ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಏಕೆ ಮರಳಬೇಕು?
ಬೆಂಗಳೂರು, ಜೂ.24 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಮರಳಿ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಯ ಸೋಲು ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂಬ ಸಂದೇಶವನ್ನು ಸಾರಿ ಹೇಳಿದೆ.
ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರ ದೊರಕಿಲ್ಲ. ಲೋಕಸಭೆ ಚುನಾವಣೆ ಹತ್ತಿರವಾದಂತೆ ಯಾವ ಬದಲಾವಣೆ ಬೇಕಾದರೂ ಆಗಬಹುದಾಗಿದೆ. ಆದರೆ, ಯಡಿಯೂರಪ್ಪ ಅವರು ಇಲ್ಲದೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ, ಬೆಳೆಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.
ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನ ತುಂಬಿ ಪಕ್ಷವನ್ನು ಮುನ್ನೆಡೆಸುವ ನಾಯಕರು ಬಿಜೆಪಿ ಪಕ್ಷದಲ್ಲಿ ಇಲ್ಲವೆ? ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಬಿಎಸ್ವೈ ಕರೆತರುವ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ. ಆದ್ದರಿಂದ ಬಿಎಸ್ವೈ ಇಲ್ಲದೆ ಬಿಜೆಪಿ ಶಕ್ತಿ ವೃದ್ಧಿಸುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾದಂತಾಗಿದೆ.
ಮತ ವಿಭಜನೆ ತಡೆಯಲು ಯಡಿಯೂರಪ್ಪ ಮರಳಬೇಕು ಎಂದು ಪಕ್ಷದ ಹಿರಿಯ ನಾಯಕರು ಹೇಳಿಕೆ ನೀಡುತ್ತಿದ್ದರೂ, ಅದನ್ನು ಮೀರಿದ ಹಲವಾರು ಕಾರಣಗಳಿವೆ ಎಂಬುದು ನಾಯಕರಿಗೂ ಚೆನ್ನಾಗಿ ತಿಳಿದಿದೆ. ಯಡಿಯೂರಪ್ಪ ಬಿಜೆಪಿಗೆ ಏಕೆ ಅನಿವಾರ್ಯ ಎಂದು ನೋಡೋಣ...

ನಾಯಕರ ಮತ್ತು ಹೊಂದಾಣಿಕೆಯ ಕೊರತೆ
ಬಿಜೆಪಿಯ ನಾಯಕರಾದ ಪ್ರಹ್ಲಾದ್ ಜೋಶಿ, ಶೆಟ್ಟರ್, ಅನಂತ್ ಕುಮಾರ್, ಕೆ.ಎಸ್.ಈಶ್ವರಪ್ಪ, ಡಿ.ವಿ.ಸದಾನಂದಗೌಡ ಮುಂತಾದವರಲ್ಲಿ ನಾಯಕತ್ವ ಮತ್ತು ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಇವರೆಲ್ಲನ್ನೆಲ್ಲಾ ಒಟ್ಟಾಗಿಸಿ, ಲೋಕಸಭೆ ಚುನಾವಣೆ ಎದುರಿಸುವುದು ಕಷ್ಟ. ಆದ್ದರಿಂದ ಯಡಿಯೂರಪ್ಪ ಬಂದರೆ, ಸಮರ್ಥ ನಾಯಕತ್ವ ಪಕ್ಷಕ್ಕೆ ದೊರೆಯಲಿದೆ. ಸಂಘಟನೆ ಮತ್ತು ಮತ ಸೆಳೆಯಲು ಬಿಎಸ್ವೈ ಅವರೇ ಸರಿಯಾದ ವ್ಯಕ್ತಿ.

ಚುನಾವಣೆ ಎದುರಿಸುವುದು
ಒಂದು ಚುನಾವಣೆ ಎದುರಿಸುವುದು ಎಂದರೆ ಬಹಳ ಕಷ್ಟದ ಕೆಲಸ. ಹೊಸ ಪಕ್ಷ ಕಟ್ಟಿದ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಹೇಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರವಾಸ ಪ್ರಚಾರ ಮಾಡಿದರು ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಬಿಜೆಪಿಯಲ್ಲಿ ಸಮರ್ಥವಾಗಿ ಚುನಾವಣೆ ಎದುರಿಸುವ ನಾಯಕರ ಕೊರತೆ ಕಾಡುತ್ತಿದೆ. ಆದ್ದರಿಂದ ಲೋಕಸಭೆ ಚುನಾವಣೆ ವೇಳೆಗೆ ಯಡಿಯೂರಪ್ಪ ಮರಳಿದರೆ ಸಹಾಯಕ.

ಜಾತಿ ಮತಗಳನ್ನು ಸೆಳೆಯಬೇಕು
ಜಗದೀಶ್ ಶೆಟ್ಟರ್, ಅಶೋಕ್, ಈಶ್ವರಪ್ಪ ಮೂವರು ನಾಯಕರು ಪ್ರಬಲ ಜಾತಿಯ ಹಿನ್ನೆಲೆ ಹೊಂದಿದ್ದಾರೆ. ಆದರೆ, ಅವುಗಳನ್ನು ಮತಗಳಾಗಿ ಪರಿವರ್ತಿಸಲು ಆವರಿಂದ ಸಾಧ್ಯವಿಲ್ಲ. ಪ್ರಹ್ಲಾದ್ ಜೋಶಿ ಮತ್ತು ಅನಂತ್ ಕುಮಾರ್ ಅವರಿಗೆ ಜಾತಿಯ ಬೆಂಬಲವಿಲ್ಲ. ರಾಜ್ಯದ ಪ್ರಬಲ ಲಿಂಗಾಯತ ಮತ್ತು ಇತರ ಸಮುದಾಯದ ಬಲ ಪಡೆಯಬೇಕಾದರೆ, ಯಡಿಯೂರಪ್ಪ ಬೇಕೇ ಬೇಕು.

