ಚುನಾವಣೆಗೆ 2ದಿನ ಮುನ್ನ ಬಿಜೆಪಿಗೆ ತೊಡೆತಟ್ಟಿದ ಬಿಎಸ್ವೈ
ಶಿವಮೊಗ್ಗ, ಮೇ 3: ಚುನಾವಣೆಗೆ ಎರಡು ದಿನ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಗೆ ಮತ್ತೆ ತೊಡೆ ತಟ್ಟಿ ಹೂಂಕರಿಸಿದ್ದಾರೆ. ರಾಷ್ಟ್ರೀಯ ಪಕ್ಷವಾದ ನೀವು ಮುಂಬರುವ ಚುನಾವಣೆಯಲ್ಲಿ 40 ಸ್ಥಾನ ಗೆದ್ದು ಬನ್ನಿ ನೊಡೋಣ ಎಂದು ಸವಾಲೆಸೆದಿದ್ದಾರೆ.
ಮೇ ಎಂಟರಂದು ಹಲವು ಬಿಜೆಪಿ ಮುಖಂಡರು ಮನೆ ಸೇರಲಿದ್ದಾರೆ. ಈ ಯಡಿಯೂರಪ್ಪ ಎಂದೂ ಕಾಟಾಚಾರದ ರಾಜಕೀಯ ಲೆಕ್ಕಾಚಾರ ಮಾಡಿದವನಲ್ಲ. ನನ್ನ ಇದುವರೆಗೆ ರಾಜಕೀಯ ಲೆಕ್ಕಾಚಾರ ಎಂದೂ ಸುಳ್ಳಾಗಿಲ್ಲ. ಈ ಬಾರಿಯೂ ಸುಳ್ಳಾಗುವುದಿಲ್ಲ. ನಾನು ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುತ್ತೇನೆ. ಬಿಜೆಪಿ ನಾಮ ನಿಶಾನೆ ಇಲ್ಲದೆ ನಿರ್ನಾಮವಾಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ನಾನೇ ಮುಂದಿನ ಮುಖ್ಯಮಂತ್ರಿ ಅಥವಾ ನನ್ನ ಪಕ್ಷವೇ ಮುಂದಿನ ಸರಕಾರ ರಚನೆಗೆ ನಿರ್ಣಾಯಕವಾಗಲಿದೆ. ನನ್ನ ಬೆನ್ನಿಗೆ ಚೂರಿ ಹಾಕಿದವರ ರಾಜಕೀಯ ಭವಿಷ್ಯಕ್ಕೆ ಈ ಚುನಾವಣೆಯಲ್ಲಿ ಮತದಾರರು ಇತಿಶ್ರೀ ಹಾಡಲಿದ್ದಾರೆ. ರಾಜ್ಯ ಪ್ರವಾಸ ಸಮಯದಲ್ಲಿ ಜನತೆ ನನ್ನ ಮೇಲೆ ತೋರುತ್ತಿರುವ ಪ್ರೀತಿ ನನ್ನನ್ನು ಮತ್ತಷ್ಟು ಯುವಕನನ್ನಾಗಿ ಮಾಡಿದೆ.
ಎಪ್ಪತ್ತರ ಈ ವಯಸ್ಸಿನಲ್ಲಿ ನಮ್ಮ ರಾಜ್ಯದ ಯಾವ ರಾಜಕಾರಿಣಿ ನನ್ನ ಹಾಗೆ ಜನರ ಜೊತೆ ಬೆರೆಯುತ್ತಾನೆ. ಮತದಾರರೇ ನನ್ನ ಶಕ್ತಿ. ಫಲಿತಾಂಶ ಬಂದ ನಂತರ ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ಚಾಲನೆಗೆ ಕಾರ್ಯ ಪ್ರವೃತ್ತ ನಾಗುತ್ತೇನೆ. ನನ್ನ ಚುನಾವಣಾ ಪ್ರಚಾರಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದು ಕೆಜೆಪಿಗೆ ಮತವಾಗಿ ತಿರುಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಆಡ್ವಾಣಿ, ಮೋದಿ, ಕಾಂಗ್ರೆಸ್ ಜೊತೆ ಹೊಂದಾಣಿಕೆ, ಈಶ್ವರಪ್ಪ ಮುಂತಾದವರ ಬಗ್ಗೆ ಬಿಎಸ್ವೈ ಹೇಳಿದ್ದು ಹೀಗೆ..
ಎಲ್ ಕೆ ಆಡ್ವಾಣಿ
ಧನಂಜಯ್ ಕುಮಾರ್ ಆಡ್ವಾಣಿ ಬಗ್ಗೆ ಮಾತಾಡಿದ್ದಕ್ಕೆ ಬೇಸರವಿದೆ. ನಾನು ಕಂಡ ಸಜ್ಜನ ರಾಜಕಾರಿಣಿಯಲ್ಲಿ ಆಡ್ವಾಣಿ ಕೂಡಾ ಒಬ್ಬರು. ನಾನು ಬಿಜೆಪಿ ತೊರೆದ ನಂತರ ಬಿಜೆಪಿ ಶುದ್ದವಾಯಿತು ಎಂದು ಅವರು ಹೇಳುತ್ತಾರೆ. ಅದು ಅವರ ಮಾತಲ್ಲ, ಅವರ ಕಿವಿಚುಚ್ಚುವವರ ಮಾತು. ಆಡ್ವಾಣಿ ಇಂದಲ್ಲಾ ನಾಳೆ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ.
