ಬಳ್ಳಾರಿ: ಅಡುಗೆ ನಿರತ ತಾಯಿ ಮಗು ಬೆಂಕಿಗೆ ಆಹುತಿ

ಮೇಲ್ನೋಟಕ್ಕೆ ಇದು ಅಗ್ನಿ ಆಕಸ್ಮಿಕವಾಗಿ ಕಂಡು ಬಂದರೂ ಪ್ರಕರಣದ ನಿಗೂಢತೆ ಆತ್ಮಹತ್ಯೆ, ಕೊಲೆ ತನಕ ಬಂದು ನಿಂತಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ತಾಳೂರು ರಸ್ತೆ ನಿವಾಸಿ 26 ವರ್ಷ ವಯಸ್ಸಿನ ಅನಿತಾ ಹಾಗೂ 4 ತಿಂಗಳ ಗಂಡು ಮಗು ಸಾವನ್ನಪ್ಪಿದ ನತದೃಷ್ಟರು. ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಅಡುಗೆ ಮನೆಗೆ ಬಂದ ಅನಿತಾ, ಎಂದಿನಂತೆ ಸ್ಟವ್ ಹಚ್ಚಿದ್ದಾರೆ. ಆದರೆ, ಬೆಂಕಿ ಜ್ವಾಲೆ ಹೆಚ್ಚಾಗಿ ಸ್ಟವ್ ಸಿಡಿದಿದೆ. ಅನಿತಾಳಿಗೆ ಬೆಂಕಿ ಹೊತ್ತಿಕೊಂಡಿದೆ. ಹತ್ತಿರದಲ್ಲಿದ್ದ ಗಂಡು ಮಗು ಕೂಡಾ ಗಂಭೀರವಾಗಿ ಗಾಯಗೊಂಡಿದೆ. ಮೊದಲು ಮಗು ಸ್ಥಳದಲ್ಲೇ ಮೃತಪಟ್ಟಿದೆ ನಂತರ ಅನಿತಾ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಈ ದುರ್ಘಟನೆ ನಡೆದಾಗ ಗಂಡ ರಾಮಕೃಷ್ಣ ಮನೆಯಲ್ಲಿರಲಿಲ್ಲ. 4 ವರ್ಷದ ಮಗಳು ಮನೆಯ ಹೊರಗೆ ಆಟವಾಡುತ್ತಿದ್ದಳು. ಚೀರಾಟ ಕೇಳಿ ಬಂದು ನೋಡುವಾಗ ಅನಿತಾ ಸಾವನ್ನಪ್ಪಿದ್ದರು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.
ಅನಿತಾ ಸತ್ತದ್ದು ಹೇಗೆ?: ಅಡುಗೆ ಮಾಡುವಾಗ ಸ್ಟವ್ ಸಿಡಿದು ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ಬಂದಿದೆ. ಆದರೆ ಘಟನಾ ಸ್ಥಳದಲ್ಲಿ ಸ್ಟವ್ ಸಿಡಿದ ಯಾವುದೇ ಕುರುಹು ಇಲ್ಲ ಎಂದು ಸ್ಥಳ ಪರಿಶೀಲಿಸಿದ ಪೊಲೀಸರು ಹೇಳಿದ್ದಾರೆ.
ಅನಿತಾ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು, ಜೊತೆಗೆ ಮಗು ಕೂಡಾ ಸಾವಿನ ದವಡೆಗೆ ಸಿಲುಕಿರಬಹುದು ಎನ್ನಲಾಗಿದೆ. ಗಂಡ ರಾಮಕೃಷ್ಣ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರಬಹುದು. ರಾಮಕೃಷ್ಣ ಅವರ ವಿಚಾರಣೆ ನಡೆಸಿದ ಬಳಿಕ ಇನ್ನಷ್ಟು ವಿಷಯಗಳು ತಿಳಿಯಲಿದೆ. ಸದ್ಯಕ್ಕೆ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ವೈದ್ಯರಿಂದ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ಹೇಳಿದರು.












Click it and Unblock the Notifications