ಮೈಸೂರು : ಹಣಕ್ಕಾಗಿ ಮಗುವನ್ನೇ ಮಾರಿದ ತಂದೆ
ಮೈಸೂರಿನ ಉದಯಗಿರಿ ನಿವಾಸಿ ನಿಸಾರ್ ಖಾನ್ ತನ್ನ ಎರಡು ವರ್ಷದ ಗಂಡು ಮಗುವನ್ನು, ಸಿಕಂದರ್ ಅವರಿಗೆ 30 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದ. ಮಗುವಿನ ತಾಯಿ ನೀಡಿದ ದೂರಿನ ಮೇಲೆ ಪೊಲೀಸರು ತಂದೆ ನಿಸಾರ್ ಸೇರಿದಂತೆ ಇಬ್ಬರನ್ನು ಬುಧವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಘಟನೆಯ ವಿವರ : ನಿಸಾರ್ ಖಾನ್ ಅವರಿಗೆ ಮೂವರು ಮಕ್ಕಳು. ಸರಿಯಾದ ಕೆಲಸ ಮಾಡದೆ ಕುಡಿತದ ಚಟ ಬೆಳಸಿಕೊಂಡಿದ್ದ ಈತ, ಕುಡಿಯಲು ಹಣ ದೊರೆಯದೇ ಇದ್ದಾಗ ಮೂರನೇ ಮಗುವನ್ನು ಮಾರಲು ಸಂಚು ರೂಪಿದ್ದಾನೆ. ಜಫರುಲ್ಲಾ ಎಂಬ ಮದ್ಯವರ್ತಿಯನ್ನು ಸಂಪರ್ಕಿಸಿ, ಮಗುವನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.
ಈ ಮಗುವಿಗೆ ತಾಯಿ ಇಲ್ಲ. ನನಗೆ ಸಾಕಲು ಕಷ್ಟವಾಗುತ್ತಿದೆ. ಮಗುವನ್ನು ಮಾರಾಟ ಮಾಡಿಸಿಕೊಡು ನಿನಗೆ ಕಮೀಷನ್ ಕೊಡುತ್ತೇನೆ ಎಂದು ಜಫರುಲ್ಲಾಗೆ ಹೇಳಿದ್ದಾನೆ. ಅದರಂತೆ ಜಫರುಲ್ಲಾ ಸಿಕಂದರ್ ಎಂಬುವವರನ್ನು ಕರೆತಂದೆ ನಿಸಾರ್ ಖಾನ್ ಗೆ 10,000 ಅಡ್ವಾನ್ಸ್ ಸಹ ಕೊಡಿಸಿದ್ದಾನೆ. ಮುಂದಿನ ವಾರ ಮಗುವನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದ್ದಾನೆ.
ಮಗು ಮಾರಾಟ ಮಾಡಲು, ಮಗುವಿಗೆ ತಾಯಿ ಇಲ್ಲ ಎಂದು ಸುಳ್ಳು ಹೇಳಿರುವುದಲ್ಲದೇ ನಿಸಾರ್, ಹೆಂಡತಿಗೂ ಹೇಳದೆ ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದ. ಇದರ ಸುಳಿವು ಅರಿತ ಮಗುವಿನ ತಾಯಿ ಉದಯಗಿರಿ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ನಿಸಾರ್, ಸಿಕಂದರ್ ಮತ್ತು ಜಫರುಲ್ಲಾ ಅವರನ್ನು ಬಂಧಿಸಿದ್ದಾರೆ.
ತನಿಖೆ ವೇಳೆ ಕುಡಿತದ ಹಣ ಮತ್ತು ಮಗುವನ್ನು ಸಾಕಲು ಆರ್ಥಿಕ ಸಂಕಷ್ಟ ಉಂಟಾಗಿದ್ದರಿಂದ ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದೇ ಎಂದು ನಿಸಾರ್ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.(ಬಡತನ ಮಗುವನ್ನೇ ಕೊಂದ ತಾಯಿ)
ಮೈಸೂರಿನಲ್ಲಿ ಬಡತನದ ಕಾರಣದಿಂದಾಗಿ ತಾಯಿಯೇ ಮಗುವನ್ನು ಕೊಂಡ ಘಟನೆ ಎರಡು ದಿನಗಳ ಹಿಂದೆ ವರದಿಯಾಗಿತ್ತು. ಮಂಗಳವಾರ ತುಮಕೂರಿನಲ್ಲಿ 22 ದಿನಗಳ ಮುಗುವನ್ನು ತಾಯಿ, ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಇಂದಿನ ಜನರು ಮಾನವೀಯತೆ ಮರೆತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.(ಕಡು ಬಡತನ ಮಗುವನ್ನು ಮಾರಿದ ತಾಯಿ)