ವಿಧಾನ ಪರಿಷತ್ ಚುನಾವಣಾ ಅಖಾಡಕ್ಕೆ ಕೆಜೆಪಿ?

ಆಗಸ್ಟ್ 22ರಂದು ನಡೆಯಲಿರುವ ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಎಂ.ಉದಾಸಿ ಅವರು ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಕೆಜೆಪಿ ಪಕ್ಷ ಮತ್ತೊಂದು ಚುನಾವಣೆ ಎದುರಿಸಲಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಎಂ.ಉದಾಸಿ ಸೋಲು ಅನುಭವಿಸಿದ್ದರು. ಆದ್ದರಿಂದ ಅವರನ್ನು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಲು ಪಕ್ಷ ತೀರ್ಮಾನಿಸಿದೆ.
ಧಾರವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಶಿವರಾಜ್ ಸಜ್ಜನ್ ಏಪ್ರಿಲ್ 4 ರಂದು ರಾಜೀನಾಮೆ ನೀಡಿ ಕೆಜೆಪಿ ಸೇರಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಈ ಚುನಾವಣೆ ಗೆದ್ದು, ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಉದಾಸಿ ಅವರನ್ನು ಕಣಕ್ಕಿಳಿಸಲು ಕೆಜೆಪಿ ತೀರ್ಮಾನಿಸಿದೆ.
ಸಭೆಯಲ್ಲಿ ಅಂತಿಮ : ಎರಡು ಲೋಕಸಭಾ ಮತ್ತು ಮೂರು ವಿಧಾನಪರಿಷತ್ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಚರ್ಚಿಸಲು ಗುರುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಪ್ರಮುಖ ನಾಯಕರ ಸಭೆಯ ಕರೆದಿದ್ದಾರೆ.
ಲೋಕಸಭಾ ಉಪ ಚುನಾವಣೆ ಬಗ್ಗೆ ಪಕ್ಷ ಹೆಚ್ಚು ಗಮನ ವಹಿಸದಿದ್ದರೂ, ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಅಭ್ಯರ್ಥಿಗಳಾರು ಎಂಬುದು ಇಂದಿನ ಸಭೆಯಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಚುನಾವಣೆ : ಧಾರವಾಡ, ಮೈಸೂರು ಮತ್ತು ಚಿತ್ರದುರ್ಗದಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಗಳಿಗಾಗಿ ಆ.22ರಂದು ಚುನಾವಣೆ ನಡೆಯಲಿದೆ. ಪರಿಷತ್ ನಲ್ಲಿ ಸದ್ಯ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಮೂರು ಕ್ಷೇತ್ರಗಳನ್ನು ಗೆದ್ದು, ಕಾಂಗ್ರೆಸ್ ಪರಿಷತ್ ನಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುಲು ನಿರ್ಧರಿಸಿತ್ತು. ಕೆಜೆಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಹಿನ್ನಡೆ ಉಂಟಾಗಲಿದೆ.( ಚುನಾವಣೆ ವೇಳಾಪಟ್ಟಿ)
ಅಂತೂ ಕೆಜೆಪಿ ಪಕ್ಷ ಎಲ್ಲಾ ಚುನಾವಣೆಯನ್ನು ಎದುರಿಸುತ್ತಿದೆ. ವಿಧಾನಪರಿಷತ್ ಚುನಾವಣೆ ಮುಗಿದ ನಂತರ ಪಕ್ಷ ಲೋಕಸಭೆ ಚುನಾವಣೆಗೆ ಇತರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುದೇ ಎಂದು ಕಾದು ನೋಡಬೇಕು.












Click it and Unblock the Notifications