ರೇವಣ್ಣ ಪುತ್ರ ಪ್ರಜ್ವಲ್ ಎಂಟ್ರಿಗೆ ಗೌಡ್ರು ಒಪ್ಪಿದ್ರಾ?
ಹೊಳೆನರಸೀಪುರ ಜೆಡಿಎಸ್ ಅಭ್ಯರ್ಥಿ ಪತಿ ರೇವಣ್ಣ ಪರ ರೋಡ್ ಶೋ ನಡೆಸಿದ ನಂತರ ಸುಭಾಷ್ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಭವಾನಿ ರೇವಣ್ಣ, ಹೊಳೆನರಸೀಪುರದಲ್ಲಿ ಇನ್ನು ಮುಂದೆ ರೇವಣ್ಣನವರ ನಂತರ ಪ್ರಜ್ವಲ್ ಅವರೇ ಮುಂದಿನ ನಾಯಕ ಎಂದು ನಿಮ್ಮೆಲ್ಲರ ಎದುರು ಘೋಷಣೆ ಮಾಡುತ್ತಿದ್ದೇನೆ ಎಂದರು.
ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರ ಹಾಗು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಈ ಪರಂಪರೆ ಮುಂದುವರಿಸಲು ಪುತ್ರ ಪ್ರಜ್ವಲ್ರೇವಣ್ಣ ಅವರನ್ನು ರಾಜಕೀಯಕ್ಕೆ ಇಳಿಸುತ್ತಿರುವುದಾಗಿ ಹೇಳಿದರು.
ಇನ್ನು ಮುಂದೆ ಕ್ಷೇತ್ರದಲ್ಲಿನ ಪ್ರತಿಯೊಬ್ಬರ ಸಮಸ್ಯೆಗಳಿಗೆ ಪ್ರಜ್ವಲ್ ಸ್ಪಂದಿಸಲಿದ್ದಾರೆ. ಇನ್ನು ಮುಂದೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾವು, ತಮ್ಮ ಪತಿ ರೇವಣ್ಣ ಹಾಗೂ ಪ್ರಜ್ವಲ್ ನಾಲ್ವರೂ ಸಿದ್ಧರಿದ್ದೇವೆ ಎಂದು ಭವಾನಿ ಅವರು ಭರವಸೆ ನೀಡಿದರು.
ಪ್ರಜ್ವಲ್ ಸಕಲೇಶಪುರ ಹಾಗೂ ಬೇಲೂರುಗಳಲ್ಲಿ ಯುವಕರ ಸಭೆ ನಡೆಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಸುಳಿವು ನೀಡಿದ್ದರು.ಈ ಮುನ್ನ ತಮ್ಮ ತಾಯಿ ಭವಾನಿ ಅವರನ್ನು ಬೇಲೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಇನ್ನಿಲ್ಲದ ಸಾಹಸ ಪಟ್ಟು ಒಂದು ಹಂತದ ಗೆಲುವು ಸಾಧಿಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ದೇವೇಗೌಡರ ಮಧ್ಯ ಪ್ರವೇಶದಿಂದ ವಿಚಿತ್ರ ತಿರುವು ಪಡೆಯಿತು.
ಕಗ್ಗಂಟ್ಟಾಗಿದ್ದ ಬೇಲೂರು ವಿಧಾನಸಭಾ ಟಿಕೆಟ್ ಹಂಚಿಕೆಯನ್ನು ಗೌಡ್ರು ಇಟ್ಟ ನಡೆ ಅವರ ನಿಷ್ಠಾವಂತನನ್ನು ಕಳೆದುಕೊಳ್ಳುವಂತೆ ಮಾಡಿತು. ಮನೆ ಸೊಸೆ ಮುನಿಸಿಗೂ ಕಾರಣವಾಗಿತ್ತು.
ಭವಾನಿ ಮೇಡಂ ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತಿದೆ. ಹಾಸನದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಎನ್ನಲಾಗಿದೆ. ಬೇಲೂರು ಸಿಕ್ಕರೆ ಭವಾನಿ ಮೇಡಂ ಸೇಫ್. ಪುತ್ರ ಪ್ರಜ್ವಲ್ ಸದ್ಯಕ್ಕೆ ಕಣಕ್ಕಿಳಿಯುತ್ತಿಲ್ಲ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ಕೇಳಿ ಕ್ಷೇತ್ರದ ಹಳೆಹುಲಿ ಜವರೇಗೌಡ ಅವರು ಮೆತ್ತಗಾಗಿದ್ದರು.
ಆದರೆ, ನಂತರ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್ ಕೆ ಜವರೇಗೌಡ ಕಣ್ಣೀರಿಟ್ಟು ಪಕ್ಷ ತೊರೆದಿದ್ದರು. ಜೆಡಿಎಸ್ ಯುವ ಕಾರ್ಯಕರ್ತ ಕೂಡಾ ಆಗದಿರುವ ಪ್ರಜ್ವಲ್ ಅವರ ಜನಪ್ರಿಯತೆಗೇನೂ ಕಮ್ಮಿಯಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಜ್ವಲ್ ಪ್ರಚಾರ ಕೂಡಾ ನಡೆಸಿದ್ದರು.
ಬೇಲೂರು ಕ್ಷೇತ್ರಕ್ಕೆ ಬೇಲೂರು ಮೂಲದವರನ್ನೇ ಆಯ್ಕೆಮಾಡಲಾಗುತ್ತದೆ ಎಂದು ಎಲ್ಲೆಡೆ ಪ್ರಜ್ವಲ್ ಪ್ರಚಾರ ಮಾಡತೊಡಗಿದ್ದರು. ಈ ಮೂಲಕ ತನ್ನ ತಾಯಿ ಸ್ಪರ್ಧೆಗೆ ಅಖಾಡ ಸಿದ್ಧಪಡಿಸಿ, ಪರೋಕ್ಷವಾಗಿ ಜವರೇ ಗೌಡರೇ ಇದು ನಿಮ್ಮ ಕ್ಷೇತ್ರವಲ್ಲ ಎಂದು ಸೂಚಿಸಿದ್ದರು. ಪ್ರಜ್ವಲ್ ಸಾಹಸ ವ್ಯರ್ಥವಾಗಿತ್ತು.
ಆದರೆ, ಈಗ ಪ್ರಜ್ವಲ್ ಅವರ ರಾಜಕೀಯ ಪ್ರವೇಶದ ಸುಳಿವನ್ನು ಭವಾನಿ ಅವರೇ ನೀಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೂ ಮುನ್ನ ಪ್ರಜ್ವಲ್ ರಾಜಕೀಯ ಪ್ರವೇಶ ಮಾತುಗಳು ಕೇಳಿ ಬಂದಿರುವುದು ಕೊಂಚ ಅಚ್ಚರಿಯಾದರೂ ನಿರೀಕ್ಷಿತ.
ಈ ನಡುವೆ ಜೆಡಿಎಸ್ ಶಾಸಕಿ, ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹೊಂಗನೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಸಂದರ್ಭದಲ್ಲಿ ಮಾವ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಳಿ ವಯಸ್ಸಿನಲ್ಲೂ ಸಕ್ರಿಯವಾಗಿರುವುದ್ದಾರೆ. ಅವರಿಗೆ ವಿಶ್ರಾಂತಿಯೆ ಇಲ್ಲ ಎಂದು ಗಳಗಳನೆ ಅತ್ತ ಘಟನೆ ನಡೆದಿದೆ.