ಬೆಂಗಳೂರು : ದಂತವೈದ್ಯೆ ಆತ್ಮಹತ್ಯೆಗೆ ಶರಣು

ಭಾನುವಾರ ಮಧ್ಯಾಹ್ನದ ಸುಮಾರಿಗೆ ಸುಮತಿ (25) ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ. ಸುಮತಿ ಪತಿಯ ಕುಟುಂಬದವರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಸುಮತಿ ಕುಟುಂಬದವರು ಆರೋಪಿಸಿದ್ದಾರೆ.
ಮೂಲತಃ ಮಂಡ್ಯ ಮೂಲದ ಹೊಂಬಾಳಯ್ಯ ಮತ್ತು ಸುವರ್ಣವತಿ ದಂಪತಿಯ ಪುತ್ರಿ ಸುಮತಿ ಅವರ ವಿವಾಹ, ಮೂರು ವರ್ಷದ ವರ್ಷದ ಹಿಂದೆ, ಖಾಸಗಿ ಕಂಪನಿ ಉದ್ಯೋಗಿ ಮೊಹಿಂದರ್ ಜೊತೆ ನಡೆದಿತ್ತು. ಈ ದಂಪತಿಗೆ ಎರಡು ವರ್ಷದ ತೇಜಿಕಾ ಎಂಬ ಹೆಣ್ಣು ಮಗುವಿದೆ.
ವರದಕ್ಷಿಣೆ ತರುವಂತೆ ಸುಮತಿಗೆ ಪತಿಯ ಮನೆಯವರು ಪೀಡಿಸುತ್ತಿದ್ದರು. ಭಾನುವಾರ ಬೆಳಗ್ಗೆ ನಾನು ಸುಮತಿ ಜೊತೆ ಮಾತನಾಡಿದ್ದೇನೆ. ಮಧ್ಯಾಹ್ನದ ವೇಳೆಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮತ್ತು ಮಾವ ಸೇರಿ ಸುಮತಿಯನ್ನು ಕೊಲೆ ಮಾಡಿದ್ದಾರೆ ಎಂದು ಸುಮತಿ ತಾಯಿ ದೂರಿದ್ದಾರೆ.
ಉನ್ನತ ವಿದ್ಯಾಭ್ಯಾಸ : ಗಾಯತ್ರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ಸುಮತಿ ಉನ್ನತ ವ್ಯಾಸಂಗ ಮಾಡಲು ಆಲೋಚಿಸಿದ್ದರು. ಅವರಿಗೆ ಕೆಂಪೇಗೌಡ ವೈದ್ಯ ಮಹಾ ಸಂಸ್ಥೆ(ಕಿಮ್ಸ್)ನಲ್ಲಿ ದಂತ ವೈದ್ಯ ಪಿಜಿ ಸೀಟು ಸಿಕ್ಕಿತ್ತು.
ಸೋಮವಾರದಿಂದ ಅವರು ತರಗತಿಗೆ ಹೋಗಬೇಕಿತ್ತು. ಈ ಬಗ್ಗೆ ಪೋಷಕರರೊಂದಿಗೂ ಮಾತನಾಡಿ ನಾಳೆಯಿಂದ ಕಾಲೇಜಿಗೆ ಹೋಗುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದರು. ಆದರೆ, ಮಧ್ಯಾಹ್ನ 3.30ರ ಸುಮಾರಿಗೆ ಸುಮತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮತಿ ನೇಣು ಬಿಗಿದುಕೊಂಡಿರುವುದನ್ನು ತಿಳಿದ ಅತ್ತೆ ಸುಕನ್ಯಾ, ಮಾವ ನಾಗರಾಜು ಕುಣಿಕೆ ಬಿಡಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಸುಮತಿ ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ.
ವರದಕ್ಷಿಣೆಗಾಗಿ ಕೊಲೆ ಶಂಕೆ : ಸಮತಿ ತವರು ಮನೆಯವರು ಇದೊಂದು ಕೊಲೆ ಎಂದು ದೂರಿದ್ದಾರೆ. ಮಗಳನ್ನು ಮನೆಗೆ ಕಳುಹಿಸುತ್ತಿರಲಿಲ್ಲ. ಉನ್ನತ ವ್ಯಾಸಂಗ ಮಾಡುವುದಕ್ಕೂ ಪತಿ ಮನೆಯವರ ವಿರೋಧವಿತ್ತು. ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಮಗಳು ಹೇಳುತ್ತಿದ್ದಳು.
ಪತಿಯ ಮನೆಯವರು ವರದಕ್ಷಿಣೆ ಆಸೆಗಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಸುಮತಿ ಪೋಷಕರು ಆರೋಪಿಸಿದ್ದಾರೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications