಟೀಲ್ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿಯ ಮುಂದೆ ಯಾವುದೆ ಆಕ್ಷೇಪಗಳಿದ್ದರೂ ಸಲ್ಲಿಸಬಹುದು. ಚರ್ಚೆ ನಂತರ ಮಸೂದೆ ಜಾರಿಗೆ ಬರಲಿದೆ ಎಂದು ವೈಜನಾಥ್ ಪಾಟೀಲ್ ವಿವರಿಸಿದರು.
ಸಂವಿಧಾನದ 371 ಜೆ ಕಲಂ ತಿದ್ದುಪಡಿಯಿಂದಾಗಿ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಜನರಿಗೆ ಭಾಗ್ಯದ ಬಾಗಿಲು ತೆರೆಯುವ ಸಾಧ್ಯತೆಯಿದೆ. ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ಒದಗಿಸಲಿದೆ.












Click it and Unblock the Notifications