ಕಾಂಗ್ರೆಸ್ ಜೊತೆ ಹೊಂದಾಣಿಕೆ
ಬಿಜೆಪಿ ಮತ್ತು ಜೆಡಿಎಸ್ಸಿಗೆ ಹೋಲಿಕೆ ಮಾಡಿದರೆ ನನ್ನ ಪಕ್ಷಕ್ಕೂ ಮತ್ತು ಕಾಂಗ್ರೆಸ್ಸಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಕೆಜೆಪಿ ಉದಯವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಲಾಭ ಮಾಡಿಕೊಡಲು ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಈಗಾಗಲೇ ನಾನು ಹೇಳಿದ್ದೇನೆ, ನಾನೇ ಮುಂದಿನ ಸಿಎಂ ಅಥವಾ ನನ್ನ ಜೊತೆ ಹೊಂದಾಣಿಕೆಯಿಲ್ಲದೆ ಯಾರೂ ಸರಕಾರ ರಚಿಸಲಾಗುವುದಿಲ್ಲ.
ಕೆ ಎಸ್ ಈಶ್ವರಪ್ಪ
ನೋಡುತ್ತಿರಿ. ಶಿವಮೊಗ್ಗದಲ್ಲಿ ಖುದ್ದು ಈಶ್ವರಪ್ಪ ಮತ್ತು ಜಿಲ್ಲೆಯಲ್ಲಿ ಬಿಜೆಪಿ ನೆಲಕಚ್ಚಲಿದೆ. ಚುನಾವಣೆಯ ನಂತರ ಈಶ್ವರಪ್ಪ ಅಸೆಂಬ್ಲಿಗೆ ಕಾಲಿಡುವ ತೊಂದರೆ ಮತದಾರರು ಕೊಡುವುದಿಲ್ಲ. ಅವರು ಮನೆಯಲ್ಲೇ ಇರುತ್ತಾರೆ. ಇದು ಖಂಡಿತ.
ನನಗೆ ಕೊನೇ ಕ್ಷಣದಲ್ಲಿ ಕೈಕೊಟ್ಟವರು
ನನ್ನ ಬೆನ್ನಿಗೆ ಚೂರಿ ಬಹಳಷ್ಟು ಮಂದಿ ಹಾಕಿದರು. ಆದರೆ ನನಗೆ ಮೂವರ ಮೇಲೆ ಬಹಳ ಬೇಸರವಿದೆ. ನಿರಾಣಿ, ಬೊಮ್ಮಾಯಿ ಮತ್ತು ಉಮೇಶ್ ಕತ್ತಿ. ಬೊಮ್ಮಾಯಿ ಸ್ಪರ್ಧಿಸುತ್ತಿರುವ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿದ್ದೆ. ಮೂವತ್ತು ಸಾವಿರ ಜನ ಸೇರಿದ್ದರು. ಕೋಟಿ ಕೋಟಿ ಖರ್ಚು ಮಾಡಿದರೂ ಬೊಮ್ಮಾಯಿ ಜಯಗಳಿಸುವುದು ಕಷ್ಟವಿದೆ. ಇರಲಿ ಮೂವರಿಗೂ ನಾನು ಏನೂ ಕೇಡನ್ನು ಬಯಸುವುದಿಲ್ಲ.
ನರೇಂದ್ರ ಮೋದಿ
ಮೋದಿ ಮತ್ತು ನನ್ನ ಸಂಬಂಧ ಉತ್ತಮವಾಗಿದೆ. ಮೋದಿಗೆ ರಾಜ್ಯದಲ್ಲಿ ಬಿಜೆಪಿ ಹಣೆಬರಹ ಗೊತ್ತಿದೆ. ಪಕ್ಷಕ್ಕಾಗಿ ಪ್ರಚಾರಕ್ಕೆ ಬರದೇ ಬೇರೆ ವಿಧಿಯಿಲ್ಲ. ಮೋದಿ ಮುಂದಿನ ಪಿಎಂ ಎಂದು ಗುರುತಿಸಲಾಗುತ್ತಿದೆ. ಇದಕ್ಕೆ ನನ್ನ ಅಭ್ಯಂತರವೇನೂ ಇಲ್ಲ.
ಬಿಜೆಪಿ
ನನಗೆ ಬಿಜೆಪಿಯ ಕೆಲವು ರಾಷ್ಟ್ರ ಮತ್ತು ರಾಜ್ಯ ನಾಯಕರ ಮೇಲೆ ಸಿಟ್ಟೇ ಹೊರತು ಬಿಜೆಪಿಯ ಮೇಲಲ್ಲ. ಒಂದಂತೂ ಸತ್ಯ, ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಈಗಲೂ ನನ್ನನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಲೇ ಇದೆ.
ಪರಮೇಶ್ವರ್, ಸಿದ್ದರಾಮಯ್ಯ
ಈ ಇಬ್ಬರೂ ನಾಯಕರು ವೃಥಾ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನ್ಯಾಯಾಲಯ ಕ್ಲೀನ್ ಚಿಟ್ ನೀಡಿದ ಮೇಲೂ ಇವರ ಆರೋಪ ಮುಂದುವರಿದಿದೆ. ಈ ಇಬ್ಬರೂ ನಾಯಕರು ಚುನಾವಣೆಯಲ್ಲಿ ಸೋಲಲಿದ್ದಾರೆ.