ಐಟಿ ಪಾರ್ಕ್ ಸ್ಥಾಪನೆ, 80 ಲಕ್ಷ ಉದ್ಯೋಗ: ಪಾಟೀಲ್

ಮೈಸೂರು, ಗುಲ್ಬರ್ಗ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ತುಮಕೂರು, ದಾವಣಗೆರೆ ಮುಂತಾದೆಡೆ ಐಟಿ ಪಾರ್ಕ್ ಸ್ಥಾಪಿಸಲಾಗುವುದು. ಬೆಂಗಳೂರಿನ ಒತ್ತಡ ಇದರಿಂದ ಕಡಿಮೆಯಾಗುತ್ತದೆ. ಇಂಜಿನಿಯರಿಂಗ್ ಪದವೀಧರರು ರಾಜಧಾನಿ ಬೆಂಗಳೂರಿನೆಡೆಗೆ ವಲಸೆ ಬರುವುದನ್ನು ತಪ್ಪಿಸಬಹುದು.
ರಾಜ್ಯದ 2ನೇ ಹಂತದ ನಗರ, ಪಟ್ಟಣಗಳಲ್ಲಿ ಉದ್ಯೋಗ ಸೃಷ್ಟಿ, ಸಂಸ್ಥೆಗಳ ಸ್ಥಾಪನೆ, ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಐಟಿ ವಲಯಗಳನ್ನು ವಿಸ್ತರಿಸಲಾಗುವುದು ಎಂದು ಸಚಿವ ಎಸ್ ಆರ್ ಪಾಟೀಲ್ ಹೇಳಿದರು.
ಐಟಿ ಕ್ಷೇತ್ರದ ರಫ್ತು ಪ್ರಮಾಣವನ್ನು 1.35 ಲಕ್ಷ ಕೋಟಿ ರು ನಿಂದ 4 ಲಕ್ಷ ಕೋಟಿ ರು . ಗೆ ಏರಿಸಲು ಸರ್ಕಾರ ಬದ್ಧವಾಗಿದೆ. ಮುಂದಿನ 5 ವರ್ಷಗಳಲ್ಲಿ ಇದು ಕಾರ್ಯಗತವಾಗಲಿದೆ. ಇದೇ ರೀತಿ ಐಟಿ ವಲಯದಿಂದ ಸದ್ಯಕ್ಕೆ 8 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಈ ಸಂಖ್ಯೆಯನ್ನು 20 ಲಕ್ಷಕ್ಕೆ ಏರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ, ಸ್ಥಳೀಯ ಸಂಸ್ಥೆಗಳ ಬೆಳವಣಿಗೆಯಲ್ಲಿ ಸರ್ಕಾರ ಆಸಕ್ತಿ ವಹಿಸಿದೆ ಎಂದು ಐಟಿ ಸಚಿವ ಎಸ್ ಆರ್ ಪಾಟೀಲ್ ಹೇಳಿದರು.
ಮಣಿಪಾಲ್ ವಿದ್ಯಾಸಂಸ್ಥೆ ಚೇರ್ಮನ್ ಮೋಹನ್ ದಾಸ್ ಪೈ ಹಾಗೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರ ಜೊತೆ ಯಾವುದೇ ಮನಸ್ತಾಪವಿಲ್ಲ. ಅವರು ಐಟಿ ಹಾಗೂ ಬಿಟಿ ಕ್ಷೇತ್ರ ಅಭಿವೃದ್ಧಿಗೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ಕಾಲಕಾಲಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಅವರ ಜೊತೆ ಯಾವುದೇ ಅಸಮಾಧನವಿಲ್ಲ ಎಂದು ಎಸ್ ಆರ್ ಪಾಟೀಲ್ ಹೇಳಿದರು.
ಎರಡನೇ ಹಂತದ ನಗರಗಳಲ್ಲಿ ಐಟಿ ಪಾರ್ಕ್ ಗಳನ್ನು ಸ್ಥಾಪಿಸುವುದರಿಂದ ಇದರ ಜೊತೆಗೆ 'ಬ್ರ್ಯಾಂಡ್ ಬೆಂಗಳೂರು' ಯೋಜನೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಕರ್ನಾಟಕದ ಐಟಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಬೆಂಗಳೂರಿನ ಐಟಿ ವಲಯವನ್ನು ಅಭಿವೃದ್ಧಿ ಕಾಣಲಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.












Click it and Unblock the Notifications