ಮಚ್ಚು-ಲಾಂಗು ವೀರರ ವಿರುದ್ಧ ಬಿತ್ತು ಗೂಂಡಾ ಕೇಸು
ಕೋಲಾರ, ಮೇ 7: ಮೊನ್ನೆ ಮತದಾನದ ವೇಳೆ ತಾನುಂಟು ಮೂರು ಲೋಕವುಂಟು ಎಂದು ಅಪ್ಪಟ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದ ಕಾಂಗ್ರೆಸ್ಸಿನ 5 ಮಂದಿ ಪುಡಿ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಘಟನೆಯನ್ನು ಕಣ್ಣಾರೆ ಕಂಡ ಕೋಲಾರದ ಜನತೆ ಇದೇನು ಭವಿಷ್ಯದ ಮುನ್ಸೂಚನೆಯಾ ಎಂದು ಬೆಚ್ಚಿಬಿದ್ದಿದ್ದಾರೆ.
ಮತದಾನದ ಸಂದಭರ್ದಲ್ಲಿ ಲಾಂಗು ಮತ್ತು ಕಬ್ಬಿಣದ ರಾಡುಗಳನ್ನು ಜಳಪಿಸುತ್ತಾ, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ದಕ್ಕೆ ಉಂಟು ಮಾಡಿದ ಆ ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಜಿಲ್ಲಾ ರಕ್ಷಣಾಧಿಕಾರಿ ರಾಮ ನಿವಾಸ್ ಸೆಪಟ್ ಆದೇಶಿಸಿದ್ದಾರೆ.
ಮೊನ್ನೆ ಭಾನುವಾರ ಸರಕಾರಿ ಬಾಲಕರ ಕಾಲೇಜು ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದ್ದ ಸಮಯದಲ್ಲಿ ಕುರುಬರ ಪೇಟೆಯ ಕುಮಾರ್, ಈತನ ತಮ್ಮಂದಿರಾದ ನಗರಸಭಾ ಸದಸ್ಯ ಪ್ರಸಾದ್ ಬಾಬು, ಲಕ್ಷ್ಮಿನಾರಾಯಣ, ಸಂದೀಪ್, ಸಂತೋಷ್ ಮತ್ತು ಇತರರು ಗುಂಪು ಕಟ್ಟಿಕೊಂಡು, ಕೈಗಳಲ್ಲಿ ಲಾಂಗು ಮತ್ತು ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು, ಅಶ್ವಿನ್ ಎಂಬವನನ್ನು ಕೊಲೆ ಮಾಡುವುದಾಗಿ ಕೂಗಾಡಿಕೊಂಡು ರಸ್ತೆಯಲ್ಲಿ ನಡೆದಾಡಿದ್ದರು. ಅಶ್ವಿನ್, ಜಿಲ್ಲಾ ಸಚಿವ, ಪಕ್ಷೇತರ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರ ಬೆಂಬಲಿಗ.
ಕೂಡಲೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದು ಕೊಂಡರು ಎಂದು ಜಿಲ್ಲಾ ರಕ್ಷಾಣಾಧಿಕಾರಿ ತಿಳಿಸಿದರು.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಮೊ.ಸಂ. 135/2013 ಕಲಂ 143, 144, 147, 148, 504, 506, 307, 224 ರೆ/ವಿ 149 ಐಪಿಸಿ ಮತ್ತು 130 ಆರ್ಪಿ ಆಕ್ಟ್ ರೀತ್ಯ ಕೇಸು ದಾಖಲು ಮಾಡಲಾಗಿದೆ ಎಂದು ಸೆಪಟ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಗರಸಭೆ ಸದಸ್ಯ ಪ್ರಸಾದ್ ಬಾಬು, ಕುಮಾರ್, ಸಂದೀಪ್, ಸಂತೋಷ್, ಲಚ್ಚಿ ಆಲಿಯಾಸ್ ಲಕ್ಷ್ಮೀನಾರಾಯಣ ಹಾಗೂ ಇತರೆ ಮೂವರ ವಿರುದ್ದ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ನಗರಸಭೆ ಸದಸ್ಯಪ್ರಸಾದ್ ಬಾಬು ಹಾಗೂ ಸದರ ಕುಮಾರ್ನನ್ನು ಭಾನುವಾರವೇ ಬಂಧಿಸಲಾಗಿತ್ತು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪ್ರಸಾದ್ ಬಾಬು ತಪ್ಪಿಸಿಕೊಂಡಿದ್ದ.