ಯಡಿಯೂರಪ್ಪ ಅವರ ತೃತೀಯ ರಂಗ ಈಗ್ಲೇ ಠುಸ್

ವಿಧಾನಸಭಾ ಚುನಾವಣೆಯ ನಂತರ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗಕ್ಕೆ ಚಾಲನೆ ನೀಡಲಾಗುವುದು ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದರು.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಭವಿಷ್ಯವಿಲ್ಲ, ಈ ಪಕ್ಷಗಳು ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವುದಿಲ್ಲ ಆದ್ದರಿಂದ ತೃತೀಯ ರಂಗ ಒಕ್ಕೂಟ ರಚನೆಯ ಮೂಲಕ ರಾಷ್ಟ್ರದ ಎಲ್ಲ ರಾಜ್ಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸಲಾಗುವುದು.
ರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಅಧಿಕಾರ ಹಿಡಿಯಬೇಕಿದೆ. ಹೈಕಮಾಂಡ್ ಸಂಸ್ಕೃತಿ ಸಂಪೂರ್ಣ ನಾಶ ಹೊಂದಬೇಕಿದೆ. ಹೈಕಮಾಂಡ್ ಸಂಸ್ಕೃತಿ ನಿರ್ಮೂಲನೆ ನಮ್ಮ ಗುರಿ ಎಂದು ಯಡಿಯೂರಪ್ಪ ಹೇಳಿದ್ದರು.
ಜೆಡಿಯು ಉತ್ತರ: ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ಕುಮಾರ್ ಶ್ರೀವಾಸ್ತವ್ ಅವರು ಹೇಳಿಕೆ ನೀಡಿ, ಕೇವಲ ಒಂದು ರಾಜ್ಯದಲ್ಲಿ ಹತ್ತಾರು ಸೀಟು ಪಡೆದು ತೃತೀಯ ರಂಗ ಕಟ್ಟುತ್ತೇನೆ ಎಂಬುದು ಕನಸಿನ ಮಾತು. ಇದರಲ್ಲಿ ಐದಾರು ರಾಜ್ಯಗಳಲ್ಲಿ ಪಕ್ಷದ ಎಂಎಲ್ಎ, ಎಂಪಿಗಳು ಇರಬೇಕು. ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿ ತೃತೀಯರಂಗ ಕಟ್ಟಲು ಮುಂದಾದ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಅವರಿಗೆ ಆದ ಗತಿಯೇ ಯಡಿಯೂರಪ್ಪರಿಗೂ ಆಗಲಿದೆ ಎಂದು ಎಚ್ಚರಿಸಿದ್ದಾರೆ.
ಜೆಡಿಯು ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 35 ವರ್ಷ ಒಳಗಿನ ಯುವ ನಾಯಕರನ್ನು ಕಣಕ್ಕೆ ಇಳಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿ, ಹೊಸ ಬದಲಾವಣೆ ತರಲು ಹೊರಟಿದೆ ಎಂದರು.
ಎಐಎಡಿಎಂಕೆ, ಸಮಾಜವಾದಿ ಪಕ್ಷ, ಬಿಜೆಡಿ, ಜೆಡಿಯು ಕೂಡಾ ಅವಕಾಶವಾದಿ ರಾಜಕಾರಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಹಿಂದೆ ಮುಂದೆ ಸುತ್ತುತ್ತಿರುವುದು ಸುಳ್ಳಲ್ಲ. ಹೀಗಾಗಿ ತೃತೀಯ ರಂಗ ರಚನೆಯಲ್ಲಿ ಅರ್ಥವಿರುವುದಿಲ್ಲ ಎಂದು ಪ್ರಕಾಶ್ ಕಾರಟ್ ಹೇಳಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪರಸ್ಪರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಜನರಿಗೆ ಗೊಂದಲ ಮೂಡಿಸುತ್ತಿವೆ. ಸಮಾಜವಾದಕ್ಕೆ ಬೆಲೆ ಇಲ್ಲದ್ದಂತಾಗಿದೆ. ಕರ್ನಾಟಕದಲ್ಲಿ ನಿರುದ್ಯೋಗ, ಬಡತನ, ಬರ, ಆರ್ಥಿಕ ಸುಧಾರಣೆ ಸಾಧ್ಯವಾಗದಂತೆ ಎರಡು ಪಕ್ಷಗಳು ತಡೆ ಹಿಡಿದಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸುವುದು ಖಚಿತ. ಆದರೆ, ಬಿಜೆಪಿಗೆ ಇದರಿಂದ ಏನು ಲಾಭವಿಲ್ಲ ಎಂದು ಕಾರಟ್ ಹೇಳಿದರು.












Click it and Unblock the Notifications