ಎಚ್ಡಿಕೆ ದಂಪತಿಯಿಂದ ಗೋಪೂಜೆ? ಏನಿದು ವ್ಯಂಗ್ಯ?
ಬೆಂಗಳೂರು, ಮೇ. 5 : ಈ ಬಾರಿ ಗೆಲ್ಲಿಸಿಕೊಡಪ್ಪ ದೇವರೆ ಅಂತ ತಮ್ಮ ಇಷ್ಟ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಸಾಷ್ಟಾಂಗ ನಮಸ್ಕಾರ ಹಾಕದಿರುವ ಅಭ್ಯರ್ಥಿಗಳು ತೀರ ವಿರಳ. ವಿಧಾನಸಭೆ ಚುನಾವಣೆಯ ಸಂದರ್ಭವೇ ಅಂತಹುದು. ನಾಸ್ತಿಕರನ್ನೂ ಆಸ್ತಿಕರನ್ನಾಗಿ ಮಾಡಿಬಿಡುತ್ತದೆ.
ಇದರಲ್ಲಿ ಅಂತಹ ವಿಶೇಷವೇನೂ ಇಲ್ಲ. ಆದರೆ, ಮುಖ್ಯಮಂತ್ರಿ ಗಾದಿಯ ಮೇಲೆ ಎರಡೂ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ರಾಮನಗರ ಜಿಲ್ಲೆ ಬಿಡದಿ ತಾಲೂಕಿನ ಕೇತಮಾರನಹಳ್ಳಿಯಲ್ಲಿ ಗೋವಿನ ಪೂಜೆ ಮಾಡಿರುವುದು ಸಾಕಷ್ಟು ಆಸಕ್ತಿ ಕೆರಳಿಸಿರುವುದು ಮಾತ್ರವಲ್ಲ ಟೀಕೆಗೂ ಗುರಿಯಾಗಿದೆ.

ಮತದಾನ ಮಾಡುವ ಮುನ್ನ ಗೋವಿನ ಪೂಜೆ ಮಾಡಿದರೆ ಎಲ್ಲ ಇಷ್ಟಾರ್ಥ ನೆರವೇರುತ್ತದೆ ಎಂಬ ಹಿರಿಯರೊಬ್ಬರ ಸಲಹೆಯ ಮೇರೆಗೆ ಕುಮಾರಸ್ವಾಮಿ ದಂಪತಿಗಳಿಬ್ಬರು ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರಿನಲ್ಲಿ ಕುಳಿತು ದೇವೇಗೌಡರು ಸ್ತೋತ್ರ ಪಠಿಸಿದ್ದು ಮತ್ತು ರೇವಣ್ಣನವರು ಮತಯಂತ್ರವನ್ನೇ ಮೂರು ಬಾರಿ ವಾಸ್ತು ಪ್ರಕಾರ ತಿರುಗಿಸಿದ್ದಕ್ಕಿಂತ ಕುಮಾರಸ್ವಾಮಿ ದಂಪತಿಗಳ ಪೂಜೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
HD Kumaraswamy couple worship holy Cow before exercising vote in Bidadi #JDS #karnatakavotes
— Oneindia Kannada (@OneindiaKannada) May 5, 2013
ಪವಿತ್ರವಾದ ಗೋಮಾತೆಗೆ ಪೂಜೆ ಸಲ್ಲಿಸುವುದು ಹೊಸದೇನಲ್ಲವಾದರೂ, ಗೋಹತ್ಯೆ ನಿಷೇಧ ಮಸೂದೆಗೆ ಭಾರತೀಯ ಜನತಾ ಪಕ್ಷ ಮುಂದಾದಾಗ, ಆ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದ ಜನತಾದಳ (ಜಾತ್ಯತೀತ) ಪಕ್ಷದ ನಾಯಕ ಕುಮಾರಸ್ವಾಮಿ ಅವರೇ ಈಗ ಗೋವಿಗೆ ಪೂಜೆ ಸಲ್ಲಿಸಿರುವುದು ಟ್ವಿಟ್ಟರಿನಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
But supports cow slaughter! RT @oneindiakannada HD Kumaraswamy couple worship holy Cow before exercising vote in Bidadi #JDS #karnatakavotes
— Kiran Kumar S (@KiranKS) May 5, 2013
ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿದವರಿಂದ ಗೋವಿನ ಪೂಜೆ... ಇದೆಂಥ ವ್ಯಂಗ್ಯ ಎಂದು ಟ್ವಿಟ್ಟಿಗರೊಬ್ಬರು ಕುಮಾರಸ್ವಾಮಿ ತಲೆಯ ಮೇಲೆ ಕುಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ, ಮಸೂದೆ ವಿರೋಧಿಸಿದರೂ ಅವರೇನು ತಿನ್ನುವುದಿಲ್ಲವಲ್ಲ. ಆದರೆ, ಮಸೂದೆ ಮಂಡಿಸಿದ ಪಕ್ಷ ಬಿಜೆಪಿಯ ಶಾಸಕರನೇಕರು ತಿನ್ನುತ್ತಾರೆ ಎಂದು ಪ್ರತ್ಯುತ್ತರ ಬಿಸಾಕಿದ್ದಾರೆ.
ಇದು ಕುಮಾರಸ್ವಾಮಿ ಸೂಪರ್ ರಾಜತಂತ್ರ. ಗೋವನ್ನು ಪೂಜಿಸಿದರೆ ಹಿಂದೂಗಳ ಮತ ಬೀಳುತ್ತವೆ. ಗೋಹತ್ಯೆ ನಿಷೇಧ ಮಸೂದೆಯನ್ನು ಬೆಂಬಲಿಸಿದರೆ ಅನ್ಯ ಕೋಮಿನವರ (ಜಾತ್ಯತೀತ) ಮತಗಳು ಬೀಳುತ್ತವೆ. ಎರಡೂ ಕಡೆಯಿಂದ ಗೆಲುವುದು ಶತಸಿದ್ಧ, ವಾಹ್ ಎಂದು ಮತ್ತೊಬ್ಬರು ಈ ಪ್ರಕರಣವನ್ನು ವ್ಯಾಖ್ಯಾನಿಸಿದ್ದಾರೆ.
ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬಂದರೆ ಏನು ಮಾಡುತ್ತಾರೋ ಏನೋ. ಆದರೆ, ಕಾಂಗ್ರೆಸ್ ಮಾತ್ರ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಗೋಹತ್ಯೆಗೆ ಅನುಮತಿ ನೀಡುವುದಾಗಿ ಗುಲಬರ್ಗದಲ್ಲಿ ಘಂಟಾಘೋಷವಾಗಿ ಸಾರಿದ್ದಾರೆ. ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರವನ್ನು ಮರಳಿ ಪಡೆಯುವುದೆ? ಕುಮಾರಸ್ವಾಮಿ ಮತ್ತೆ ಗದ್ದುಗೆ ಏರುವರೆ? ಮೇ 8ರಂದು ಹೊರಬರಲಿರುವ ಚುನಾವಣೆ ಫಲಿತಾಂಶ ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಡಲಿದೆ.












Click it and Unblock the Notifications