ಚಿತ್ರದುರ್ಗ : ಯುವಕನಿಗೆ ಸರಪಳಿ ಬಿಗಿದು ಗೃಹಬಂಧನ
ಸ್ಥಳೀಯರಿಂದ ಈ ಕುರಿತು ಮಾಹಿತಿ ಪಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕಿರಣ್ (24) ಅವರನ್ನು ರಕ್ಷಿಸಿ ಬಾಲಭವನಕ್ಕೆ ಕರೆದುಕೊಂಡು ಹೋದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಏನು : ಚಿತ್ರದುರ್ಗ ಜಿಲ್ಲೆಯ ಹೊಳ್ಕಕೆರೆ ತಾಲೂಕಿನ, ಚಿತ್ರಹಳ್ಳಿ ಗ್ರಾಮದಲ್ಲಿ ಕಿರಣ್ ಎಂಬ ಯುವಕನನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಕಳೆದ ಐದು ವರ್ಷಗಳಿಂದ ಕಾಲಿಗೆ ಸರಪಳಿ ಹಾಕಿ, ಬಂಧಿಸಲಾಗಿತ್ತು.
ಕಿರಣ್ ಅವರ ತಂದೆ ರಂಗಸ್ವಾಮಿ ಬಿಎಸ್ಎನ್ಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ರತ್ನಮ್ಮ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಿರಣ್ ರನ್ನು ಚಿಕ್ಕಪ್ಪ ವೀರಭದ್ರಪ್ಪ ಅವರ ಮನೆಯಲ್ಲಿ ಬಿಟ್ಟಿದ್ದರು. (ರಾಜ್ಯದ ಗೃಹ ಬಂಧನ ಪ್ರಕರಣಗಳು)
ವೀರಭದ್ರಪ್ಪ ಕಿರಣ್ ಮಾನಸಿಕ ಅಸ್ವಸ್ಥ ಎಂದು ಆರೋಪಿಸಿ ಐದು ವರ್ಷಗಳಿಂದ ಗೃಹ ಬಂಧನದಲ್ಲಿಟ್ಟಿದ್ದರು. ಆದರೆ, ಈ ವಿಷಯ ತಂದೆ-ತಾಯಿಗೆ ತಿಳಿದಿದ್ದರೂ, ಅವರು ಸುಮ್ಮನಿದ್ದರು.
ಕಿರಣ್ ಅವರಿಗೆ 12 ವರ್ಷವಿದ್ದಾಗ ರಸ್ತೆ ಅಪಘಾತವಾಯಿತು. ನಂತರ ಅವರು ಮಾನಸಿಕವಾಗಿ ಅಸ್ವಸ್ಥರಾದರು. ಕಿರಣ್ ಹೊರಗೆ ಬಂದರೆ, ಜನರೊಂದಿಗೆ ಜಗಳವಾಡುತ್ತಾನೆ, ಜನರಿಗೆ ಮತ್ತು ಪ್ರಾಣಿಗಳಿಗೆ ಹೊಡೆಯುತ್ತಾನೆ ಆದ್ದರಿಂದ ಗೃಹ ಬಂಧನದಲ್ಲಿಟ್ಟಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.
ಚಿಕಿತ್ಸೆ ಕೊಡಿಸಿದ್ದೇವೆ : "ಮನೋವೈದ್ಯರ ಬಳಿ ಕಿರಣ್ ಅವರಿಗೆ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಕೂಡಿ ಹಾಕಿದ್ದೇವೆ". ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಸಚಿವರ ಭೇಟಿ : ಸಮಾಜ ಕಲ್ಯಾಣ ಸಚಿವ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕಿರಣ್ ಅವರ ಆರೋಗ್ಯ ಪರಿಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ಕೊಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.