ಕರ್ನಾಟಕಕ್ಕೆ ದುಬಾರಿ ಬೇಡಿಕೆ ಇಟ್ಟ ತಮಿಳುನಾಡು

ಕಾಲಕಾಲಕ್ಕೆ ಕರ್ನಾಟಕ ಸರ್ಕಾರ ನೀರು ಬಿಡದೆ ಇರುವ ಕಾರಣದಿಂದ ರೈತರು ಬೆಳೆ ಕಳೆದುಕೊಂಡಿದ್ದಾರೆ. ಕರ್ನಾಟಕ ಅಥವಾ ಕೇಂದ್ರ ಸರ್ಕಾರ ನಮ್ಮ ನಷ್ಟ ಭರಿಸಿಕೊಡಬೇಕು. ತಕ್ಷಣವೇ 53.18 ಟಿಎಂಸಿ ಅಡಿ ನೀರು ಬಿಡುವಂತೆ ಆದೇಶಿಸಬೇಕು ಎಂದು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್ ಹೇಳಿದ್ದಾರೆ.
ಈ ನಷ್ಟವನ್ನು ಕರ್ನಾಟಕ ಸರ್ಕಾರ ತುಂಬಿ ಕೊಡುವಂತೆ ಆದೇಶ ಮಾಡಬೇಕೆಂದು ತಮಿಳುನಾಡು ಸರ್ಕಾರ ಮತ್ತೆ ಕೋರ್ಟಿಗೆ ಮನವಿ ಮಾಡಿಕೊಂಡಿದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕಾವೇರಿ ಕ್ಯಾತೆ ಆರಂಭವಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವ ರೀತಿ ಪರಿಹಾರ ಮಾಡುತ್ತದೆ ಕಾದು ನೋಡಬೇಕಿದೆ.
ಒಟ್ಟು ಹಾನಿಯಲ್ಲಿ 1045.7 ಕೋಟಿ ರು ಭತ್ತದ ಉತ್ಪಾದನೆ ಹಾನಿ, ಬಯೋಮಾಸ್, ವಿದ್ಯುತ್ ಕೊರತೆ ಪರಿಹಾರ. ಉಳಿದಂತೆ 1,433.91 ಕೋಟಿ ರು ತಮಿಳುನಾಡಿಗೆ ಬರಬೇಕಿರುವ ನೀರನ್ನು ಕರ್ನಾಟಕ ಹೆಚ್ಚುವರಿ ಬಳಕೆ ಮಾಡಿಕೊಂಡಿದ್ದಕ್ಕೆ ದಂಡ. ತಮಿಳುನಾಡಿಗೆ ನೀರು ಬಿಡದೆ ಕರ್ನಾಟಕ, ಭತ್ತ, ಕಬ್ಬು, ಅರೆ ಒಣ ಬೆಳೆಗಳನ್ನು ಬೆಳೆದು ಭಾರಿ ಲಾಭ ಮಾಡಿಕೊಂಡಿದೆ ಎಂದು ತಮಿಳುನಾಡು ಸರ್ಕಾರ ತನ್ನ ಮನವಿಯಲ್ಲಿ ಹೇಳಿಕೊಂಡಿದೆ.
ಸುಪ್ರೀಂಕೋರ್ಟಿನಲ್ಲಿ ಕಳೆದ ಮೇ 9ರಲ್ಲಿ ಸಲ್ಲಿಸಲಾಗಿರುವ ಈ ಅರ್ಜಿ ವಿಚಾರಣೆ ಈ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. 2012ರ ಜೂನ್ ತಿಂಗಳಿನಿಂದ ಡಿಸೆಂಬರ್ ಅವಧಿಯಲ್ಲಿ ಕರ್ನಾಟಕದ ಒಟ್ಟು ನಾಲ್ಕು ಪ್ರಮುಖ ಜಲಾಶಯಗಳಿಂದ ತಮಿಳುನಾಡಿಗೆ ಬಿಟ್ಟಿರುವ ನೀರಿನಲ್ಲಿ ಶೇ 39.7 ರಷ್ಟು ಕೊರತೆ ಕಂಡು ಬಂದಿದೆ.
ನ್ಯಾಯಾಧಿಕರಣದ ಆದೇಶದ ಪ್ರಕಾರ ತಮಿಳುನಾಡು ಒಟ್ಟು 116.7 ಟಿಎಂಸಿ ಅಡಿ ನೀರು ಸಿಗಬೇಕಿತ್ತು. ಅದರೆ, 63.56 ಅಡಿ ಮಾತ್ರ ನೀರು ಸಿಕ್ಕಿದೆ. ಈಗ ನೀರು ಬಿಡಲು ಸಾಧ್ಯವಿಲ್ಲದಿದ್ದರೆ ಪರಿಹಾರ ಮೊತ್ತ ತಕ್ಷಣವೇ ನೀಡುವಂತೆ ವರಾತ ಹಿಡಿದಿದ್ದಾರೆ. ಈ ಸುದ್ದಿ ಜೊತೆಗೆ ಹೊಗೇನಕಲ್ ನಲ್ಲಿ ಕುಡಿಯುವ ನೀರಿನ ಯೋಜನೆ ಚಾಲನೆ ನೀಡಿದ ಸುದ್ದಿಯನ್ನು ಓದಿ ಅರಗಿಸಿಕೊಳ್ಳಿ.












Click it and Unblock the Notifications