ಬಿಜೆಪಿಯಿಂದ ನಿತೀಶ್ಗೆ ಬೆಂಬಲ ಹಿಂಪಡೆಯುವ ಬೆದರಿಕೆ

ಎಲ್ ಕೆ ಅಡ್ವಾಣಿ ಅವರನ್ನು ಬದಿಗೆ ಸರಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು ಮತ್ತು ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ಹವಣಿಸುತ್ತಿರುವುದು, ಮೋದಿ ಅವರನ್ನು ವಿರೋಧಿಸುತ್ತಿರುವ ನಿತೀಶ್ ಕುಮಾರ್ ಅವರಿಗೆ ಬಿಸಿತುಪ್ಪವಾಗಿದೆ.
ನಿತೀಶ್ ಕುಮಾರ್ ಅವರ ಸರಕಾರದಲ್ಲಿ ರಸ್ತೆ ನಿರ್ಮಾಣ ಸಚಿವರಾಗಿರುವ ನಂದ ಕಿಶೋರ್ ಯಾದವ್ ಅವರು, ರಾಜ್ಯಪಾಲ ಜ್ಞಾನದೇವ್ ಯಶವಂತರಾವ್ ಪಾಟೀಲ್ ಅವರನ್ನು ಭೇಟಿ ಮಾಡಿ ಬೆಂಬಲ ಹಿಂಪಡೆಯುತ್ತಿರುವ ಪತ್ರವನ್ನು ಶನಿವಾರ ಸಂಜೆ ನೀಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
243 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು 91 ಇದ್ದರೆ, ಜೆಡಿ(ಯು) ಸದಸ್ಯರು 118 ಇದ್ದಾರೆ. ಬಿಜೆಪಿ ಬೆಂಬಲ ಹಿಂಪಡೆದರೆ ಬಿಜೆಪಿ ಮತ್ತು ಜೆಡಿ(ಯು) ಮೈತ್ರಿಕೂಟದ ನಿತೀಶ್ ಕುಮಾರ್ ಸರಕಾರ ಬಿದ್ದುಹೋಗಲಿದೆ. ಸರಕಾರ ಬಿದ್ದರೆ ನಿತೀಶ್ ಕುಮಾರ್ ಅವರು ಕೂಡಲೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ ಎಂದು ನಂದ ಕಿಶೋರ್ ಯಾದವ್ ಅವರು ಆಗ್ರಹಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಮತ್ತು ಜೆಡಿ(ಯು) ಮೈತ್ರಿಕೂಟ ಉಳಿಯಬೇಕಾಗಿದ್ದರೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ನೇಮಿಸಲೇಬಾರದು ಎಂದು ನಿತೀಶ್ ಕುಮಾರ್ ಅವರು ಪಟ್ಟು ಹಿಡಿದಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಆದರೆ, ಬಿಜೆಪಿ ತನ್ನ ನಿರ್ಧಾರವನ್ನು ಸಡಿಲಿಸಲು ತಯಾರಿಲ್ಲ.
ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಬಾರದೆಂದು ಜೆಡಿ(ಯು) ಷರತ್ತು ಒಡ್ಡಿಲ್ಲ ಎಂದು ಹೇಳಿರುವ ಜೆಡಿ(ಯು)ನ ಮತ್ತೊಬ್ಬ ನಾಯಕ ಶರದ್ ಯಾದವ್ ಅವರು ಮೈತ್ರಿಕೂಟ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅವರು ಶನಿವಾರ ಸಂಜೆ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಮಾತುಕತೆಯ ನಂತರ ಖಚಿತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಇದೇ ಸಮಯದಲ್ಲಿ ನಿತೀಶ್ ಅವರ ಬದ್ಧ ವೈರಿಯಾಗಿರುವ ಮೋದಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಸಂಪರ್ಕಿಸಿ, ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮೈತ್ರಿಕೂಟ ಉಳಿಸಿಕೊಳ್ಳಲು ಎಲ್ಲ ಯತ್ನ ನಡೆಸಬೇಕು ಎಂದು ಕೋರಿದ್ದಾರೆ. ಈಗಲೇ ಮೈತ್ರಿಯನ್ನು ಮುರಿದುಕೊಳ್ಳದೆ, ಎನ್ಡಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನು ನೇಮಿಸುವವರೆಗೆ ಮುಂದುವರಿಯಬೇಕು ಎಂದು ಕೇಳಿದೆ.












Click it and Unblock the Notifications