ಉತ್ತರಾಖಂಡ : ಕಾಪ್ಟರ್ ಪತನದಲ್ಲಿ ರಾಜ್ಯದ ಇಬ್ಬರ ಸಾವು
ಗದಗ, ಜೂ.27 : ಉತ್ತರಾಖಂಡದ ಜಲಪ್ರಳಯದಲ್ಲಿ ಸಿಲುಕಿದ ಸಂತ್ರಸ್ತರನ್ನು ರಕ್ಷಿಸಲು ಹೋದ ಹೆಲಿಕಾಪ್ಟರ್ ಪತನಗೊಂಡಾಗ ಅದರಲ್ಲಿದ್ದ ಕರ್ನಾಟಕದ ಮೂಲದ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಮೃತರು ಗದಗ ಮತ್ತು ಮಂಗಳೂರು ಜಿಲ್ಲೆಗೆ ಸೇರಿದವರಾಗಿದ್ದಾರೆ.
ಗದಗ ಜಿಲ್ಲೆ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಬಸವರಾಜ್(28) ಮತ್ತು ಮಂಗಳೂರಿನ ಕದ್ರಿ ಮೂಲದ ಡೆರಿಲ್ ಕ್ಯಾಸ್ಟಲಿನೋ(38) ಮೃತಪಟ್ಟ ಯೋಧರು. ಮಂಗಳವಾರ ಸಂಜೆ ಕಾಪ್ಟರ್ ಪತನದಿಂದ ಮೃತಪಟ್ಟ ಎಲ್ಲಾ 20 ಮಂದಿಯ ಶವನ್ನು ಬುಧವಾರ ಗುರುತಿಸಲಾಗಿದೆ.
ಕಾಪ್ಟರ್ ನಲ್ಲಿದ್ದ 20 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಎನ್.ಎ.ಕೆ. ಬ್ರೌನ್ ಹೇಳಿದ್ದಾರೆ. ಕರ್ನಾಟಕದ ಇಬ್ಬರು ಯೋಧರು ಸಾವನ್ನಪ್ಪಿರುವ ಸಂಗತಿ, ಬುಧವಾರ ಬೆಳಕಿಗೆ ಬಂದಿದೆ. ಆದರೆ, ಮಳೆಯ ಕಾರಣದಿಂದ ಇವರ ಮೃತದೇಹವನ್ನು ರಾಜ್ಯಕ್ಕೆ ತರುವುದು ತಡವಾಗುತ್ತಿದೆ.

ಗಡಿ ಭದ್ರತಾ ಪಡೆ ಯೋಧ : ಗದಗ ಜಿಲ್ಲೆಯ ಬಸವರಾಜ್ ಕಳೆದ ಆರು ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಕಲಘಟಗಿ ತಾಲೂಕಿನ ಯಶೋಧ ಅವರನ್ನು ಬಸವರಾಜ್ ವಿವಾಹವಾಗಿದ್ದರು.
ತುಳಸಪ್ಪ ಮತ್ತು ಗಿರಿಜಮ್ಮ ದಂಪತಿಗೆ ಬಸವರಾಜ್ ಒಬ್ಬನೇ ಮಗನಾಗಿದ್ದ. ಆತನ ಸಾವಿನಿಂದಾಗಿ ಮನೆಯ ಆಧಾರ ಸ್ತಂಭವೇ ಕಳಚಿದಂತಾಗಿದೆ. ಗ್ರಾಮದ ಯುವಕ ಸಂತ್ರಸ್ತರ ರಕ್ಷಣೆ ಮಾಡುತ್ತಿದ್ದಾನೆ ಎಂದು ಜಗಾಪುರ ಗ್ರಾಮದ ಜನರು ಸಂತಸ ಪಟ್ಟಿದ್ದರು.
ಆದರೆ, ಬಸವರಾಜ್ ಸಾವಿನಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗುರುವಾರ ಬೆಳಗ್ಗೆ ಅಥವ ಸಂಜೆಯ ಹೊತ್ತಿಗೆ ಬಸವರಾಜ್ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಪೋರ್ಸ್ ವಿಂಗ್ ಕಮಾಂಡರ್ : ಮಂಗಳೂರಿನ ಕದ್ರಿಯ ಡೆರಿಲ್ ಕ್ಯಾಸ್ಟಲಿನೋ ಏರ್ ಪೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಡೆರಿಲ್ ತಂದೆ ಮುಂಬೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಡೆರಿಲ್ ಹುಟ್ಟಿ ಬೆಳೆದಿದ್ದು, ಮುಂಬೈನಲ್ಲಿ. ನಾಲ್ಕು ವರ್ಷಗಳಿಂದ ಕೋಲ್ಕತ್ತಾದಲ್ಲಿ ಭಾರತೀಯ ಏರ್ ಪೊರ್ಸ್ ನ ವಿಂಗ್ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದರು.
ಭಾರೀ ಮಳೆಯ ಕಾರಣದಿಂದಾಗಿ ಕ್ಯಾಸ್ಟಲಿನೋ ಅವರ ಶವವನ್ನು ಮುಂಬೈಗೆ ತರಲು ಸಾಧ್ಯವಾಗಿಲ್ಲ. ಮರಣೋತ್ತರೆ ಪರೀಕ್ಷೆ ನಂತರ ಗುರುವಾರ ಸಂಜೆ ಪಾರ್ಥಿವ ಶರೀರವನ್ನು ತಲುಪಿಸುತ್ತೇವೆ ಎಂದು ವಾಯುಪಡೆ ಅಧಿಕಾರಿಗಳು, ಕ್ಯಾಸ್ಟಲಿನೋ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications