ಮೋದಿ ಮತ್ತಷ್ಟು ಬಲಿಷ್ಠ; ಅಡ್ವಾಣಿ ಏಕಾಂಗಿ -ಬಿಎಸ್ವೈ

ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷದಲ್ಲೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಸಮಾನರು/ಪರ್ಯಾಯ ಅಂತ ಯಾರೂ ಕಾಣಿಸ್ತಿಲ್ಲ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನರೇಂದ್ರ ಮೋದಿ ಅವರಿಗೆ RSS ಕೃಪಾಕಟಾಕ್ಷ ಸಂಪೂರ್ಣವಾಗಿ ದಕ್ಕಿದೆ. ರಾಜೀನಾಮೆ ಮೂಲಕ ಮೋದಿ ಮತ್ತು ಬಿಜೆಪಿಯನ್ನು ಮೂಲೆಗುಂಪು ಮಾಡುವ ಅಡ್ವಾಣಿ ಪ್ರಯತ್ನಗಳು ನಿಷ್ಫಲಗೊಂಡಿವೆ. ಬದಲಿಗೆ ಮೋದಿ ನಾಯಕತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಂಗಳವಾರ ಬೆಂಗಳೂರಿನಲ್ಲಿ ಅನೌಪಚಾರಿಕವಾಗಿ ಮಾತನಾಡುತ್ತಾ ಅಭಿಪ್ರಾಪಟ್ಟಿದ್ದಾರೆ.
ಅಡ್ವಾಣಿ ರಾಜೀನಾಮೆಯಿಂದ ಮೋದಿ ಮತ್ತಷ್ಟು ಬಲಿಷ್ಠರಾಗಿದ್ದಾರೆ. ಆಡ್ವಾಣಿ ಅತುರಾತುರದ ನಿರ್ಧಾರ ತೆಗೆದುಕೊಂಡರು. ಇದರಿಂದ ಪಕ್ಷದಲ್ಲಿ ಅವರು ಏಕಾಂಗಿಯಾಗಿದ್ದಾರೆ ಎಂದು ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.
ಇದರಿಂದ, ಅಡ್ವಾಣಿ ರಾಜೀನಾಮೆ ಪ್ರಹಸನದ ತರುವಾಯ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ಸಖ್ಯ ಬೆಳೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದ್ದಾರೆ.
ಆದಾಗ್ಯೂ, ತಕ್ಷಣಕ್ಕೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ ಇದಕ್ಕೆಲ್ಲ ಸುಮಾರು ಎರಡು ತಿಂಗಳ ಕಾಲಾವಕಾಶ ಬೇಕು ಎಂದಿದ್ದಾರೆ. ಅಲ್ಲದೆ ಬಿಜೆಪಿಯಲ್ಲಿ ತಮ್ಮ ಸ್ಥಾನ ಏನು ಎಂಬುದು ನಿರ್ಧಾರವಾಗಬೇಕು ಮತ್ತು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನ ಬದಲಾಗಬಾರದು ಹಾಗೂ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗಬಾರದು ಎಂದು ಹೇಳುವ ಮೂಲಕ ಬಿಜೆಪಿ ಸೇರ್ಪಡೆಗೆ ಮನಸ್ಸು ಮಾಡಿರುವ ಬಗ್ಗೆ ಸುಳಿವು ನೀಡಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ಮತ್ತು ಅವರಿಗೆ ಬಿಜೆಪಿಯಲ್ಲಿ ಯಾವುದೇ ಹುದ್ದೆ ಸಿಗದಂತೆ ಆಗಲು ಆಡ್ವಾಣಿ ಮತ್ತು ಸಂಸದ ಅನಂತ ಕುಮಾರ್ ಅವರೇ ಕಾರಣ. ಅನಂತ ಕುಮಾರ್ ಅವರು ಆಡ್ವಾಣಿ ಅವರ ಕಿವಿಚುಚ್ಚಿ ಯಡಿಯೂರಪ್ಪ ಪಕ್ಷ ತ್ಯಜಿಸುವಂತೆ ಮಾಡಿದ್ದರು. ಇದೀಗ ಆಡ್ವಾಣಿ ಅವರೇ ಪಕ್ಷದಿಂದ ವಿಮುಖರಾಗಿದ್ದಾರೆ. ಇದೇ ವೇಳೆ, ತಮ್ಮ ಬಗ್ಗೆ ಮೃದು ಧೋರಣೆ ಹೊಂದಿರುವ ಮೋದಿಗೆ ಪಕ್ಷದ ನೇತೃತ್ವ ನೀಡಿರುವುದೂ ತಮಗೆ ಪೂರಕವಾಗಿದೆ. ಹಾಗಾಗಿ, ಯಡಿಯೂರಪ್ಪ ಬಿಜೆಪಿಗೆ ಮರಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications