ಮತದಾನ ನಿಮ್ಮ ಹಕ್ಕು, ತಪ್ಪದೆ ಚಲಾಯಿಸಿ
ಒಟ್ಟು 223 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ನಾಲ್ಕು ಕೋಟಿಗೂ ಹೆಚ್ಚು ಮತದಾರರು, 2940 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಒಟ್ಟು 52,034 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಆಡಳಿತ ಯಾರು ನಡೆಸಬೇಕು ಎಂದು ನಿರ್ಣಯಿಸುವ ಕಾಲ ಪ್ರಾರಂಭವಾಗಿದೆ. ಜನರು ಮತದಾನ ಮಾಡಲು ಪ್ರಾರಂಭಿಸಿದ್ದಾರೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಮತದಾರರು ಸರದಿ ಸಾಲಿನಲ್ಲಿ ಮತದಾನ ಪ್ರಾರಂಭವಾಗುವುದಕ್ಕೆ ಕಾದು ನಿಂತಿದ್ದರು.
ಯಾರು ಎಲ್ಲಿ ಮತದಾನ ಮಾಡಿದರು
ಶಿವಮೊಗ್ಗ : ಶಿಕಾರಿಪುರದಲ್ಲಿ ಮತದಾನ ಮಾಡಲು ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕುಟುಂಬ ಸಮೇತರಾಗಿ ಕಾದು ನಿಂತಿದ್ದರು. ಅವರಿಗಿಂತ ಮೊದಲೇ ಆಗಮಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಯಡಿಯೂರಪ್ಪ ಅವರಿಗಿಂತ ಮೊದಲು ಮತದಾನ ಮಾಡಿದರು. ನಂತರ ಯಡಿಯೂರಪ್ಪ ಮತ್ತು ಕುಟುಂಬ ಸದಸ್ಯರು ಮತದಾನ ಮಾಡಿದರು.
ತುಮಕೂರು : ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಠದ ಅವರಣದಲ್ಲಿರುವ ಮತಗಟ್ಟೆಯಲ್ಲಿ ಮೊದಲು ಮತದಾನ ಮಾಡಿದರು. ಮತದಾನದ ಮೌಲ್ಯ ಹೆಚ್ಚಾಗಿದ್ದು, ಜನರು ಮತದಾನ ಮಾಡುವಂತೆ ಅವರು ಕರೆ ನೀಡಿದರು.
ಬೆಂಗಳೂರು : ನಗರದ ಜನರು ಬೇಗ ಮತದಾನ ಮಾಡುವುದಿಲ್ಲ ಎಂಬ ಆರೋಪಗಳು ಸುಳ್ಳಾಗಿದೆ. ಬೆಂಗಳೂರಿನ ಹಲವಾರು ಮತಗಟ್ಟೆಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ರಾಜಾಜಿನಗರದ ಮತಗಟ್ಟೆಯಲ್ಲಿ ಸಚಿವ ಸುರೇಶ್ ಕುಮಾರ್ ಮೊದಲು ಮತದಾನ ಮಾಡಿದರು.
ಶಿವಾಜಿನಗರದ 63, 65,67ರ ಮತಗಟ್ಟೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಮತದಾನ ಕೆಲವು ಹೊತ್ತು ತಡವಾಗಿ ಪ್ರಾರಂಭವಾಗುವ ಸಾಧ್ಯತೆ ಇದೆ. ಮತದಾನ ಮಾಡಲು ಆಗಮಿಸಿದ ಜನರು ತಾಂತ್ರಿಕ ದೋಷಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು : ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪತ್ನಿ ಸಮೇತರಾಗಿ ಪುತ್ತೂರಿನಲ್ಲಿ ಮತದಾನ ಮಾಡಿದರು. ಲೇಡಿ ಹಿಲ್ ಶಾಲೆಯಲ್ಲಿ ಚುನಾವಣಾಧಿಕಾರಿಗಳೇ ಗೈರು ಹಾಜರಾಗಿದ್ದು, ಇನ್ನೂ ಮತದಾನ ಪ್ರಾರಂಭವಾಗಿಲ್ಲ.
ಚುನಾವಣಾಧಿಕಾರಿ ನಿಧನ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಚುನಾವಣಾಧಿಕಾರಿ ಎಂ.ಸಿ.ಮಹೇಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸೆಕ್ಟರ್ ಆಫೀಸರ್ ಆಗಿ ನೇಮಕಗೊಂಡಿದ್ದ ಮಹೇಂದ್ರ ಅವರ ಸ್ಥಾನಕ್ಕೆ ವಿ.ಆರ್.ಗೌಡ ಅವರನ್ನು ನೇಮಿಸಲಾಗಿದ್ದು, ಮತದಾನಕ್ಕೆ ಯಾವುದೇ ಆಡಚಣೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಮತದಾರ ಸಾವು : ಚಾಮರಾಜ ನಗರ ಜಿಲ್ಲೆಯ ರಾಮಸಮುದ್ರದಲ್ಲಿ ಮಾಧು ಶೆಟ್ಟಿ (45) ಎಂಬ ಮತದಾರನೊಬ್ಬ ಮತದಾನ ಮಾಡಿದ ಬಳಿಕ, ಮನೆಗೆ ಸಾಗುವ ದಾರಿಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬಹಿಷ್ಕಾರದ ಬಿಸಿ
* ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡ ಹುಸೇನಪುರ ಗ್ರಾಮಸ್ಥರು ಮೂಲ ಸೌಕರ್ಯ ನೀಡುವಂತೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 172ರ ಬಳಿ ಗ್ರಾಮಸ್ಥರು ಆಗಮಿಸುತ್ತಿಲ್ಲ. ಮತದಾನ ಪ್ರಾರಂಭವಾಗಿ ಒಂದು ಗಂಟೆ ಕಳೆದಿದೆ. ಆದರೂ ಒಂದು ಮತದಾನ ವಾಗಿಲ್ಲ ಚುನಾವಣಾಧಿಕಾರಿಗಳು ಜನರಿಗಾಗಿ ಕಾದು ಕುಳಿತಿದ್ದಾರೆ.