ಮತದಾನಕ್ಕೆ ಕರ್ನಾಟಕ ಸಿದ್ಧ : ಈ ಭಾನುವಾರ ನಿಮ್ಮದು

Stage set for Assembly election
ಬೆಂಗಳೂರು, ಮೇ 4 : ಕರ್ನಾಟಕದ ಭವಿಷ್ಯ ಬದಲಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಮೇ 5ರಂದು ನಡೆಯಲಿರುವ ಮತದಾನಕ್ಕೆ ಕರ್ನಾಟಕ ಸಿದ್ಧಗೊಂಡಿದೆ. ಮತದಾರರಿಗೆ ಇಂಥದೊಂದು ಭಾನುವಾರ ಸಿಗುವುದು ಐದು ವರ್ಷಗಳಿಗೊಮ್ಮೆ ಮಾತ್ರ. ಇಂತಹ ಅವಕಾಶ ಸದುಪಯೋಗ ಪಡಿಸಿಕೊಂಡು ಭಾನುವಾರ ಎಲ್ಲರೂ ತಪ್ಪದೆ ಮತದಾನ ಮಾಡಿ, ಯೋಗ್ಯ ವ್ಯಕ್ತಿಯನ್ನು ಆರಿಸಿ ಎಂದು ಒನ್ಇಂಡಿಯಾ ಕನ್ನಡ ಮನವಿ ಮಾಡುತ್ತದೆ.

ಶನಿವಾರವೇ ಮತಯಂತ್ರಗಳೊಂದಿಗೆ ಚುನಾವಣಾಧಿಕಾರಿಗಳು ಮತಗಟ್ಟೆಗಳಿಗೆ ತೆರಳಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು ಸಂಜೆ 6 ಗಂಟೆವರೆಗೆ ಮತದಾನ ಮಾಡಲು ಅವಕಾಶವಿದೆ. ಶಾಂತಿಯುತವಾಗಿ ಮತದಾನ ನಡೆಸಲು ಪೊಲೀಸ್ ಇಲಾಖೆ ಮತ್ತು ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿವೆ.

ಬಿಜೆಪಿ ಅಭ್ಯರ್ಥಿ ನಿಧನ ಹೊಂದಿದ ಪಿರಿಯಾಪಟ್ಟಣ ಕ್ಷೇತ್ರ ಹೊರತು ಪಡಿಸಿ ಒಟ್ಟು 223 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 51,648 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 4,36,14,881 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಶೇ 100ರಷ್ಟು ಮತದಾನವಾಗಬೇಕು. ಆದ್ದರಿಂದ ಜನರು ಕಡ್ಡಾಯವಾಗಿ ಮತದಾನ ಮಾಡಿ ಎಂದು ಆಯೋಗ ರಾಜ್ಯದ ಜನರಿಗೆ ಮನವಿ ಮಾಡಿದೆ.

ಮತದಾನದ ಅವಧಿ ವಿಸ್ತರಣೆ : ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಹೆಚ್ಚುವರಿಯಾಗಿ ಒಂದು ಗಂಟೆ ಸಮಯಾವಕಾಶ ನೀಡಲಾಗಿದೆ. ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ ಮಾಡಿರುವುದರಿಂದ, ಬಿಸಿಲಿನ ಝಳ ಹೆಚ್ಚಾಗಿರುವ ರಾಯಚೂರು ಮತ್ತು ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಮತದಾರರಿಗೆ ಅನುಕೂಲವಾಗಲಿದೆ.

ಪೇದೆಗಳ ಗೋಳು : ಚುನಾವಣಾ ಕಾರ್ಯಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಮತದಾನದ ದಿನ ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕಾದ ಪೇದೆಗಳಿಗೆ ಆಹಾರ ಭತ್ಯೆಯಾಗಿ ಕೇವಲ 40 ರೂ. ನೀಡುತ್ತಿದ್ದು, ಇದು ಪೇದೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಪೇದೆಗಳಿಗೆ 50 ರೂ. ಮತ್ತು ಹೊರಗಿನ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಪೇದೆಗಳಿಗೆ 40 ರೂ. ಆಹಾರ ಭತ್ಯೆ ನೀಡುವುದಾಗಿ ಘೋಷಿಸಲಾಗಿದೆ. ಪ್ರತಿ ಪೇದೆಗೆ ಊಟ, ತಿಂಡಿ, ಪ್ರವಾಸ ಎಲ್ಲವೂ ಸೇರಿ 200 ರೂ ದಿನಭತ್ಯೆ ನಿಗದಿಗೊಳಿಸಲಾಗಿದೆ.

ಸುಮಾರು ಹದಿನಾರು ಗಂಟೆ ಕಾರ್ಯನಿರ್ವಹಿಸಬೇಕಾದ ಪೇದೆಗಳಿಗೆ ಭತ್ಯೆ ಹೆಚ್ಚಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ, ಚುನಾವಣಾ ಆಯೋಗ ಈ ಕುರಿತು ಯಾವುದೇ ಸೂಚನೆ ಹೊರಡಿಸಿಲ್ಲ.

ಲಕ್ಷ ಲಕ್ಷ ವಶ : ಮತದಾನಕ್ಕೆ ಕೆಲವು ಗಂಟೆಗಳು ಬಾಕಿ ಉಳಿದಿದ್ದರೂ ಹಣದ ಹರಿವು ಕಡಿಮೆ ಆಗಿಲ್ಲ ಶನಿವಾರವೂ ರಾಜ್ಯದ ಹಲವು ಕಡೆ ಲಕ್ಷಾಂತರ ರೂಪಾಯಿ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನೆಲಮಂಗಲದ ಬಿಜೆಪಿ ಅಭ್ಯರ್ಥಿ ಎಂ.ವಿ.ನಾಗರಾಜ್ ಅವರ ಆಪ್ತ ಸಹಾಯಕನ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಯಿಲ್ಲದ 3.6 ಲಕ್ಷ ರೂ.ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಚಿತ್ರದುರ್ಗ : ಚಳ್ಳಕೆರೆ ತಾಲೂಕಿನಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು 2.4 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವ ಪಕ್ಷಕ್ಕೆ ಸೇರಿದ ಹಣ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಮನೆಯಲ್ಲಿ ಖಾಲಿ : ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಲಕ್ಷಾಂತರ ರೂ. ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಬರಿಗೈಯಲ್ಲಿ ಹಿಂದಿರುಗಿದ್ದಾರೆ. ಯಡಿಯೂರಪ್ಪ ಅವರ ಮನೆಯಲ್ಲಿ ಸಾವಿರ ರೂಪಾಯಿಯೂ ಸಿಗಲಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.

ಮಂಡ್ಯದಲ್ಲಿ ಬಿತ್ತು ಧರ್ಮದೇಟು : ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ರೆಬಲ್ ಸ್ಟಾರ್ ಅಂಬರೀಶ್ ವಿರುದ್ಧ ಕರಪತ್ರ ಹಂಚುತ್ತಿದ್ದ ಇಬ್ಬರನ್ನು ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಇಬ್ಬರನ್ನು ಬಂಧಿಸಿರುವ ಪೊಲೀಸರು ನೂರಾರು ಕರಪತ್ರವನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಎಳನೀರು ವಶ : ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಚಿತವಾಗಿ 15 ಸೈಕಲ್ ಗಳಲ್ಲಿ ಹಂಚುತ್ತಿದ್ದ ಎಳನೀರನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಉಚಿತವಾಗಿ ಎಳನೀರು ಕುಡಿದವರಿಗೆ ಬಿಜೆಪಿ ಅಭ್ಯರ್ಥಿ ಪರವಾಗಿ ಮತಹಾಕಿ ಎಂದು ಹೇಳಿ, ಕರಪತ್ರ ವಿತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬಹಿಷ್ಕಾರದ ಬಿಸಿ : ರಾಯಚೂರು ಜಿಲ್ಲೆಯ ಲಿಂಗಸಗೂರು ಕ್ಷೇತ್ರದ ಮೂರು ಗ್ರಾಮಗಳ ಜನರು ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ. ಮನೆ-ಮನೆ ಪ್ರಚಾರಕ್ಕೆ ಬಂದಿದ್ದ ಕಾರ್ಯಕರ್ತರನ್ನು ಗ್ರಾಮದಿಂದ ಓಡಿಸಿದ್ದು, ಸ್ಥಳಕ್ಕೆ ಚುನಾವಣಾಧಿಕಾರಿಗಳು ಆಗಮಿಸಿ ಜನರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+