ಕಡ್ಡಾಯವಾಗಿ ಮತದಾನ ಮಾಡಿ : ಯೋಗ್ಯರನ್ನು ಆರಿಸಿ
ಇಪ್ಪನಾಲ್ಕು ದಿನಗಳು ನಡೆದ ರಾಜಕೀಯ ನಾಯಕರ ಆಟಾಟೋಪಗಳಿಗೆ ತೆರೆಬಿದ್ದಿದ್ದು, ಮತದಾನ ಮಾಡಲು ಕೇಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿ 35.38 ಲಕ್ಷ ಮಂದಿ ಹೊಸದಾಗಿ ಮತದಾನ ಮಾಡುತ್ತಿದ್ದಾರೆ.
2008ರ ಚುನಾವಣೆಯಲ್ಲಿ ಶೇ 64.68 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 100ರಷ್ಟು ಮತದಾನವಾಗುವಂತೆ ಮಾಡಲು ಆಯೋಗ ಹಲವಾರು ಕ್ರಮ ಕೈಗೊಂಡಿಗೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಬೀದಿ ನಾಟಕ ನಡೆಸಿ ಜಾಗೃತಿ ಮೂಡಿಸಲಾಗಿದೆ. ರೈಡ್ ಎ ಸೈಕಲ್ ಫೌಂಡೇಷನ್ ಜೊತೆಗೂಡಿ ಪ್ರತಿನಿತ್ಯ ಎರಡು ಕ್ಷೇತ್ರಗಳಲ್ಲಿ ಸೈಕಲ್ ಜಾಥಾ ನಡೆಸಲಾಗಿದೆ.
ಬನಶಂಕರಿ, ಜಯನಗರ, ಶಾಂತಿನಗರ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳ ಮೇಲೆ ಮತದಾನ ಮಾಡಿ ಎಂಬ ಜಾಗೃತಿ ಮೂಡಿಸುವ ಬಲೂನ್ ಹಾರಾಡುತ್ತಿದೆ. ಬಸ್ ನಿಲ್ದಾಣಗಳ ಟಿವಿಗಳಲ್ಲಿಯೂ ಮತದಾನ ಮಾಡಿ ಎಂಬ ಘೋಷವಾಕ್ಯ ಕೇಳಿ ಬರುತ್ತಿದೆ.
ಎನ್ಜಿಒಗಳ ಸಹಕಾರ : ಸುಶಿಕ್ಷತರು ಮತದಾನದಲ್ಲಿ ಹೆಚ್ಚು ಪಾಲ್ಗೊಳ್ಳುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಲು ಗಣ್ಯರು, ಸ್ವಯಂ ಸೇವಾ ಸಂಘಟನೆಗಳು ಮತದಾನದ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಗೆ ಮತ ಹಾಕುವಂತೆ ಮನವಿ ಮಾಡಿವೆ.
ಸರ್ಕಾರ ಮತ್ತು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನ ಕೈಗೊಂಡಿವೆ. ಜಿಲ್ಲಾಧಿಕಾರಿಗಳಿಂದ ಮನೆ ಮನೆಗೆ ವೈಯಕ್ತಿಕ ಪತ್ರ ರವಾನಿಸಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗಿದೆ.
ಬಳ್ಳಾರಿ ಎಕ್ಸ್ಪ್ರೆಸ್ : ಬಳ್ಳಾರಿ ಜಿಲ್ಲಾಡಳಿತ ಮತದಾರರನ್ನು ಮತಗಟ್ಟೆ ಬಾಗಿಲಿಗೆ ಕರೆದೊಯ್ಯಲು 'ವೋಟರ್ ಎಕ್ಸ್ಪ್ರೆಸ್' ಬಸ್ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ.
ದೂರದ ಪ್ರದೇಶದಲ್ಲಿರುವ ಜನರನ್ನು ಮತಗಟ್ಟೆಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆ ಇದಾಗಿದೆ. ಇದಕ್ಕಾಗಿ ಬಳ್ಳಾರಿ ಜಿಲ್ಲಾಡಳಿತ ಹಾಗೂ ಕೆಎಸ್ಆರ್ ಟಿಸಿ ಜಂಟಿಯಾಗಿ ಈ ವ್ಯವಸ್ಥೆ ಮಾಡಿವೆ.
ಮೇ 5ರ ಬೆಳಗ್ಗೆಯಿಂದ ಮತದಾನ ಪೂರ್ಣಗೊಳ್ಳುವ ದಿನದ ಸಂಜೆ 5 ಗಂಟೆವರೆಗೆ ವೋಟರ್ ಎಕ್ಸ್ಪ್ರೆಸ್ ಸಂಚರಿಸಲಿವೆ. ಬಳ್ಳಾರಿ ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಅರ್ಹ ಮತತದಾರರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂಬುದು ಒನ್ ಇಂಡಿಯಾ ಕನ್ನಡದ ಮನವಿಯೂ ಹೌದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