ಕಾರು ಅಪಘಾತ : 3 ವಿದ್ಯಾರ್ಥಿನಿಯರಿಗೆ ಗಾಯಗಳು

ಮೌಂಟ್ ಕಾರ್ಮೆಲ್ ಕಾಲೇಜ್ನಲ್ಲಿ ಪಿಯುಸಿ ಓದುತ್ತಿರುವ, ಆರ್ ಟಿ ನಗರದ ರಾಗಿ (16), ಶ್ರೇಯಾ ಪಾಟೀಲ್ (16) ಹಾಗೂ ಮೊದಲ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಕೋಡಿಹಳ್ಳಿಯ ಅನುಪಮಾ (19) ಎಂಬುವರು ಗಾಯಗೊಂಡವರು.
ಸದರಿ ಶಿಕ್ಷಕಿ, ಸ್ಯಾಂಟ್ರೋ ಕಾರಿನಲ್ಲಿ ಬುಧವಾರ ಬೆಳಗ್ಗೆ 8.20ರ ಸುಮಾರಿಗೆ ಕಾಲೇಜಿನೊಳಕ್ಕೆ ಪ್ರವೇಶಿಸುವಾಗ ಹಿಂದಿನ ಕಾರೊಂದು ಡಿಕ್ಕಿ ಹೊಡೆದಿದೆ. ಹೆಚ್ಚಿನ ಅನಾಹುತ ತಪ್ಪಿಸಲು ಆಕೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದಿದ್ದರಿಂದ ಕಾರು ವೇಗ ಪಡೆದು ಅಡ್ಡಾದಿಡ್ಡಿ ನುಗ್ಗಿದೆ. ನಿಯಂತ್ರಣ ಕಳೆದುಕೊಂಡ ಕಾರು ಕಾಲೇಜ್ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು, ನಂತರ ವಿದ್ಯಾರ್ಥಿಯರ ಮೇಲೆ ನುಗ್ಗಿದೆ.
ಮೊದಲು ಅನುಪಮಾಗೆ ಡಿಕ್ಕಿ ಹೊಡೆಯಿತು. ಮುಂದೆ ಹೋಗುತ್ತಿದ್ದ ಶ್ರೇಯ ಮತ್ತು ರಾಗಿ ಏನಾಯಿತೆಂದು ತಿರುಗಿ ನೋಡುವಷ್ಟರಲ್ಲಿ ಕಾರು ಅವರಿಗೂ ಗುದ್ದಿದೆ. ರಾಗಿ ಕಾರು ಮತ್ತು ಗೋಡೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರಿಂದ ಅವರಿಗೆ ಕಾರು ಜೋರಾಗಿ ಗುದ್ದಿದೆ. ಅಪಘಾತಕ್ಕೆ ಕಾರಣರಾದ ಮೌಂಟ್ ಕಾರ್ಮೆಲ್ ಕಾಲೇಜ್ ಉಪನ್ಯಾಸಕಿ ಚಾರ್ಮೈನ್ ಜೆರೋಮಾ ಎಂಬುವರನ್ನು ಹೈಗ್ರೌಂಡ್ಸ್ ಸಂಚಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಶ್ರೇಯಾ ಅವರ ಎಡಗಾಲು ಹಾಗೂ ರಾಗಿ ಅವರ ಬಲಗಾಲು ಮುರಿದಿದ್ದು, ಸಣ್ಣ ಪುಟ್ಟ ಗಾಯಗಳಾಗಿರುವ ಅನುಪಮಾ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ರಾಗಿ ಹಾಗೂ ಶ್ರೇಯಾ ಬ್ಯಾಪ್ಟಿಸ್ಟ್ ಹಾಗೂ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡವರ ಪೈಕಿ ರಾಗಿ ಎಂಬ ವಿದ್ಯಾರ್ಥಿನಿ ಕೆಪಿಎನ್ ಫೋಟೊ ನ್ಯೂಸ್ ಮಾಲೀಕರಾದ ಸಗ್ಗೆರೆ ರಾಮಸ್ವಾಮಿ ಅವರ ಪುತ್ರಿ. ಬಾಲ್ಯದಿಂದಲೂ ಈಕೆ ಭರತನಾಟ್ಯದಲ್ಲಿ ತುಂಬಾ ಆಸಕ್ತಿ ಬೆಳೆಸಿಕೊಂಡಿದ್ದಳು. ಆರ್ ಟಿ ನಗರದ ಡಾ. ಪ್ರಿಯಾಶ್ರೀ ಎಂಬುವವರ ಬಳಿ ಭರತನಾಟ್ಯ ಸಹ ಕಲಿಯುತ್ತಿದ್ದಳು.
ಈ ಅಪಘಾತದಿಂದ ಆಕೆಯ ತೊಡೆಗೆ ಬಲವಾದ ಪೆಟ್ಟು ಬಂದಿದ್ದು, ಮೂಳೆಗಳು ಮುರಿದಿರುವ ಸಾಧ್ಯತೆ ಇದೆ. ಗುರುವಾರ ರಾಗಿಗೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ನೃತ್ಯಗಾತಿ ಆಗಬೇಕೆಂಬ ಕನಸು ಕಂಡಿದ್ದ ರಾಗಿಗೆ ಈ ಅನಿರೀಕ್ಷಿತ ಅಪಘಾತದಿಂದ ಆಘಾತವಾಗಿದೆ.
ಅಪಘಾತದಲ್ಲಿ ರಾಗಿ ಬಲಗಾಲಿಗೆ ಪೆಟ್ಟಾಗಿದ್ದು, ಕಾರು ಕಾಲಿನ ಮೇಲೆ ಹರಿದಿರುವುದರಿಂದ ತೊಡೆ ಮೂಳೆಗಳು ಮುರಿದಿವೆ. ಶಸ್ತ್ರ ಚಿಕಿತ್ಸೆ ನಂತರವೂ ಆಕೆ ಮೊದಲಿನಂತಾಗುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಆಕೆ ಭರತನಾಟ್ಯ ಕಲಾವಿದೆಯಾಗಬೇಕು ಎಂಬ ಕನಸು ಈ ಅಪಘಾತದಿಂದ ಕಮರಿ ಹೋಗಿದೆ ಎಂದು ಆಕೆಯ ಕುಟುಂಬದ ಸದಸ್ಯರು ತಿಳಿಸಿದ್ದಾರೆ.












Click it and Unblock the Notifications