ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಾಭಿವೃದ್ಧಿಗೆ 2ನೇ ಯೋಜನೆ ಸಿದ್ಧ
ಸುಳ್ಯ(ದಕ್ಷಿಣ ಕನ್ನಡ), ಜುಲೈ23: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ 2ನೆಯ ಹಂತದ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ. ಮೂರು ವರ್ಷಗಳ ಹಿಂದೆ ಮೊದಲ ಹಂತದಲ್ಲಿ ಕ್ಷೇತ್ರದ ಪುರಾಭಿವೃದ್ಧಿ ಕೈಗೆತ್ತಿಕೊಳ್ಳಲಾಗಿತ್ತು.
ಇಲ್ಲಿನ ಕಾಶಿಕಟ್ಟೆಯಿಂದ ಕುಮಾರಧಾರೆಯವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಈ ಬಾರಿ ಯೋಜನೆಯನ್ನು ಸಿದ್ಧಗೊಳಿಸಲಾಗಿದೆ. ಈ ಯೋಜನೆ ಜಾರಿಯಾದ ಮೇಲೆ ಇಡೀ ಸುಬ್ರಹ್ಮಣ್ಯ ಪೇಟೆಯ ಚಿತ್ರಣ ಸಂಪೂರ್ಣ ಬದಲಾಗಲಿದೆ. ಪ್ರವಾಸಿಗರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವುದು ಆರಾಮದಾಯಕವಾಗಲಿದೆ/ಸಹ್ಯವಾಗಲಿದೆ.
ಯೋಜನೆಯಿಂದ ಹಲವು ಕಟ್ಟಡಗಳು ನೆಲಸಮವಾಗಲಿದ್ದು, ಹಲವರು ನಿವೇಶನ, ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಕುಕ್ಕೆ ಕ್ಷೇತ್ರದ ಅಭಿವೃದ್ಧಿಗಾಗಿ 180 ಕೋಟಿ ರೂಪಾಯಿಗಳ ಮಾಸ್ಟರ್ ಪ್ಲ್ಯಾನ್ ಇದಾಗಿದೆ. ಇದು 3 ಹಂತದಲ್ಲಿ ಜಾರಿಯಾಗಲಿದೆ. ಈಗಾಗಲೇ 60 ಕೋಟಿ ರೂ ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿ ನಡೆದಿದೆ.

ಕುಮಾರಧಾರೆಯಿಂದ ಕಾಶಿಕಟ್ಟೆವರೆಗೆ ಚತುಷ್ಪಥ ರಸ್ತೆ
ಇನ್ನು 60 ಕೋಟಿ ರೂ ಗಳ ಎರಡನೇ ಹಂತದ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದ್ದು, ಇದರಲ್ಲಿ ದೇವಸ್ಥಾನದಿಂದ ಕುಮಾರಧಾರೆವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಯೋಜನೆಯಿದೆ.
ಯೋಜನೆಯ ಪ್ರಕಾರ ಕುಮಾರಧಾರೆಯಿಂದ ಕಾಶಿಕಟ್ಟೆವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗುವುದು. ಇದು 30 ಮೀಟರ್ ಅಗಲ ಇರುತ್ತದೆ. ರಸ್ತೆ ಮಧ್ಯೆ ಒಂದು ಮೀಟರ್ ಅಗಲದ ಡಿವೈಡರ್. ಅದರ ಎರಡೂ ಬದಿಗಳಲ್ಲಿ ತಲಾ 11 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ. ಅದರ ಇಕ್ಕೆಲಗಳಲ್ಲಿ ತಲಾ 2 ಮೀಟರ್ ಅಗಲದ ಫುಟ್ಪಾತ್ ನಿರ್ಮಾಣವಾಗಲಿದೆ

ಒಂದೂವರೆ ಮೀಟರ್ ಅಗಲದ ಹಸಿರು ಪ್ರದೇಶ
ಅದರ ಹೊರಗಡೆ ಎರಡೂ ಬದಿಗಳಲ್ಲಿ ತಲಾ ಒಂದೂವರೆ ಮೀಟರ್ ಅಗಲದ ಹಸಿರು ಪ್ರದೇಶ ಇರುತ್ತದೆ. ಕುಕ್ಕೆ ದೇವಳದ ಎದುರು ಭಾಗದಿಂದ ಕಾಶಿಕಟ್ಟೆಯವರೆಗೆ ತಲಾ 15 ಮೀಟರ್ ಅಗಲದ ಎರಡು ಏಕಮುಖ ಸಂಚಾರದ ರಸ್ತೆಗಳಿರುತ್ತವೆ. ಅಂದರೆ ಈಗ ಇರುವ ರಥಬೀದಿ ರಸ್ತೆಯನ್ನು 15 ಮೀಟರ್ ಅಗಲಗೊಳಿಸುವುದು. ಮತ್ತು ಸವಾರಿ ಮಂಟಪದಿಂದ ಕಾಶಿ ಕಟ್ಟೆವರೆಗೆ ಇರುವ ಬೈಪಾಸ್ ರಸ್ತೆಯನ್ನು 15 ಮೀಟರ್ ಅಗಲಗೊಳಿಸುವುದು.

ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣ ವೃತ್ತ
ರಸ್ತೆಯನ್ನು ಇಷ್ಟು ಅಗಲಗೊಳಿಸುವಾಗ ಈಗ ಇರುವ ಕಟ್ಟಡಗಳನ್ನು ಅರ್ಧ ಕೆಡವಲಾಗುತ್ತದೆ. ದೇವಳದ ಎದುರುಗಡೆ ಜಂಕ್ಷನಿನಲ್ಲಿರುವ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣದ ಸ್ವಲ್ಪ ಭಾಗವೂ ಕೆಡವಲ್ಪಡುತ್ತದೆ. ಕಾಶಿಕಟ್ಟೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಪೂರ್ತಿ ತೆರವುಗೊಳ್ಳಲಿದೆ. ಅಲ್ಲಿ ಎರಡು ಏಕ ಮುಖ ರಸ್ತೆಗಳು ಸೇರುವಂತೆ ವೃತ್ತವೊಂದನ್ನು ನಿರ್ಮಿಸಲಾಗುವುದು. ಇದಲ್ಲದೆ ಈಗ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣ ಇರುವ ಜಾಗದ ಬಳಿ ಕೂಡಾ ವೃತ್ತವೊಂದು ತಲೆ ಎತ್ತಲಿದೆ.

ಛತ್ರಗಳನ್ನು ತೆಗೆದು 30 ಅಂಗಡಿಗಳಿರುವ ಕಟ್ಟಡ
ಈ ಕಾಮಗಾರಿಗಳ ಜತೆಗೆ ದೇವಳದ ಎದುರು ಭಾಗದಲ್ಲಿ ಎರಡೂ ಕಡೆ ಇರುವ ದೇವಳದ ಹಳೆ ಕಟ್ಟಡಗಳನ್ನು ಕೆಡವಿ ಅಲ್ಲಿ ವಿಶಾಲವಾದ ಸ್ಥಳಾವಕಾಶ ಮಾಡಲು ನಿರ್ಧರಿಸಲಾಗಿದೆ. ಮಠದ ಆಸ್ತಿಯಾಗಿರುವ ಶ್ರೀನಿಕೇತನ ಹೊರತುಪಡಿಸಿ ದೇವಳದ ಎಲ್ಲ ಕಟ್ಟಡಗಳನ್ನು ಛತ್ರಗಳನ್ನು ತೆಗೆದು ಅಲ್ಲಿ ಒಂದು ಕಡೆ 30 ಅಂಗಡಿಗಳಿರುವ ಕಟ್ಟಡವೊಂದನ್ನು ನಿರ್ಮಿಸಲಾಗುವುದು. ಈ ಅಂಗಡಿಗಳಲ್ಲಿ ದೇವಳಕ್ಕೆ ಬರುವ ಭಕ್ತಾದಿಗಳಿಗೆ ಅವಶ್ಯವಿರುವ ಪೂಜಾ ಸಾಮಗ್ರಿಗಳು ದೊರೆಯುವಂತೆ ಮಾಡಲಾಗುವುದೆಂದು ಮಾಹಿತಿ ಇದೆ.

ಹಲವರಿಗೆ ನಿವೇಶನ, ಕಟ್ಟಡ ಕಳೆದುಕೊಳ್ಳುವ ಭೀತಿ
ಕಾಶಿಕಟ್ಟೆ ಯಿಂದ ಕುಮಾರಧಾರವರೆಗೆ ಹೋಗುವಾಗ ಎಡಭಾಗದಲ್ಲಿ ಬಿಲದ್ವಾರ ಮತ್ತು ವನದುರ್ಗಾ ದೇವಿ ದೇವಸ್ಥಾನ ಇರುವುದರಿಂದ ಬಲಬದಿಯಲ್ಲಿ ಹೆಚ್ಚು ಜಾಗ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಅದರಿಂದ ಈಗ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿಕೊಂಡಿರುವವರ ಅಂಗಳ, ಕೆಲವು ಕಟ್ಟಡಗಳ ಎದುರಿನ ಗೋಡೆ ತೆರವು ಗೊಳ್ಳಲಿವೆ. ಈ ಬಗ್ಗೆ ಮಾಸ್ಟರ್ ಪ್ಲ್ಯಾನ್ನ ಎಂಜಿನಿಯರಿಂಗ್ ವಿಭಾಗದವರು ಈಗಾಗಲೇ ಗುರುತು ಹಾಕಿದ್ದಾರೆ. ಹಲವರು ಜಾಗ ಮತ್ತು ಕಟ್ಟಡ ಕಳೆದು ಕೊಳ್ಳುವ ಭೀತಿಗೊಳಗಾಗಿದ್ದಾರೆ. ಇದರಿಂದ ವಿರೋಧದ ದನಿಗಳೂ ಮೊಳಗಿವೆ.












Click it and Unblock the Notifications