ಲೋಕಸಭೆ ಚುನಾವಣೆ: ಸೈಕಲ್ ಹತ್ತಲು 'ಗೂಳಿ' ಸಿದ್ಧತೆ
ಚಿತ್ರದುರ್ಗ, ಜುಲೈ 24: ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಆದರೂ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಅಲ್ಲಲ್ಲಿ ಕೆಲ ಹುರಿಯಾಳುಗಳು ತಮಗೆ ಪಸಂದವಾಗುವ ಕ್ಷೇತ್ರ, ಪಕ್ಷಗಳನ್ನು ಅಪ್ಪಿಕೊಳ್ಳಲು ದೊಡ್ಡ ಮಟ್ಟದಲ್ಲೇ ತಯಾರಿ ನಡೆಸಿದ್ದಾರೆ. ಹಾಗಾಗಿ, ಮತದಾರ ಪ್ರಭು ಸಹ ಈಗಿಂದಲೇ ಇಂತಹ ಸಂಭಾವ್ಯ ಅಭ್ಯರ್ಥಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ತಾಳೆ ಹಾಕಿ ನೋಡುವುದು ಸಮಂಜಸವಾದೀತು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಸರಳ ಬಹುಮತವನ್ನು ದಕ್ಕಿಸಿಕೊಡುವ ಮೂಲಕ ಕಳೆದೈದು ವರ್ಷ ಕರ್ನಾಟಕದ ಮಹಾಜನತೆ ಕಂಡಿದ್ದ 'ಪಕ್ಷಾಂತರ ಅವಾಂತರಕ್ಕೆ' ಮತದಾರ ಪ್ರಭು ತಿಲಾಂಜಲಿಯಿಟ್ಟಾಗಿದೆ. ಕೆಲ ಪಕ್ಷೇತರರು ವಿಧಾನಸಭೆಯಲ್ಲಿ ಹೇಳಹೆಸರಿಲ್ಲದಂತೆ ಸೋತ ಬಳಿಕ ಈಗ ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅವಕಾಶಗಳ ಬೆನ್ನೇರಿದ್ದಾರೆ.
ಆ ಪ್ರಯತ್ನವಾಗಿ 'ಪಕ್ಷೇತರರ ತಾಕತ್ತನ್ನು' ವಿಧಾನಸಭೆಯಲ್ಲಿಯೇ ಹರಾಜು ಹಾಕಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಎಂಬ ಜನಪ್ರತಿನಿಧಿ ಈಗ ಸೈಕಲ್ ಸವಾರಿಗೆ ತಯಾರಿ ನಡೆಸಿದ್ದಾರೆ.
ಅನಿತಾ ಕುಮಾರಸ್ವಾಮಿ ಎದುರು ಭರ್ಜರಿ ಗೆಲುವಿನೊಂದಿಗೆ ಚನ್ನಪಟ್ಟಣದಲ್ಲಿ ಸೈಕಲ್ ಶಾಪ್ ತೆರೆದು, ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತಾಗಿರುವ ಸಿಪಿ ಯೋಗೀಶ್ವರ್ ಅವರು ಗೂಳಿಹಟ್ಟಿ ಶೇಖರ್ ಅವರನ್ನು ತಮ್ಮ ಸಮಾಜವಾದಿ ಪಕ್ಷಕ್ಕೆ ಕರೆತಂದಿದ್ದಾರೆ. ಗೂಳಿಹಟ್ಟಿ ಎಸ್ಪಿ ಪಕ್ಷ ಸೇರ್ಪಡೆ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಗೂಳಿಹಟ್ಟಿ ಶೇಖರ್ ಲೋಕಸಭೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಜತೆಗೆ ಚಿತ್ರದುರ್ಗ ಭಾಗದಲ್ಲಿ ಪಕ್ಷವನ್ನು ಸಂಘಟಿಸುವ ಹೊಣೆಗಾರಿಕೆಯೂ ಅವರಿಗೆ ವಹಿಸಲಾಗಿದೆ ಎಂದು ಸಿಪಿ ಯೋಗೀಶ್ವರ್ ತಿಳಿಸಿದ್ದಾರೆ. ದುರ್ಗದಲ್ಲಿ ಜುಲೈ 29ರಂದು ಸಮಾಜವಾದಿ ಪಕ್ಷವು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು, ಆ ಸಭೆಯಲ್ಲಿ ಗೂಳಿಹಟ್ಟಿ ಅಧಿಕೃತವಾಗಿ ಸೈಕಲ್ ಏರಲಿದ್ದಾರೆ.