ಸದನ ಸ್ವಾರಸ್ಯ : ಕಾವೇರಿದ ಚರ್ಚೆ ಪ್ರಾರಂಭ

ವಿಧಾನ ಮಂಡಲ ಕಲಾಪದ ಆರನೇ ದಿನ ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಂಡಿತು. ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಇಂದು ಸದನಕ್ಕೆ ಆಗಮಿಸಿದ ಕಾರಣ ಸ್ಪೀಕರ್ ಅವರ ಕೋಪಕ್ಕೆ ತುತ್ತಾಗಲಿಲ್ಲ. ಸದನ ಪ್ರಾರಂಭವಾಗುವುದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕರ ಜೊತೆ ಸಮಾಲೋಚನೆ ನಡೆಸಿದರು.
ಕಾವೇರಿ ಐತೀರ್ಪು ಕುರಿತಂತೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ವಿಪಕ್ಷಗಳೊಂದಿಗೆ ಸಭೆ ನಡೆಸಿ ನಂತರ ಸದನಕ್ಕೆ ಆಗಮಿಸಿದರು. ಪ್ರತಿಪಕ್ಷ ನಾಯಕ ಕುಮಾರಸ್ವಾಮಿ ಕಾವೇರಿ ಐತೀರ್ಪು ಕುರಿತು ಚರ್ಚೆ ಪ್ರಾರಂಭಿಸಿದ್ದಾರೆ.
ಬಿಜೆಪಿ ಶಾಸಕ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರ ರಾಜ್ಯದ ಜನರ ಹಿತ ಕಾಯುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಜೂ.12ರ ವರೆಗೆ ಮೇಲುಸ್ತುವಾರಿ ಸಮಿತಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ರಾಜ್ಯದ ಹಿತ ಕಾಯಲು ಸರ್ಕಾರ ನದಿ ನೀರಿನ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ಕುರಿತು ಆಕ್ಷೇಪಣೆ ಸಲ್ಲಿಬೇಕು ಎಂದು ಬೊಮ್ಮಾಯಿ ಸೇರಿದಂತೆ ವಿಪಕ್ಷಗಳ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು. ಕಾವೇರಿ ವಿಚಾರದ ಕುರಿತು ಚರ್ಚೆ ಮುಂದುವರೆದಿದೆ.
ರಾಜ್ಯಪಾಲರ ಭಾಷಣ : ವಿಧಾನಸಭೆ ಕಲಾಪ ಶುಕ್ರವಾರ ಮುಕ್ತಾಯವಾಗಲಿದೆ. ಆದ್ದರಿಂದ ಇಂದು ಅಥವ ನಾಳೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಡಿಕೆಶಿ ಬಂದಿಲ್ಲ : ಐದು ಆರು ದಿನಗಳಿಂದಲೂ ಶಾಸಕರಾಗಿ ಪ್ರಮಾಣ ವಚನ ಸ್ಪೀಕರಿಸಲು ಸದನಕ್ಕೆ ಆಗಮಿಸದಿರುವ ಕನಕಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಇಂದು ಸಹ ಸದನಕ್ಕೆ ಆಗಮಿಸಿಲ್ಲ. ನಾಳೆ ಸದನದ ಕೊನೆಯ ದಿನವಾಗಿದ್ದು, ಆಗಮಿಸುವ ನಿರೀಕ್ಷೆ ಇದೆ.












Click it and Unblock the Notifications