4 ಜಿಲ್ಲೆಗಳ 14 ಕಡೆ ಲೋಕಾಯುಕ್ತ ದಾಳಿ

ಲೋಕಾಯುಕ್ತ ಅಧಿಕಾರಿ ಸತ್ಯ ನಾರಾಯಣ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ದಾಳಿ ವಿವರ ನೀಡಿದರು. ಹಾಸನ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ಆಸ್ಪತ್ರೆ ಅಧೀಕ್ಷಕ, ಪಟ್ಟಣ ಪಂಚಾಯ್ತಿ ಇಂಜಿನಿಯರ್ ಹಾಗೂ ಕರ್ನಾಟಕ ಗೃಹ ಮಂಡಳಿ ಸಹಾಯಕ ಇಂಜಿನಿಯರ್ ಮೇಲೆ ಲೋಕಾಯುಕ್ತ ಕಣ್ಣು ಬಿದ್ದಿದೆ.
* ಹಾಸನ ಜಿಲ್ಲಾಸ್ಪತ್ರೆ ಅಧೀಕ್ಷಕ ಮಂಜುನಾಥ್,
* ನಗರಸಭೆಯ ಇಂಜಿನಿಯರ್ ಆನಂದ್,
* ಬಳ್ಳಾರಿಯ ಕೆಎಚ್ಬಿ ಸಹಾಯಕ ಇಂಜಿನಿಯರ್ ಹಾಲೇಶಪ್ಪ,
* ದಾವಣಗೆರೆಯ ಪಂಚಾಯತ್ ರಾಜ್ ಇಲಾಖೆ ಸಹಾಯಕ ಇಂಜಿನಿಯರ್ ಆನಂದಪ್ಪ
ಹಾಲೇಶಪ್ಪ: ಬಳ್ಳಾರಿಯಲ್ಲಿ ಕರ್ನಾಟಕ ಗೃಹ ಮಂಡಳಿ ಸಹಾಯ ಇಂಜಿನಿಯರ್ ಆಗಿರುವ ಹಾಲೇಶಪ್ಪ ಅವರ ಶಿವಮೊಗ್ಗದ ವಿನೋಭ ನಗರದಲ್ಲಿರುವ ಮನೆ, ದಾವಣಗೆರೆಯಲ್ಲಿರುವ ಸಂಬಂಧಿಕರ ಮನೆಯ ಮೇಲೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹಾಲೇಶಪ್ಪ ಈ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ ಹಗರಣದಲ್ಲೂ ಆರೋಪಿಯಾಗಿದ್ದರು. ಮಧ್ಯಾಹ್ನದವರೆಗೂ ದಾಖಲೆಗಳ ಪರಿಶೀಲನೆ ನಡೆದಿದ್ದು, ಭಾರಿ ಪ್ರಮಾಣದ ಚಿನ್ನಾಭರಣ, ನಗದು, ವಾಹನ ಮತ್ತು ಭೂಮಿ ದಾಖಲೆಗಳು ಪತ್ತೆಯಾಗಿವೆ.
ಆನಂದಪ್ಪ: ದಾವಣಗೆರೆ ಪಂಚಾಯತ್ ರಾಜ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಆನಂದಪ್ಪ ಅವರ ಶ್ರೀ ಶಿವಕುಮಾರಸ್ವಾಮಿ ಬಡಾವಣೆ, ಶಾಮನೂರು ಶಿವಶಂಕರಪ್ಪ ಬಡಾವಣೆಯಲ್ಲಿರುವ ನಿವಾಸ, ವಿನಾಯಕನಗರದಲ್ಲಿರುವ ಅವರ ಸೋದರಿಯ ನಿವಾಸ, ಸ್ವಗ್ರಾಮ ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿಯಲ್ಲಿರುವ ಸೋದರನ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಲಿಂಗಾರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಮುಂಜಾನೆ 6.15ಕ್ಕೆ ಆಗಮಿಸಿದ 15 ರಿಂದ 20 ಅಧಿಕಾರಿಗಳ ತಂಡ ಅಪಾರ ಪ್ರಮಾಣದ ಚಿನ್ನಾಭರಣ, ಬೆಲೆಬಾಳುವ ನಿವೇಶನ, ಕೃಷಿ ಭೂಮಿ, 8 ಬ್ಯಾಂಕ್ ಖಾತೆಗಳ ಪಾಸ್ ಪುಸ್ತಕಗಳನ್ನು ವಶಕ್ಕೆ ತೆಗೆದುಕೊಂಡಿದ್ದು, 1995ರಲ್ಲಿ ಸೇವೆಗೆ ಸೇರಿದ್ದ ಇವರು ತಮ್ಮ ಆದಾಯಕ್ಕಿಂತಲೂ ಅಧಿಕ ಸಂಪತ್ತು ಹೊಂದಿರುವ ಮಾಹಿತಿ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು.
ಮಂಜುನಾಥ್: ಹಾಸನ ಜಿಲ್ಲಾಸ್ಪತ್ರೆ ಅಧೀಕ್ಷಕರಾಗಿರುವ ಮಂಜುನಾಥ್ ಅವರ ಹೌಸಿಂಗ್ ಬೋರ್ಡ್ ನಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಎಸ್ಪಿ ವೇದಮೂರ್ತಿ ನೇತೃತ್ವದ ತಂಡ ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ.ನಗರದಲ್ಲಿರುವ ಚನ್ನಪಟ್ಟಣ ಬಡಾವಣೆಯಲ್ಲಿ ಮಂಜುನಾಥ್ ಅವರ ನಿರ್ಮಾಣ ಹಂತದ ಕಟ್ಟಡಕ್ಕೂ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.
ಆನಂದ್: ಹಾಲಿ ಹಾಸನ ನಗರಸಭೆ ಚೀಫ್ ಇಂಜಿನಿಯರ್ ಆಗಿರುವ ಆನಂದ್ ಈ ಹಿಂದೆ ಆಲೂರು ಪಟ್ಟಣ ಪಂಚಾಯ್ತಿಯಲ್ಲೂ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು, ಇಂದು ಮುಂಜಾನೆ ಅವರ ಉದಯಗಿರಿ ನಿವಾಸದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.ಆನಂದ್ ನೆಲೆಸಿರುವ ನಿವಾಸ ಕೋಟಿಗಟ್ಟಲೆ ಬೆಲೆ ಬಾಳುತ್ತದೆ ಎಂದು ದಾಳಿ ವೇಳೆ ಅಂದಾಜಿಸಲಾಗಿದೆ.
ಅಕ್ರಮ ಆಸ್ತಿಗಳಿಕೆ ಹಾಗೂ ಅವ್ಯವಹಾರ ಆರೋಪಗಳಡಿಯಲ್ಲಿ ಲೋಕಾಯಕ್ತ ತಂಡ ಈ ಅಧಿಕಾರಿಗಳ ಮೇಲೆ ಮುಂಜಾನೆಯೇ ದಾಳಿ ನಡೆಸಿದ್ದು, ಕೋಟಿಗಳಿಗೂ ಮೀರಿದ ಸಂಪತ್ತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications