ಯುಆರ್ಎ ಗೌರವ ಮಾಲಿಕೆ: ಎಚ್ಚೆಸ್ವಿ ಕುಮಾರವ್ಯಾಸ ಕಥಾಂತರ
ಬೆಂಗಳೂರು, ಜು.18: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಯು.ಆರ್ ಅನಂತಮೂರ್ತಿ ಅವರ ಗೌರವ ಮಾಲಿಕೆ ಸರಣಿಯ ನಾಲ್ಕನೇ ಹೊತ್ತಿಗೆ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಸರಣಿಯಲ್ಲಿ ಹಿರಿಯ ಕವಿ ಎಚ್.ಎಸ್ ವೆಂಕಟೇಶ್ ಮೂರ್ತಿ ಅವರ 'ಕುಮಾರವ್ಯಾಸ ಕಥಾಂತರ' ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಅಭಿನವ ಪ್ರಕಾಶನ ಸಂಸ್ಥೆ ಹೇಳಿದೆ.
ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಆದಿಕಾಂಡದ ಭಾಗವುಳ್ಳ 'ಕುಮಾರವ್ಯಾಸ ಕಥಾಂತರ' ಕೃತಿಯನ್ನು ಜು.20ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ಯು.ಆರ್ ಅನಂತಮೂರ್ತಿ ಅವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ವಿವರ ಕೆಳಗಿನಂತಿದೆ:

ಪ್ರಸ್ತಾವನೆ: ಎನ್.ಎ.ಎಂ ಇಸ್ಮಾಯಿಲ್
ಮುಖ್ಯ ಅತಿಥಿ : ನರಹಳ್ಳಿ ಬಾಲಸುಬ್ರಮಣ್ಯ(ಹಿರಿಯ ವಿಮರ್ಶಕರು), ವಿಕ್ರಂ ಹತ್ವಾರ್ (ಕಥೆಗಾರ, ಚಿಂತಕ)
ಉಪಸ್ಥಿತಿ: ಡಾ. ಯು.ಆರ್ ಅನಂತಮೂರ್ತಿ.ಷ. ಶೆಟ್ಟರ್( ಅನಂತಮೂರ್ತಿ ಗೌರವ ಮಾಲಿಕೆ ಸಂಪಾದಕರು)
ಕೃತಿ ಬಿಡುಗಡೆ: ಡಾ. ಚಂದ್ರಶೇಖರ ಕಂಬಾರ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18
ದಿನಾಂಕ/ದಿನ: 20/07/2013, ಶನಿವಾರ, ಸಂಜೆ 6ಕ್ಕೆ
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಭಾಪರ್ವ-ಸಂಧಿ 9 ರ 14ನೇ ಪದ್ಯವನ್ನು ನೀಡಲಾಗಿದೆ.
ನೆಳಲು ಜಲದಲಿ ನಡುಗಲಿನ ಮಂ
ಡಲಕೆ ಕಂಪವೆ? ಧೂಮಶಿಖಿ ಕು
ಪ್ಪಳಿಸಿದರೆ ಕಂದುವುದೆ ನಭ? ಕೆಂಧೂಳಿಯೊಡಮುರಿದು |
ಸುಳಿದರನಿಲನ ತೊಳೆದರೆ? ನರ
ರೊಳಗೆ ನರ ರೂಪದಲಿ ಜನಿಸಿದ
ರೊಳಗು ಡಿಳ್ಳ್ದೆ ಪರಮ ಸುಖನಿಧಿಗೆಂದನಾ ಭೀಷ್ಮ||
ಕುಮಾರವ್ಯಾಸ ಕಥಾಂತರ ಬೆನ್ನುಡಿ ಹೀಗಿದೆ
ಕುಮಾರವ್ಯಾಸ ಕಥಾಂತರವು ಅಂತರವನ್ನು ಮಾತ್ರವಲ್ಲ, ಆಂತರ್ಯವನ್ನೂ ಲಕ್ಷಿಸುವ ಉದ್ದೇಶ ಹೊಂದಿದೆ. ಕಥೆಯಷ್ಟೇ ಕಥಾ ಸಂವಿಧಾನವೂ ನನಗೆ ಮುಖ್ಯ. ವ್ಯಾಸರು ಸೃಷ್ಟಿಸಿದ ಮಹಾಭಾರತವೆಂಬ ವಿಶಿಷ್ಟವಾದ ಸಾರ್ವತ್ರಿಕ "ಭಾಷೆಯ" ಮೂಲಕ, ಕುಮಾರವ್ಯಾಸನು ತನ್ನ ಅಂತರಂಗದ ಖಾಸಗಿ "ಮಾತನ್ನು" ಹೇಗೆ ಮೂಡಿಸಿ ಕೃತಾರ್ಥನಾದನು ಎಂಬುದನ್ನು ವಿಶ್ಲೇಷಿಸುವ ಯತ್ನ ಇಲ್ಲಿದೆ. ಭಾಷೆ ಸಮಷ್ಟಿಯದು; ಮಾತು ವ್ಯಷ್ಟಿಯದು ಎಂಬುದು ನನ್ನ ದೃಢವಾದ ನಂಬಿಕೆ. ಜೊತೆಗೆ ಕಾವ್ಯವೆನ್ನುವುದು ಮುಖ್ಯವಾಗಿ ಒಂದು ವಚನರಚನೆಯೆಂಬುದನ್ನು ಕುಮಾರವ್ಯಾಸನಂಥ ಕಾವ್ಯಯೋಗಿಯು ಮಾನ್ಯಮಾಡಿದ್ದಾನೆ ಎಂಬುದೂ ನನಗೆ ಅಷ್ಟೇ ಮುಖ್ಯ. ಆಶಯ ಮತ್ತು ಆಕಾರಗಳ ಅವಿನಾಸಂಬಂಧವನ್ನು ಕುಮಾರವ್ಯಾಸನ ಕಾವ್ಯಯೋಗವು ಹೇಗೆ ಸಾಧಿಸಿದೆ ಎಂಬುದನ್ನು ರಚನೆಗಳನ್ನು ಮುಟ್ಟಿ ಮುಟ್ಟಿ ಮನನ ಮಾಡಿಕೊಳ್ಳುವುದು ನನ್ನ ಈ ಕೃತಿಯ ಆಪ್ತ ಹವಣಿಕೆ.
-ಎಚ್ಚೆಸ್ವಿ
ಸುದ್ದಿ ಕೃಪೆ: ಅವಧಿ












Click it and Unblock the Notifications