ಮಳೆಯಲ್ಲಿ ಮಿಂದೆದ್ದ ಮಲೆನಾಡು, ಕರಾವಳಿ ಚಿತ್ರಗಳು
ಬೆಂಗಳೂರು, ಜು.3: ಉದ್ಯಾನ ನಗರಿ ಜನ ಹೊಟ್ಟೆ ಉರಿದುಕೊಳ್ಳುವಂತೆ ನೈಋತ್ಯ ಮುಂಗಾರು ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಸುರಿಸುತ್ತಿದೆ. ಇನ್ನೆರಡು ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಅಷ್ಟೇ ಮಳೆ ಬಿದ್ದರೆ ಲಕ್ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತಿದೆ.
ರಾಜ್ಯದ ಸುಮಾರು 9 ಜಿಲ್ಲೆಗಳಲ್ಲಿ ದಕ್ಷಿಣ ಒಳನಾಡಿನಲ್ಲೂ ಮತ್ತೆ ಮಳೆ ಉತ್ತಮವಾಗಿ ಆರಂಭಗೊಂಡಿದೆ. ಮಲೆನಾಡು ಭಾಗದಲ್ಲಿ ಭಾರೀ ವರ್ಷಧಾರೆಯಾಗಿದೆ. ಅನೇಕ ಕಡೆ ಗುಡ್ಡ ಕುಸಿತ, ಸೇತುವೆ ಹಾನಿ ಉಂಟಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಮುನ್ನಚ್ಚರಿಕೆ ವಹಿಸಿದ ಜಿಲ್ಲಾಡಳಿತಗಳು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 200 ಮಿ.ಮೀ.ಗೂ ಹೆಚ್ಚುಮಳೆಯಾಗಿದ್ದು, ಮಳೆ ಅರ್ಭಟ ಮುಂದುವರೆದಿದೆ. ಮಂಗಳೂರು ಕಡಬ ಸೇತುವೆ ಕುಸಿತಗೊಂಡಿದೆ. 9 ಮನೆಗಳಿಗೆ ಹಾನಿಯಾಗಿದೆ.
ಮಳೆ ಹೇಗಿದೆ?: 15 ಜಿಲ್ಲೆಗಳಲ್ಲಿ ಮುಂಗಾರು ಮಳೆ ವಾಡಿಕೆ ಪ್ರಮಾಣದಲ್ಲಾಗಿದೆ. 9 ಜಿಲ್ಲೆಗಳಲ್ಲಿ ವ್ಯಾಪಕ ಹಾಗೂ ಭಾರೀ ಪ್ರಮಾಣದ ಮಳೆಯಾಗಿದ್ದರೆ, 5 ಜಿಲ್ಲೆಗಳಲ್ಲಿ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಉಳಿದಂತೆ 8 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೆ 6 ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ.
ಕರ್ನಾಟಕರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತ್ಯಧಿಕ 554 ಮಿ.ಮೀ. ನಷ್ಟು ಭಾರೀ ಮಳೆಯಾಗಿದೆ. ಮಿಕ್ಕ ವಿವರ ಹಾಗೂ ಒಂದಷ್ಟು ಮಲೆನಾಡಿನ ಮಳೆ ಚಿತ್ರಗಳನ್ನು ಮುಂದೆ ನೋಡಿ..

ಬುಧವಾರದ ಮಳೆ ದಾಖಲೆ
ಕರಾವಳಿ ಭಾಗವಾದ ಉತ್ತರ ಕನ್ನಡ 267.5 ಮಿ.ಮೀ., ದಕ್ಷಿಣ ಕನ್ನಡ 191 ಮಿ.ಮೀ., ಚಿಕ್ಕಮಗಳೂರು 196.5 ಮಿ.ಮೀ., ಕೊಡಗು 116 ಮಿ.ಮೀ., ಉಡುಪಿ 273.5 ಮಿ.ಮೀ, ಶಿವಮೊಗ್ಗ 354 ಮಿ.ಮೀ., ದಾವಣಗೆರೆ, ಹಾವೇರಿ 82.8 ಮಿ.ಮೀ. ಹಾಗೂ ಬೀದರ್ 94 ಮಿ.ಮೀ. ಭಾರೀ ಮಳೆಯಾಗಿದ್ದು, ಇಂದೂ ಕೂಡ ಮಳೆ ಮುಂದುವರೆದಿದೆ.
ಚಿತ್ರಕೃಪೆ: ರಂಚಿತ್ ಮಾಲುಗೋಡು

