ಡಿಕೆಶಿ, ಲಾಡ್, ರೋಷನ್ ಬೇಗ್ಗೆ ಮಂತ್ರಿಗಿರಿ ಇಲ್ಲ

ಬಹುತೇಕ ಜಿಲ್ಲೆ ಹಾಗೂ ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದು, ಸಂಪುಟದಲ್ಲಿ ಹಿರಿಯರು ಹೆಚ್ಚಿನ ಪ್ರಾತಿನಿಧ್ಯ ಪಡೆದಿದ್ದಾರೆ. 10ಕ್ಕೂ ಹೆಚ್ಚು ಶಾಸಕರಿಗೆ ಮೊದಲ ಬಾರಿ ಸಚಿವರಾಗುವ ಅವಕಾಶ ನೀಡಲಾಗಿದ್ದು, ಮಹಿಳೆಯರ ಕೋಟಾದಲ್ಲಿ ಉಮಾಶ್ರೀ ಅವರಿಗೆ ಮಾತ್ರ ಸ್ಥಾನ ಲಭ್ಯವಾಗಿದೆ.
ಮಹತ್ವದ ನಿರ್ಣಯ ಎಂಬಂತೆ ಹಿರಿಯ ನಾಯಕ ಡಿ.ಕೆ.ಶಿವಕುಮಾರ್, ರೋಷನ್ ಬೇಗ್ ಮತ್ತು ಅನಿಲ್ ಲಾಡ್ ಅವರಿಗೆ ಸಚಿವ ಖಾತೆ ನೀಡದಿರುವ ಹೈ ಕಮಾಂಡ್ ನಾಯಕರು ನಿರ್ಧರಿಸಿದ್ದಾರೆ. ಪಕ್ಷದ ನಿರ್ಧಾರದ ವಿರುದ್ದ ಸಿಡಿದು ನಿಂತರುವ ಅನಿಲ್ ಲಾಡ್ ಶಾಸಕ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ಡಿಸಿಎಂ ಇಲ್ಲ : ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗುತ್ತದೆ ಎಂಬ ಚರ್ಚೆಗೂ ತೆರೆ ಬಿದ್ದಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಯಾವುದೇ ಹುದ್ದೆ ಬೇಡ ಎಂದು ಸಂಪುಟದಿಂದ ದೂರ ಉಳಿದಿದ್ದಾರೆ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ವರಿಷ್ಠರ ಮೇಲೆ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಿದ್ದ ಡಿ.ಕೆ. ಶಿವಕುಮಾರ್, ಅಂತಿಮವಾಗಿ ಹೈಕಮಾಂಡ್ ಆದೇಶ ಪಾಲಿಸಿದ್ದಾರೆ. ವರಿಷ್ಠರ ಸೂಚನೆಯಂತೆ ಕೆಲಕಾಲ ಸಂಪುಟದಿಂದ ಹೊರಗುಳಿಯುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿಕೆಟ್ ಗಾಗಿ ಹೈ ಕಮಾಂಡ್ ನಾಯಕರ ವಿರುದ್ಧ ಸಿಡಿದು ನಿಂತಿದ್ದ ಅನಿಲ್ ಲಾಡ್, ಈಗ ಸಚಿವ ಸ್ಥಾನ ನೀಡದಿದ್ದರೆ, ರಾಜ್ಯಸಭೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಶನಿವಾರ ಅವರು ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಸಂಪುಟ ರಚನೆ ವಿಚಾರದಲ್ಲಿ ಮುಖ್ಯಮಂತ್ರಿ ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿರುವ ಹೈಕಮಾಂಡ್, ಖಾತೆ ಹಂಚಿಕೆಯ ಬಗ್ಗೆಯೂ ಸಿಎಂ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಖಾತೆ ಹಂಚಿಕೆ ಬಗ್ಗೆ ವರಿಷ್ಠರೊಂದಿಗೆ ಸಮಾಲೋಚಿಸಿರುವ ಸಿದ್ದರಾಮಯ್ಯ, ಶನಿವಾರ ಸಂಜೆಯೇ ಖಾತೆ ಹಂಚಿಕೆ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಗೋಡು ಸ್ಪೀಕರ್ : ಸ್ಪೀಕರ್ ಸ್ಥಾನ ಅಲಂಕರಿಸುವಂತೆ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಹೈಕಮಾಂಡ್ ಸೂಚಿಸಿದ್ದರೂ ಅವರು ಇನ್ನೂ ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ. ಕಾಗೋಡು ಮನವೊಲಿಸುವ ಕೆಲಸವನ್ನು ಕೆಪಿಸಿಸಿ ಅಧ್ಯಕ್ಷರ ಹೆಗಲಿಗೆ ವರಿಷ್ಠರು ವಹಿಸಿದ್ದಾರೆ.
(ಸಂಭಾವ್ಯ ಸಚಿವರ ಪಟ್ಟಿ) (ಪ್ರಮಾಣವಚನ ಸ್ವೀಕರಿಸಿದವರು)











Click it and Unblock the Notifications