ಲೋಕಸಭೆ ಚುನಾವಣೆಗೆ ಮೈತ್ರಿಕೂಟ : ಯಡಿಯೂರಪ್ಪ

ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ಕರ್ನಾಟಕ ಜನತಾ ಪಕ್ಷವು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಮೈತ್ರಿಯ ನಂತರ ಕರ್ನಾಟಕದ ಜನರಿಗೆ ಆಶ್ಚರ್ಯ ಉಂಟಾಗಲಿದೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಗೆ ಜನರು ನಿರೀಕ್ಷೆಗೂ ಮೀರಿ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಇತರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ 15-20 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಹೇಳಿದರು.
ಸಮಾನ ಮನಸ್ಕ ಪಕ್ಷಗಳ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಮೈತ್ರಿಯ ತೀರ್ಮಾನವನ್ನು ಸದ್ಯದಲ್ಲೇ ಪ್ರಕಟಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆದ್ದು, ರಾಷ್ಟಮಟ್ಟದಲ್ಲೂ ಕೆಜೆಪಿ ಪಕ್ಷದ ಅಸ್ತಿತ್ವ ಸಾಬೀತು ಪಡಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆಗೆ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು. ಆದರೆ, ಕೊನೆಗೆ ಆ ಪ್ರಸ್ತಾಪ ಮುರಿದು ಬಿದ್ದಿತ್ತು. ತೃತೀಯರಂಗ ನಿರ್ಮಿಸುವ ಕನಸು ಹೊಂದಿರುವ ಯಡಿಯೂರಪ್ಪ ಪಕ್ಷದ ಹೆಸರನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುತ್ತನೆ ಎಂದರು.
20 ದಿನ ಕಾಯಿರಿ : ಕೆಜೆಪಿ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಗುಟ್ಟು ಬಿಟ್ಟುಕೊಡದ ಅವರು, ಪಕ್ಷದ ನಿರ್ಧಾರದಿಂದ ಜನರಿಗೆ ಆಶ್ಚರ್ಯ ಉಂಟಾಗಲಿದೆ ಎಂದು ಮಾತ್ರ ಹೇಳಿದರು. ವಿಧಾನಸಭೆ ಅಧಿವೇಶನದ ನಂತರ ಮೈತ್ರಿಯ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.
ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಡರೆ ರಾಜ್ಯಕ್ಕೆ ಹಿತ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕೆಜೆಪಿ ಪ್ರಭಾವ ಬೀರಬಹುದು ಎಂದು ದೃಢ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಪಕ್ಷದ ಪ್ರಮುಖರ ಸಭೆ ಕರೆದಸು ಮೊದಲು ಚರ್ಚೆ ನಡೆಸುತ್ತೇನೆ. ನಂತರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.












Click it and Unblock the Notifications