ರಾಜ್ಯದ ವಿವಿಧೆಡೆ ಮಳೆ ವಿವರ
ಮೈಸೂರು, ಚಿಕ್ಕಬಳ್ಳಾಪುರ, ಬೆ.ಗ್ರಾಮಾಂತರ, ಹಾಸನ , ಧಾರವಾಡ ಜಿಲ್ಲೆಗಳಲ್ಲಿ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಕೋಲಾರ, ತುಮಕೂರು, ಚಿತ್ರದುರ್ಗ, ಮಂಡ್ಯ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದ್ದರೆ, ಗುಲ್ಬರ್ಗ, ಬಾಗಲಕೋಟೆ, ಬೆ.ನಗರ, ರಾಮನಗರ, ಚಾಮರಾಜನಗರ, ಬೆಳಗಾವಿ,ರಾಯಚೂರು , ಗದಗ ಜಿಲ್ಲೆಗಳಲ್ಲೂ ಅಲ್ಲಲ್ಲಿ ಮಳೆ ಬಿದ್ದ ವರದಿಯಾಗಿದೆ.
ಚಿತ್ರ ಕೃಪೆ: ರಂಚಿತ್ ಮಾಲುಗೋಡು
ಮುನ್ನೆಚ್ಚರಿಕೆ
ಉಡುಪಿ, ಕುಂದಾಪುರ, ಕಾರ್ಕಳ, ಭಟ್ಕಳ, ಹೊನ್ನಾವರ, ಕುಮ್ಟಾ ಸೇರಿದಂತೆ ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಮುಂದಿನ 24ಗಂಟೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ.
ಹವಾ ಮುನ್ಸೂಚನೆ ಪ್ರಕಾರ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ. ಬೀದರ್, ಯಾದಗಿರಿ, ಬಿಜಾಪುರ ಭಾಗದಲ್ಲಿ ಅರೆ ವ್ಯಾಪಕ ಮಳೆ ಮಧ್ಯಮ ಪ್ರಮಾಣದಲ್ಲಿ ಬೀಳುವ ಮುನ್ಸೂಚನೆಗಳಿವೆ. ದಕ್ಷಿಣ ಒಳನಾಡಿನಲ್ಲಿ ಹಗುರ ಅಥವಾ ಸಾಧಾರಣ ಮಳೆ ಸಂಭವವಿದೆ.
ಚಿತ್ರ ಕೃಪೆ: ಮಂಡಗದ್ದೆ, ಭರತ್

ಜಲಾಶಯಗಳು ಭರ್ತಿ
ಮಲೆನಾಡು ಹಾಗೂ ಪಶ್ಚಿಮ ಮಲೆನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುತ್ತಿದ್ದರೂ ಹೆಚ್ಚಿನ ಪ್ರಮಾಣದ ಮಳೆ ನೀರು ಸಮುದ್ರದ ಪಾಲಾಗುತ್ತಿದೆ.
ತುಂಗಾ, ಭದ್ರ, ಲಿಂಗನಮಕ್ಕಿ, ಕಬಿನಿ, ಹಾರಂಗಿ ಜಲಾಶಯಗಳ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ. ಹಾರಂಗಿ ಜಲಾಶಯ ಒಳ ಹರಿವು ಹೆಚ್ಚಳವಾಗಿದೆ ಸುಮಾರು 4400 ಕ್ಯೂಸೆಕ್ಸ್ ಹರಿದು ಬಂದಿದೆ. ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.ಚಿತ್ರ ಕೃಪೆ: ತುಂಗಾ ನದಿ, ಜಗದೀಶ್ ಶೃಂಗೇರಿ
ಗುಡ್ಡ ಕುಸಿತ, ಸಂಚಾರ ಅಸ್ತವ್ಯಸ್ತ
* ಮಲೆನಾಡಿನಲ್ಲಿ ಭಾರಿ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206 ರ ಜೋಗ ಜಲಪಾತದ ಬಳಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ.
* ಸೇವಾಕಟ್ಟೆ-ಹಾಡುಗಟ್ಟ ಗ್ರಾಮಗಳ ಮಧ್ಯೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
* ಮಂಗಳೂರು, ಶೃಂಗೇರಿ ಹೆದ್ದಾರಿ ಮಳೆಯಿಂದಾಗಿ ಬಂದ್ ಆಗಿದ್ದರೆ ತುಂಗಾ ನದಿಯಲ್ಲಿ ಪ್ರಮಾಹ ಉಂಟಾಗಿ ಮಂಡಗದ್ದೆ ಭಾಗದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ.
* ಶಾಲೆಗಳಿಗೆ ರಜೆ: ತೀರ್ಥಹಳ್ಳಿ, ಶೃಂಗೇರಿ, ಕೊಪ್ಪಗಳ, ಮೂಡಿಗೆರೆ, ಎನ್ ಆರ್ ಪುರದಲ್ಲೂ ನಿರಂತರ ಮಳೆ. ಕಾಲೇಜುಗಳಿಗೆ ರಜೆ ನೀಡಿಲ್ಲ.
ಚಿತ್ರ ಕೃಪೆ: ತುಂಗಾ ನದಿ, ಜಗದೀಶ್ ಶೃಂಗೇರಿ

ಕಾಫಿತೋಟದ ಚಿತ್ರ
ಚಿಕ್ಕಮಗಳೂರಿನಲ್ಲಿ ಮಳೆ ನಿಂತ ಗ್ಯಾಫ್ ನಲ್ಲಿ ಮಧುಸೂದನ್ ಪೆಜತ್ತಾಯ ಅವರ ನೆಚ್ಚಿನ ಕಾಫಿತೋಟದ ಚಿತ್ರ












Click it and Unblock the Notifications