ಜೂನ್ ಮೊದಲ ವಾರ ಕರ್ನಾಟಕಕ್ಕೆ ಮುಂಗಾರು ಮಳೆ

ಜೂನ್ 3ರಂದು ಮುಂಗಾರು ಮಳೆ ಕೇರಳಕ್ಕೆ ಮತ್ತು ಜೂನ್ 8ರಂದು ಕರ್ನಾಟಕಕ್ಕೆ ಅಪ್ಪಳಿಸಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ಇನ್-ಚಾರ್ಜ್ ನಿರ್ದೇಶಕ ಪುಟ್ಟಣ್ಣ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಕಳೆದ ವರ್ಷ ಮಳೆ ಕಡಿಮೆ ಸುರಿದಿದ್ದು, ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕುಡಿಯಲು ಮತ್ತು ಬಳಸಲು ನೀರಿಲ್ಲದೆ ಸಾರ್ವಜನಿಕರು ತತ್ತರಿಸಿದ್ದಾರೆ. ಕೆಆರ್ಎಸ್ ಸಂಪೂರ್ಣ ಬತ್ತಿಹೋಗಿರುವುದರಿಂದ ನೀರಿನ ಪೂರೈಕೆಗೆ ಭಾರೀ ವ್ಯತ್ಯಯವಾಗಿದೆ. ಮುಂಗಾರು ಆರಂಭವಾಗಿ ಕೆರೆಕಟ್ಟೆಗಳು, ನದಿ ಅಣೆಕಟ್ಟೆಗಳು ಸಾಕಷ್ಟು ನೀರು ಹರಿದುಬರುವವರೆಗೆ ಈ ನೀರಿನ ಬವಣೆ ತಪ್ಪಿದ್ದಲ್ಲ.
ಮಳೆ ಬರುವ ನಿರೀಕ್ಷೆಯಿಂದ ರಾಜ್ಯದೆಲ್ಲೆಡೆ ಎತ್ತುಗಳಿಗೆ ನೇಗಿಲು ಕಟ್ಟಿ ರೈತರು ಉಳುವ ಕಾರ್ಯ ಆರಂಭಿಸಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಕಾರ್ಮೋಡಗಳು ಇನ್ನೂ ಆವರಿಸಿಕೊಳ್ಳಲು ಆರಂಭಿಸಿಲ್ಲ. ಕಳೆದ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದ್ದರಿಂದ ಕೆರೆಗಳೆಲ್ಲ ಈಗಾಗಲೆ ಬರಿದಾಗಿವೆ. ಈ ಬಾರಿಯಾದರೂ ಉತ್ತಮ ಮಳೆಯಾಗಲೆಂದು ರೈತರು ವರುಣ ದೇವರ ಮೊರೆ ಹೋಗಿದ್ದಾರೆ.
ರಾಜ್ಯದೆಲ್ಲೆಡೆ ಬಿಸಿಲ ತಾಪ ಏರಿದ್ದು, ಗುಲಬರ್ಗಾದಲ್ಲಿ ಅತಿಹೆಚ್ಚು 40.2 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ರಾಜ್ಯದ ಕರಾವಳಿ ಮತ್ತು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಸಂಜೆಯ ಹೊತ್ತಿಗೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ.











Click it and Unblock the Notifications