ಬೆಲೆ ಏರಿಕೆ ಸಮರ್ಥಿಸಿಕೊಂಡ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜೂ.17: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಪ್ರಯಾಣ ದರವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಾರಿಗೆ ತಂದ ಇ-ಸ್ಮಾರ್ಟ್ ಸೇವೆಯನ್ನು ಉದ್ಘಾಟಿಸಿ ನಂತರ ಈ ವಿಷಯ ತಿಳಿಸಿದರು. ದರ ಹಿಂದಕ್ಕೆ ಪಡೆಯಬೇಕು ಎಂದರೆ ಈ ಎರಡೂ ಸಂಸ್ಥೆಗಳನ್ನು ಮುಚ್ಚಲೇಬೇಕು. ಬೇರೆ ದಾರಿಯಿಲ್ಲ. ಆದ್ದರಿಂದ ಜನರು ಸಹಕರಿಸಬೇಕು.
ಸಾರಿಗೆ ಸಂಸ್ಥೆ ಗಳಿಸುವ ಆದಾಯದಲ್ಲಿ ಶೇ.90ರಷ್ಟು ಆದಾಯ ನೌಕರರ ಸಂಬಳ, ಪೆಟ್ರೋಲ್, ಡಿಸೇಲ್ ಗೆ ಖರ್ಚಾಗುತ್ತದೆ. ಈಗ ಕೆಎಸ್ ಆರ್ ಟಿಸಿ 32 ಕೋಟಿ ರೂ. ಕೊರತೆಯಲ್ಲಿದೆ. ಬಿಎಂಟಿಸಿ ಕಳೆದ 6 ತಿಂಗಳಿನಿಂದ 147 ಕೋಟಿ ರೂ. ನಷ್ಟದಲ್ಲಿದೆ. ಒಟ್ಟಾರೆ 1500 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದ್ದ ಬಿಎಂಟಿಸಿ ಈಗ ಲಾಸ್ನಲ್ಲಿದ್ದೆ, ದರ ಹೆಚ್ಚಳ ಮಾಡದೇ ಹೋದರೆ, ಪ್ರಯಾಣಿಕರು ಸಹಕರಿಸದೇ ಹೋದರೆ ಈ ಸಂಸ್ಥೆಯನ್ನು ಮುಚ್ಚಬೇಕಾಗುತ್ತದೆ ಎಂದರು.

ಕಳೆದ ಜನವರಿಯಿಂದಲೇ ದರ ಏರಿಕೆಯ ಪ್ರಸ್ತಾಪ ಆಡಳಿತ ಮಂಡಳಿಯ ಮುಂದೆ ಬಂದಿತ್ತು. ಚುನಾವಣೆ ಮತ್ತು ಬೇರೆ ಬೇರೆ ಕಾರಣಗಳಿಂದ ದರ ಹೆಚ್ಚಳ ಮಾಡಿರಲಿಲ್ಲ. ಈಗ ದರ ಹೆಚ್ಚಳ ಮಾಡದೇ ಹೋದರೆ ಸಂಸ್ಥೆಯೇ ಉಳಿಯುವುದಿಲ್ಲ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡಿಸೇಲ್ ಗೆ ಅಲ್ಲಿನ ಸರ್ಕಾರಗಳು 4.50 ರೂ. ಸಬ್ಸಿಡಿ ಕೊಡುತ್ತವೆ. ನಮ್ಮಲ್ಲಿ ಯಾವುದೇ ಸಬ್ಸಿಡಿ ಇಲ್ಲ.
ಹೀಗಾಗಿ ಸಂಸ್ಥೆಯನ್ನು ಸರಿದಾರಿಯಲ್ಲಿ ನಡೆಸಬೇಕಾದರೆ ನಾವು ಪ್ರಯಾಣ ದರ ಹೆಚ್ಚಳ ಮಾಡಲೇಬೇಕು, ಬೇರೆ ಮಾರ್ಗ ಇಲ್ಲ ಎಂದು ಪ್ರತೀ ಹಂತದಲ್ಲೂ ದರ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು. ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸಾರಿಗೆ ಇಲಾಖೆಗೆ ಕೂಡಲೇ 900 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಹೊಸ ಬಸ್ ಸೇವೆ: ವಿಶ್ವ ಬ್ಯಾಂಕ್ ನೆರವಿನಿಂದ ಹುಬ್ಬಳ್ಳಿ- ಧಾರವಾಡ ನಗರಗಳ ನಡುವೆ 200 ಹೊಸ ಬಸ್ ಸೇವೆಯನ್ನು ಆರಂಭಿಸಲಾಗುವುದು ಎಂದರು. ಕೆಎಸ್ ಆರ್ ಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಸೇವೆ ಸೇರಿದಂತೆ 28 ನಗರಗಳಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ನಗರ ಸಾರಿಗೆ ಸಂಚಾರವನ್ನು ಆರಂಭಿಸಲಾಗುವುದು ಎಂದರು. ಮೊಬೈಲ್ ಗೆ ಬಳಸುವ ರಿಚಾರ್ಜ್ ಮಾದರಿ ಯಂತೆ ಸ್ಮಾರ್ಟ್ ಆಧಾರಿತ ಬಸ್ ಪಾಸ್ ಜುಲೈನಿಂದ ಜಾರಿಗೆ ಬರಲಿದೆ.
ಇ-ಸ್ಮಾರ್ಟ್ ಯೋಜನೆಯಿಂದ ತುರ್ತು ಸೇವೆ, ಬಸ್ ಗಳ ಮಾಹಿತಿ, ಕಾಮಗಾರಿಗಳ ಮೇಲ್ವಿಚಾರಣೆ ಮುಂತಾದ ಹತ್ತು ಹಲವು ಸೌಲಭ್ಯಗಳನ್ನು ಪ್ರಯಾಣಿಕರು ಪಡೆಯ ಬಹುದು, 24 ಗಂಟೆಯ ಸಹಾಯವಾಣಿಯೂ ಕೂಡ ಇರುತ್ತದೆ.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್, ಕೆಎಸ್ಆರ್ಟಿಸಿ ಎಂಡಿ ಮಂಜುನಾಥ್ ಪ್ರಸಾದ್ ಮತ್ತು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್ ಹಾಜರಿದ್ದರು.












Click it and Unblock the Notifications