ಎನ್ಡಿಎ ಜತೆಗಿನ ಮೈತ್ರಿ ಕಳೆದುಕೊಂಡ ಜೆಡಿಯು
ಪಾಟ್ನ, ಜೂ.16 : ಎನ್ಡಿಎ ಜೊತೆಗಿನ ಹದಿನೇಳು ವರ್ಷಗಳ ಮೈತ್ರಿಯನ್ನು ಜೆಡಿಯು ಅಧಿಕೃತವಾಗಿ ಕಡಿದುಕೊಂಡಿದೆ. ಬಿಹಾರದಲ್ಲಿಯೂ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿರುವ ಸಿಎಂ ನಿತೀಶ್ ಕುಮಾರ್, ವಿಶ್ವಾಸ ಮತ ಯಾಚಿಸಲು ಮುಂದಾಗಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ರಾಜ್ಯಪಾಲ ಡಿ.ವೈ.ಪಾಟೀಲ್ ಅವರನ್ನು ಭೇಟಿ ಮಾಡಿ, ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ರಾಜ್ಯಪಾಲರ ಅನುಮತಿಯಂತೆ, ಜೂನ್ 19ರಂದು ವಿಶೇಷ ಅಧಿವೇಶನ ನಡೆಸಿ, ವಿಶ್ವಾಸಮತ ಯಾಚಿಸಲಾಗುವುದು ಎಂದರು.
ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಯು ಅಧ್ಯಕ್ಷ ಶರದ್ ಯಾದವ್ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಎನ್ಡಿಎ ಜೊತೆಗಿನ ಹದಿನೇಳು ವರ್ಷಗಳ ಮೈತ್ರಿಯನ್ನು ಅಧಿಕೃತವಾಗಿ ಕಡಿಕೊಳ್ಳಲಿದ್ದೇವೆ ಎಂದು ಹೇಳಿದರು.

ಶರದ್ ಯಾದವ್ ಮಾತನಾಡಿ, ವಾಜಪೇಯಿ ಮತ್ತು ಅಡ್ವಾಣಿ ಎನ್ಡಿಎ ಮೈತ್ರಿಕೂಟ ರಚಿಸಿದ್ದರು. ಇತ್ತೀಚಿನ ಕೆಲವು ವಿದ್ಯಮಾನಗಳಿಂದ ಬೇಸರವಾಗಿದೆ. ಎರಡೂ ಪಕ್ಷಗಳ ತತ್ವ ಮತ್ತು ಗುರಿಗಳು ಬೇರೆ-ಬೇರೆಯಾಗಿರುವುದರಿಂದ ಬಿಜೆಪಿ ಮತ್ತು ಎನ್ಡಿಎ ಜತೆಗಿನ ಮೈತ್ರಿ ಕಡಿದುಕೊಳ್ಳಲಾಗುವುದು ಎಂದರು.
ಬಿಹಾರದಲ್ಲೂ ಬಿಜೆಪಿ ಜೊತೆಗೆ ಜೆಡಿಯು ಉತ್ತಮ ಮೈತ್ರಿ ಹೊಂದಿತ್ತು. ಆದರೆ, ಎರಡು ಪಕ್ಷಗಳ ದಾರಿ ಬೇರೆ ಬೇರೆ ಆಗಿರುವುದರಿಂದ ವಿಂಗಡನೆ ಅನಿವಾರ್ಯವಾಗಿತ್ತು ಎಂದು ಸಿಎಂ ನಿತೀಶ್ ಕುಮಾರ್ ಹೇಳಿದರು.
ಬಿಹಾರ ಉತ್ತಮವಾಗಿ ಅಭಿವೃದ್ಧಿ ಹೊಂದಿದೆ. ಅದಕ್ಕೆ ಬೇರೆ ರಾಜ್ಯದ ಉದಾಹರಣೆ ಬೇಕಾಗಿಲ್ಲ ಎಂದು ಗುಜರಾತ್ ಸಿಎಂ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಎನ್ಡಿಎ ಸಂಚಾಲಕ ಹುದ್ದೆಗೆ ತಕ್ಷಣ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದರು.
ಜೂನ್ 19ರಂದು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಜೆಡಿಯು ಬಹುಮತ ಸಾಬೀತು ಪಡಿಸಲಿದೆ ಎಂದು ನಿತೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ನೀಡಿದ್ದರಿಂದ ಜೆಡಿಯು ಎನ್ಡಿಎ ಮೈತ್ರಿಕೂಟ ತೊರೆಯುವ ಬಗ್ಗೆ ಸುಳಿವು ನೀಡಿತ್ತು.
ಇಂದು ಅಧಿಕೃತವಾಗಿ ಜೆಡಿಯು ಎನ್ಡಿಎ ಮೈತ್ರಿಕೂಟ ತೊರೆದಿದ್ದು, ಇದರಿಂದ ಮುಂದಿನ ಲೋಕಸಭೆ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿರುವ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಿದೆ. ಬಿಜೆಪಿಯ ಮುಂದಿನ ನಡೆ ಏನು ಎಂದು ಕಾದು ನೋಡಬೇಕು.
ಬಿಹಾರ ವಿಧಾನಸಭೆ ಬಲಾಬಲ
ಒಟ್ಟು ಸ್ಥಾನಗಳು - 243
ಬಹುಮತಗಳಿಸಲು - 122
ಜೆಡಿಯು - 118
ಬಿಜೆಪಿ - 91
ಆರ್ ಜೆಡಿ - 22
ಎಲ್ ಜೆಪಿ - 3
ಕಾಂಗ್ರೆಸ್ - 4
ಇತರರು - 8











Click it and Unblock the Notifications