ಶೃಂಗೇರಿ ಬಳಿ ನಕ್ಸಲರ ಜೊತೆ ಚಕಮಕಿ ನಿಜವೇ?

ಶೃಂಗೇರಿ ತಾಲೂಕಿನಲ್ಲಿ ನಕ್ಸಲರ ಸಂಚಾರ ಇರುವುದು ನಿಜ. ಇತ್ತೀಚೆಗೆ ತಾಲೂಕಿನ ಕೆರೆಕಟ್ಟೆ ಬಳಿ ಹೆಗ್ಗಾನ್ ಕೊಡಿಗೆ ಕಾಡಿನಲ್ಲಿ ಕಾಣಿಸಿಕೊಂಡಿದ್ದು ನಿಜ. ಆದರೆ, ಗುಂಡಿನ ಚಕಮಕಿ, ನಕ್ಸಲರಿಂದ ದಾಳಿ ನಡೆದಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ.
ಜಿಲ್ಲಾ ರಕ್ಷಣಾಧಿಕಾರಿ ಎನ್ ಶಶಿಕುಮಾರ್ ಅವರು ನಕ್ಸಲ್ ನಿಗ್ರಹ ಪಡೆ ಹೊರ ಹಾಕಿದ ವಿಷಯವನ್ನು ಅಲ್ಲಗೆಳೆದಿದ್ದಾರೆ. ಮುಂಡಗೋಡು ಲತಾ ನೇತೃತ್ವದಲ್ಲಿ ಸುಮಾರು 6 ಜನ ನಕ್ಸಲರು ಕಳೆದ ಮುರ್ನಾಲ್ಕು ದಿನಗಳಿಂದ ಶೃಂಗೇರಿ ಗಡಿಭಾಗದ ಕಾಡುಗಳಲ್ಲಿ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಸಿಕ್ಕಿದೆ. ಆದರೆ, ನಕ್ಸಲರು ದಾಳಿ ನಡೆಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ನಕ್ಸಲ್ ಪಡೆ ಹೇಳಿಕೆ: ನಕ್ಸಲ್ ನಿಗ್ರಹ ದಳದ ಮಾಹಿತಿಯಂತೆ ಗುಂಡಿನ ಚಕಮಕಿ ನಡೆದಿದೆ. ಓರ್ವನಿಗೆ ಗಾಯವಾಗಿದೆ. ನಕ್ಸಲ್ ನಿಗ್ರಹ ಪಡೆಯ ಡಿವೈಎಸ್ಪಿ ಶಂಕರ್ ನೇತೃತ್ವದ ತಂಡ ಬುಧವಾರ ಕೆರೆಕಟ್ಟೆ ಸಮೀಪದ ಕಾಡಿನಲ್ಲಿ ಸಂಚರಿಸುವಾಗ ನಕ್ಸಲರು ಏಕಾಏಕಿ ಗುಂಡು ಹಾರಿಸಿದರು ಎನ್ನಲಾಗಿದೆ.
ನಕ್ಸಲರು ಹಾರಿಸಿದ ಗುಂಡಿಗೆ ಪೊಲೀಸ್ ಪೇದೆ ಗಿರೀಶ್ ಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ. ಕೆರೆಕಟ್ಟೆ ಬಳಿಯ ಮುಡುಬಾ ಗ್ರಾಮದ ಸುಧಾಕರ ಹೆಗ್ಗಡೆ ಅವರ ಮನೆಯಿಂದ ಊಟ ಪಡೆದು ತೆರಳಿದರು ಎಂದು ಎಎನ್ ಎಫ್ ತಂಡ ಹೇಳಿಕೆ ನೀಡಿತ್ತು.
ಆದರೆ, ದಾಳಿ ನಡೆದಿದ್ದು ನಕ್ಸಲರ ಜೊತೆಯಲ್ಲ ಹವ್ಯಾಸಿ ಬೇಟೆಗಾರರ ಗುಂಪಿನ ಜೊತೆಗೆ, ನಕ್ಸಲ್ ನಿಗ್ರಹ ಪಡೆ ಗೊಂದಲದಲ್ಲಿ ಗುಂಡು ಹಾರಿಸಿದ್ದು ಪೇದೆ ಗಿರೀಶ್ ಗೆ ತಗುಲಿದೆ ಎಂಬ ಸುದ್ದಿಯೂ ಇದೆ. ಒಟ್ಟಾರೆ ನಕ್ಸಲ್ ನಿಗ್ರಹ ಪಡೆಯ ಗೊಂದಲ, ನಕ್ಸಲರ ಪುನರಾಗಮನದ ಜೊತೆಗೆ ಜನರು ಭೀತಿಯಿಂದ ಮುಂಗಾರಿಗಾಗಿ ಕಾದು ಕೂತಿದ್ದಾರೆ.












Click it and Unblock the Notifications