ಪ್ರತಿಪಕ್ಷ ನಾಯಕ: ಎಚ್ಡಿಕೆ ಕಾನೂನು ಹೋರಾಟ
ಮೈಸೂರು, ಮೇ 25- ಹಾಲಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ದಕ್ಕಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥವಾಗಿ ಎದುರಿಸಲು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೊಸ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.
ಸದ್ಯಕ್ಕೆ, ಸೋಮವಾರ ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರವನ್ನು ಗೆದ್ದುಕೊಳ್ಳುವುದರತ್ತ ಕುಮಾರಸ್ವಾಮಿ ದೃಷ್ಟಿ ನೆಟ್ಟಿದ್ದಾರೆ. ಆದರೆ ಬುಧವಾರದಂದು ಆಕಸ್ಮಾತ್ ಆ ಕ್ಷೇತ್ರ ತಮ್ಮ ಕೈತಪ್ಪಿ ಬಿಜೆಪಿ ಪಾಲಾದರೆ ಗತಿಯೇನು? ಎಂದು ಮಂಡಿಗೆ ತಿನ್ನುತ್ತಿರುವ ಅವರು ಕಾನೂನು ಹೋರಾಟ ನಡೆಸಿಯಾದರೂ ಪ್ರತಿಪಕ್ಷ ನಾಯಕನಾಗಲು ನಿಶ್ಚಯಿಸಿದ್ದಾರೆ.
ಸಿದ್ದರಾಮಯ್ಯ ತಮಗೆ ಭಯಬಿದ್ದು ಬಿಜೆಪಿಗೇ ಆ ಸ್ಥಾನ ಸಿಗುವಂತಾಗಲಿ ಎಂದು ಒಳಸಂಚು ನಡೆಸಿದ್ದಾರಾ ಎಂಬ ಅನುಮಾನವೂ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಮತ ಗಳಿಕೆ ಆಧರಿಸಿ ಜೆಡಿಎಸ್ಗೆ ದೊರೆತಿರುವ ಪ್ರತಿಪಕ್ಷ ಸ್ಥಾನವನ್ನು ಹೇಗಾದರೂ ಮಾಡಿ ತಪ್ಪಿಸಿ, ಬಿಜೆಪಿಗೆ ಕೊಡುವ ಸಂಚನ್ನು ಕಾಂಗ್ರೆಸ್ ನಡೆಸಿದೆ ಎಂದು ಅವರು ಈಗಾಗಲೇ ಆರೋಪಿಸಿದ್ದಾರೆ.
ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರ ಚುನಾವಣೆ ಪ್ರಚಾರ ವೇಳೆ ಮಾತನಾಡಿರುವ ಅವರು, ಸಿಎಂ ಎಂದು ಇನಿಷಿಯಲ್ ಇಟ್ಟುಕೊಂಡಿರುವ ಅನಧಿಕೃತ ಸಿಎಂ ಒಬ್ಬರು (ಸಿದ್ದು ಆಪ್ತಮಿತ್ರ ಸಿಎಂ ಇಬ್ರಾಹಿಂ) ಈ ಬಗ್ಗೆ ರಾಜಕೀಯ ಚಿತಾವಣೆ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಏನದು ಕಾನೂನು ಹೋರಾಟ?:
ಮುಳಬಾಗಿಲು ವಿಧಾನಸಭೆ ಕ್ಷೇತ್ರ ಫಲಿತಾಂಶದ ತೀರ್ಪು ವಿವಾದಾತ್ಮಕವಾಗಿದೆ. ಹೈಕೋರ್ಟ್ ತೀರ್ಪು ಕಾಯ್ದಿರಿಸಿ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಯನ್ನು ಜಯಶಾಲಿ ಎಂದು ಘೋಷಿಸಲಾಗಿದೆ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆರೆಡು ದಿನಗಳಲ್ಲಿ ಕೋರ್ಟ್ ತೀರ್ಪು ಪ್ರಕಟವಾಗಲಿದೆ. ಅದು ಜೆಡಿಎಸ್ ಪರ ಬರಲಿದೆ ಎಂಬುದು ಕುಮಾರಸ್ವಾಮಿ ದೃಢ ವಿಶ್ವಾಸ. ಅದು ಸಾಧ್ಯವಾದರೆ ಜೆಡಿಎಸ್ ಟ್ಯಾಲಿ ಹೆಚ್ಚಾಗಿ, ಬಿಜೆಪಿಗಿಂತ ಮುಂದೆ ಸಾಗಲಿದೆ. ಅದರೊಂದಿಗೆ ಪ್ರತಿಪಕ್ಷ ನಾಯಕನ ಸ್ಥಾನ ಕುಮಾರಸ್ವಾಮಿಗೆ ಗ್ಯಾರಂಟಿ.
ಬರೀ ಒಂದು ಮುಳಬಾಗಿಲು ಕ್ಷೇತ್ರದ ಫಲಿತಾಂಶವನ್ನು ನೆಚ್ಚಿಕೊಂಡು ಅವರು ಕುಳಿತಿಲ್ಲ. ಇನ್ನೂ ಮೂರು ಕ್ಷೇತ್ರಗಳ ಫಲಿತಾಂಶದ ವಿರುದ್ಧವೂ ಅವರು ಕೋರ್ಟ್ ಕಟೆಕಟೆ ಹತ್ತಿದ್ದಾರೆ. ಸಿಂದಗಿ, ತಿ. ನರಸೀಪುರ ಹಾಗೂ ನಾಗಠಾಣಾ ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳ ವಿರುದ್ಧವೂ ಜೆಡಿಎಸ್ ನ್ಯಾಯಾಲಯ ಮೊರೆ ಹೋಗಿದೆ.
ಈಗಿನ ಫಾರ್ಟಿ-ಫಾರ್ಟಿ ಅನಿಶ್ಚಿತತೆಗೆ ಮಂಗಳ ಹಾಡಲು ಈ ಫಲಿತಾಂಶಗಳು ತಮ್ಮ ಪಕ್ಷದ ಪರವಾಗಲಿ ಎಂದು ಜೆಡಿಎಸ್ ಕಾರ್ಯಕರ್ತರೂ ಪ್ರಾರ್ಥಿಸಿದ್ದಾರೆ.












Click it and Unblock the Notifications