ಸಿಎಂ ಆಯ್ಕೆ : ಶಾಸಕಾಂಗ ಪಕ್ಷದ ಸಭೆ ಆರಂಭ
ಸಿಎಂ ಆಗಲು ಉರುಳು ಸೇವೆ : ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕೆಂದು ಅವರ ಅಭಿಮಾನಿಗಳು ಖರ್ಗೆ ಅವರ ಸ್ವ ಕ್ಷೇತ್ರದಲ್ಲಿ ಉರುಳು ಸೇವೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ವರುಣಾ ಕ್ಷೇತ್ರದಲ್ಲಿ ಅವರ ಅಭಿಮಾನಿಗಳು ನೂರಾವೊಂದು ತೆಂಗಿನಕಾಯಿ ಒಡೆದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ದಾವಣಗೆರೆ ಜಿಲ್ಲೆಯಲ್ಲಿಯೂ ಕಾಂಗ್ರಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿ ಆಗಲಿ ಎಂದು ಬೆಂಬಲಿಗರು ಉರುಳು ಸೇವೆ ನಡೆಸಿದೆರು.
ಒಗ್ಗಟ್ಟಾಗಿದ್ದೇವೆ : ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಸಿಎಂ ಆಯ್ಕೆಯ ಕುರಿತು ಹೈ ಮಾಂಡ್ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪಕ್ಷದ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದರು. ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ವಿಶ್ವಾಸವನ್ನು ಉಳಿಸಿಕೊಂಡು ರಾಜ್ಯಕ್ಕೆ ಉತ್ತಮ ಸರ್ಕಾರ ನೀಡುತ್ತೇವೆ. ರಾಜ್ಯದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಹಿಂದಿನ ಸುದ್ದಿಗಳು
ಕೃಷ್ಣಾ ಕೃಷ್ಣಾ ಎಂದ ಸಿದ್ದು : ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಸಿದ್ದರಾಮಯ್ಯ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಸದಾಶಿವನಗರದ ಕೃಷ್ಣಾ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಅರ್ಧಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದ್ದಾರೆ.
ವೀಕ್ಷಕರ ಆಗಮನ : ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದ ಎಐಸಿಸಿ ವೀಕ್ಷಕರ ತಂಡ ರಾಜ್ಯಕ್ಕೆ ಆಗಮಿಸಿದೆ. 12.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ವೀಕ್ಷರರ ಬಗ್ಗೆ ತಿಳಿದಿಲ್ಲ : ಸಿಎಂ ಆಯ್ಕೆಗಾಗಿ ಎಐಸಿಸಿಯ ವೀಕ್ಷಕರ ತಂಡ ಆಗಮಿಸುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ಮತ್ತು ಸಿಎಂ ಸ್ಥಾನದ ಆಕ್ಷಾಂಕ್ಷಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತಾವು ಸಿಎಂ ಸ್ಥಾನದ ಆಕಾಂಕ್ಷಿ ಹೌದು ಆದರೆ, ಪಕ್ಷ ನಾಯಕ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುವುದಾಗಿ ಅವರು ಹೇಳಿದರು.
ಗುಂಪುಗಾರಿಕೆ ಮಾಡೋಲ್ಲ : ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಯಾವುದೇ ಗುಂಪುಗಾರಿಕೆ ಮಾಡುವುದಿಲ್ಲ. ಹೈ ಕಮಾಂಡ್ ನಾಯಕರು ವೈಯಕ್ತಿಕವಾಗಿ ಪ್ರಶ್ನಿಸಿದರೆ, ಸಿಎಂ ಯಾರಾಗಬೇಕು ಎಂದು ಗೌಪ್ಯವಾಗಿ ಹೇಳುತ್ತೇವೆ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ್ ಸಿದ್ದರಾಮಯ್ಯ ಭೇಟಿ ಮಾಡಿದ ನಂತರ ಹೇಳಿದ್ದಾರೆ.
ಸಿದ್ದು ಪರ ಬ್ಯಾನರ್ ಪ್ರಚಾರ : ಸಿದ್ದರಾಮಯ್ಯ ನಿವಾಸದ ಮುಂದೆ ಸೇರಿರುವ ನೂರಾರು ಕಾರ್ಯಕರ್ತರು ಶಾಸಕಾಂಗ ಸಭೆಯಲ್ಲಿ ಸಿದ್ದರಾಂಯ್ಯ ಅವರನ್ನು ಸಿಎಂ ಎಂದು ಆಯ್ಕೆ ಮಾಡಬೇಕು ಎಂಬ ಬ್ಯಾನರ್ ಹಿಡಿದು ಶಾಸಕರ ಗಮನ ಸೆಳೆಯುತ್ತಿದ್ದಾರೆ.