ಸಾಲು ಸಾಲು ಸೋಲುಗಳು
ಯಡಿಯೂರಪ್ಪ ಪಕ್ಷ ತೊರೆದ ನಂತರ ನಡೆದ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಉಳಿದ ನಾಯಕರಿಗೆ ಯಡಿಯೂರಪ್ಪ ಸ್ಥಾನ ತುಂಬಿ ಪಕ್ಷವನ್ನು ಮುನ್ನೆಡಸಲು ಸಾಧ್ಯವಾಗಿಲ್ಲ. ತಳ ಮಟ್ಟದಲ್ಲಿ ಪಕ್ಷ ಸಂಘಟನೆ ಆಗಬೇಕಾದರೆ, ಯಡಿಯೂರಪ್ಪ ಮರಳಲೇಬೇಕು.

ಜನರನ್ನು ಸೆಳೆಯುವ ಶಕ್ತಿ
ಕರ್ನಾಟಕದ ರಾಜ್ಯದ ಉದ್ದಗಲಕ್ಕೂ ಜನರನ್ನು ಸೆಳೆಯಬಲ್ಲ ನಾಯಕರು ಈಗ ಬಿಜೆಪಿಯಲ್ಲಿ ಇಲ್ಲ. ನಾಯಕರು ಅವರ ಭಾಗಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಚಾಣಾಕ್ಷ ಮಾತುಗಾರಿಕೆ, ಜನರನ್ನು ಸೆಳೆದು, ಮತ ತರಬಲ್ಲ ನಾಯಕರ ಕೊರತೆ ಬಿಜೆಪಿಗೆ ಕಾಡುತ್ತಿದೆ. ಆದ್ದರಿಂದ ಬಿಎಸ್ವೈ ಬಂದರೆ ಪಕ್ಷಕ್ಕೆ ಶಕ್ತಿ ಬರುತ್ತದೆ.

ತಂತ್ರಗಾರಿಕೆ ನಿಪುಣ
ರಾಜಕಾರಣದಲ್ಲಿ ತಂತ್ರಗಾರಿಕೆ ಬಹಳ ಪ್ರಮುಖವಾದ ಅಂಶ ಎದುರಾಳಿಗಳಿಗೆ ಸರಿಯಾದ ಪೆಟ್ಟು ಕೊಡಬೇಕಾದರೆ, ತಂತ್ರಗಾರಿಕೆ ಬಹಳ ಮುಖ್ಯವಾದುದು. ಅನಂತ್ ಕುಮಾರ್ ತಂತ್ರಗಾರಿಕೆ ರೂಪಿಸುವ ಚಾಣಾಕ್ಷ ಹೌದು. ಆದರೆ, ಅದು ಫಲ ಕೊಡುತ್ತಿಲ್ಲ. ಆದ್ದರಿಂದ ಯಡಿಯೂರಪ್ಪ ಅವರಂತಹ ತಂತ್ರಗಾರಿಕೆ ನಿಪುಣರು ಬಿಜೆಪಿಗೆ ಬೇಕು.

ಪಕ್ಷಕ್ಕೆ ಹಣ ಸೆಳೆಯುವುದು
ಚುನಾವಣೆ ಎದುರಿಸಲು ಪಕ್ಷಕ್ಕೆ ಬೇಕಾದ ಹಣ ಸಂಗ್ರಹಿಸುವುದು ಒಂದು ಕಲೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಹಣದ ಕೊರತೆ ಉಂಟಾಗಿತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ. ಯಡಿಯೂರಪ್ಪ ಅವರಿಗೆ ಮತಗಳ ಜೊತೆ ಪಕ್ಷಕ್ಕೆ ಹಣವನ್ನು ಸೆಳೆಯುವ ಶಕ್ತಿ ಇದೆ. ಆದ್ದರಿಂದ ಅಂತಹವರ ನೆರವನ್ನು ಪ್ಷಕ ಕಡೆಗಣಿಸುವಂತಿಲ್ಲ.

ಮೈತ್ರಿ ಖಚಿತ ಯಾವ ಪಕ್ಷ?
ಲೋಕಸಭೆ ಚುನಾವಣೆ ವೇಳೆಗೆ ಕೆಜೆಪಿ ಇತರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಖಚಿತ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಯಾವ ಪಕ್ಷ ಎಂಬುದು ಇನ್ನೂ ಧೃಡಪಟ್ಟಿಲ್ಲ. ಬಿಜೆಪಿಗೆ ಜೊತೆಗೆ ಸೇರಿದರೆ, ಪಕ್ಷದ ಬಲ ಹೆಚ್ಚಾಗಿ ಕೇಂದ್ರದಲ್ಲಿ ಅಧಿಕಾರ ಪಡೆಯಲು ಸಹಾಯಕವಾಗಬಹುದು.












Click it and Unblock the Notifications